ಬೆಂಗಳೂರಿನ ಕರ್ನಾಟಕ ಸರ್ವೋದಯ ಮಂಡಳಿ ಮತ್ತು ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಯುಕ್ತಾಶ್ರಯದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ಸ್ವತಂತ್ರ ಭಾರತದ ಇಂದಿನ ಸ್ಥಿತಿ-ಗತಿ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶೇಷಾದ್ರಿಪುರಂನ ಪ್ರೌಢಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸ ನೀಡಿದ ಮಲ್ಲೇಶ್ವರಂ ಎಂ.ಎಲ್.ಎ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಗಣಪತಿ ಹೆಗಡೆ ಅವರು, ಸ್ವಾತಂತ್ರ್ಯದ ಇಂದಿನ ಸ್ಥಿತಿ ಗತಿ ಬಗ್ಗೆ ತಿಳಿಸಿದರು.
ನಮ್ಮ ಜೀವನದ ಮಂತ್ರ ಏನಾಗಿರಬೇಕೆಂದರೆ, ನಾನು ಇವತ್ತಿಗಿಂತ ನಾಳೆ ಚೆನ್ನಾಗಿ ಬದುಕಬೇಕು ಹಾಗೂ ಚೆನ್ನಾಗಿ ಇರಬಲ್ಲೆ ಎಂಬುವುದನ್ನು ಅರಿಯಬೇಕು. ಹಾಗೆಯೇ ಕೃತಿಗಳನ್ನು ಜಾಸ್ತಿಯಾಗಿ ಓದಬೇಕು. ಆಗ ನಾವು ಸದೃಢರಾಗಬಹುದು ಎಂದು ಅಭಿಪ್ರಾಯಪಟ್ಟರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌ.ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡುತ್ತ, ಗಾಂಧೀಜಿಯವರ ಚಿಂತನೆಗಳು ಆಧುನಿಕ ಭಾರತದಲ್ಲಿ ತುಂಬಾ ಪ್ರಸ್ತುತ ಅವರ ಕ್ರಿಯಾಶೀಲ ಚಿಂತನೆಗಳನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಗಾಂಧೀಜಿಯವರ ಚಿಂತನೆಗಳು ರಚನಾತ್ಮಕವಾಗಿರುವುದರಿಂದ ಅವುಗಳನ್ನು ಎಲ್ಲಾ ಕ್ಷೇತ್ರಗಳಲ್ಲೂ ಪ್ರಯೋಗಿಸಲು ಸಾಧ್ಯ.
ಇಡೀ ವಿಶ್ವಕ್ಕೆ ಗಾಂಧೀಜಿಯವರ ಬೋಧನೆ ಹಾಗೂ ಚಿಂತನೆಗಳನ್ನು ಪಸರಿಸುವುದು, ಪ್ರತಿಯೊಬ್ಬ ಭಾರತೀಯನೂ ಗಾಂಧೀಜಿಯವರ ಬಗ್ಗೆ ಅತ್ಯಂತ ಆಳವಾಗಿ ತಿಳಿದುಕೊಳ್ಳುವಂತೆ ಮಾಡುವುದು ಮತ್ತು ಭಾರತದ ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಗಾಂಧೀಜಿಯವರು ತೋರಿಸಿರುವ ಮಾರ್ಗೋಪಾಯಗಳನ್ನು ಅನುಸರಿಸುವಂತೆ ಜನರಿಗೆ ಯೋಗ್ಯ ತಿಳಿವಳಿಕೆ ನೀಡುವುದು ಅಗತ್ಯ ಅನಿವಾರ್ಯಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ವೋದಯ ಮಂಡಲದ ಹೆಚ್.ಎಸ್. ಸುರೇಶ್, ಯ.ಚಿ. ದೊಡ್ಡಯ್ಯ , ಗುರುರಾಜ ಪೋಶೆಟ್ಟಿಹಳ್ಳಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.