spot_img
spot_img

ಸತ್ಯದ ಸಮಾಧಿಯ ಮೇಲೆ ಸುಳ್ಳಿಗೆ ಪಟ್ಟಕಟ್ಟಿದ ಲಿಂಗಾಯತರು

Must Read

    ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಸ್ಥಾಪಿಸಿದ ವರ್ಗ ವರ್ಣ ಆಶ್ರಮ ಲಿಂಗ ಭೇದರಹಿತ ಸಾರ್ವತ್ರಿಕ ಸಮಾನತೆ ಸಾರುವ ಸಾಂಸ್ಥಿಕರಣವಲ್ಲದ ಮಠ ಆಶ್ರಮವನ್ನು ಧಿಕ್ಕರಿಸಿದ ಪೌರೋಹಿತ್ಯವಿಲ್ಲದ  ಮುಕ್ತ ಸ್ವತಂತ್ರ ಧರ್ಮವೇ ಲಿಂಗಾಯತ ಧರ್ಮವಾಗಿದೆ . ವರ್ಣ ಸಂಕರದ ನೆಪ ಮಾಡಿ ಕಲ್ಯಾಣ ಚಾಲುಕ್ಯರ ಮತ್ತು ಕಳಚೂರ್ಯರ ಆಂತರಿಕ ಕಲಹವು ಸ್ಪೋಟಗೊಂಡು ಬಿಜ್ಜಳನ ಕೊಲೆಗೆ ಕಾರಣವಾಯಿತು ,ಈ ಕೊಳೆಯನ್ನು ಶರಣರ ತಲೆಗೆ ಕಟ್ಟಿದರು. ಬ್ರಾಹ್ಮಣ ಸನಾತನವಾದಿಗಳು ವಚನಗಳಿಗೆ ಬೆಂಕಿ ಹಚ್ಚಿ ಸೋವಿದೇವನ ಸೈನ್ಯದ ಬಲದಿಂದ ಶರಣರ ಕಗ್ಗೊಲೆಯನ್ನು ಆರಂಭಿಸಿದರು .
ಶರಣರು ಅಳಿದುಳಿದ ವಚನಗಳನ್ನು ಕಟ್ಟಿಕೊಂಡು ಬೇರೆ ಬೇರೆ ದಿಕ್ಕಿಗೆ ಪಲಾಯನಗೊಂಡರು ಅತ್ತ ಕೂಡಲಸಂಗಮದಲ್ಲಿ  ಬಸವಣ್ಣನವರು ಐಕ್ಯವಾಗಿದ್ದರು . ಮುಂದೆ ಮುನ್ನೂರು ವರುಷಗಳ ವರೆಗೆ   ಅನಾಥ ಪ್ರಜ್ಞೆಯಲ್ಲಿದ್ದ ವಚನಗಳನ್ನು ಹೆಕ್ಕಿ ಸಂಸ್ಕರಿಸಿ ಪುನುರುಜ್ಜೀವನ   ಕೊಟ್ಟಿದ್ದು ಎಡೆಯೂರ ಸಿದ್ಧಲಿಂಗ ಯತಿಗಳು. ನಂತರದಲ್ಲಿ ಬಂದ ಶೈವ ಪಂಥದವರು ಈ ವಚನಗಳನ್ನು ತಮ್ಮ ಸೊತ್ತಾಗಿ ಮಾಡಿಕೊಂಡು ಓಲೆ ಮಠ ಸಾಲಿಮಠ ಹಿರೇಮಠಗಳು  ಹೀಗೆ ವಚನನಗಳನ್ನು ತಮ್ಮ  ತಮ್ಮ ಆಚರಣೆಗೆ ತಕ್ಕಂತೆ ವಿರೂಪಗೊಳಿಸಿ ಸಂಸ್ಕೃತ ಸೇರ್ಪಡೆ ವೀರಶೈವ ಪದ ಬಳಕೆ ಮಾಡಿ ಇಲ್ಲದ ಸಂಪ್ರದಾಯಗಳನ್ನು ಯಥಾವತ್ತಾಗಿ ಶರಣರ ವಚನಗಳಲ್ಲಿ ಇಟ್ಟರು . ಜನಪದಿಗರಿಗೆ ಬಸವಣ್ಣನವರ ಮೇಲಿನ ಪ್ರೀತಿಯಿಂದ ಇಂತಹ ಮತಗಳನ್ನು ಹದಿನಾರನೆಯ  ಶತಮಾನದಿಂದ ಪೋಷಿಸಿಕೊಂಡು ಬಂದವು .

- Advertisement -

ಶರಣರ ಸಮತೆಯ ಆಶಯವನ್ನು ಸಂಪೂರ್ಣ ಸಮಾಧಿ ಮಾಡಿ ಶ್ರೇಣೀಕೃತ ವ್ಯವಸ್ಥೆಯನ್ನು ಹುಟ್ಟು ಹಾಕಿ ಚಲನ ಶೀಲತೆಯ ಜಂಗಮ ಅರ್ಥವನ್ನು ವಿರೂಪಗೊಳಿಸಿ ಭಕ್ತರನ್ನು ಧಾರ್ಮಿಕ  ಗುಲಾಮಗಿರಿಗೆ  ಒಳಪಡಿಸಿ ತಮ್ಮ ಅಟ್ಟಹಾಸವನ್ನು ಮೆರೆದರು ಸನಾತನ ಜಾತಿ ಜಂಗಮರು. ಮಠಗಳು ಆರಂಭದಲ್ಲಿ ಶಿಕ್ಷಣ ಆರೋಗ್ಯ ಪ್ರಸಾದ ಸೇವೆ ಅಕ್ಷರ ದಾಸೋಹದಂತಹ ಪುಣ್ಯ ಕಾರ್ಯಗಳಿಗೆ ಬಳಸಿದರು . ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ,ಮುರುಗೋಡ  ಮಹಾಂತ ಸ್ವಾಮೀಜಿಯವರು ಮತ್ತು ಕೆಲ ಬೆರಣಿಕೆಯ  ವಿರಕ್ತ ಮಠಗಳು  ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿವೆ .

ಬದಲಾದ ಕಾಲಘಟ್ಟದಲ್ಲಿ ಇಂದು ಮಠಗಳು ಸಂಪೂರ್ಣ ವ್ಯವಹಾರ ಕೇಂದ್ರಗಳಾಗಿವೆ ,ರಾಜಕಾರಣಿಗಳಿಗೆ ಬೇಕಾದ ವೋಟ್ ಬ್ಯಾಂಕ ಮಠಗಳು ಮತ್ತು ಜಾತಿ ಲೆಕ್ಕಾಚಾರ. ಭ್ರಷ್ಟ ರಾಜಕಾರಣಿಗಳಿಗೆ ಆಶ್ರಯವಾದ ಮಠಗಳು ಜನರ ಏಳಿಗೆಯನ್ನು ಏನು ಬಯಸುವವು ? ಕಾವಿ ಲಾಂಛನ ಮಠಗಳನ್ನು ತರಾಟೆಗೆ ತಗೆದುಕೊಂಡಿದ್ದ ಶರಣರು ಇಂದು ಅವರ ಆಧೀನದಲ್ಲಿ ಬದುಕಬೇಕಾದ ಪರಿಸ್ಥಿತಿ ಬಂದು ಒದಗಿದೆ. ಸ್ಥಾವರವನ್ನು ವಿರೋಧಿಸಿದ ಬಸವಣ್ಣ ಮತ್ತು ಎಲ್ಲ ಶರಣರ ಮೂರ್ತಿಗಾಗಿ  ನೂರಾರು ಕೋಟಿ  ಹಣವನ್ನು ಸುರುವುತ್ತಿರುವುದು ಇಂತಹ ವಿಪರ್ಯಾಸವು. ಪೂಜೆ ಹವನ ಅಭಿಷೇಕ   ಹೋಮ ಯಜ್ಞಗಳನ್ನು  ಕೋಟಿ ಬಿಲ್ವಾರ್ಚನೆ  ಲಕ್ಷ ದೀಪೋತ್ಸವ ಮುಂತಾದ ಮೌಢ್ಯ ಪದ್ದತಿಗಳನ್ನು ತಿರಸ್ಕರಿಸಿದ ಶರಣರ ಸಂಪ್ರದಾಯ  ಮಠದಲ್ಲಿ
ಇಂದು  ಮುಲಾಜಿಲ್ಲದೆ ಆಚರಣೆಗಳು ಸಾಂಗವಾಗಿ ನಡೆಯುತ್ತಿವೆ. ಜ್ಞಾನದ ಪರಮೋಚ್ಚ ಕ್ರಿಯೆ ಪಾದೋದಕ ಅದನ್ನು ಕಾಲು ತೊಳೆದು ಕುಡಿಯುವ ಹೊಲಸು ನೀರಿಗೆ ಕಲ್ಪಿಸಿ ಅದನ್ನು ಭಕ್ತರ ಬಾಯಿಗೆ ಹಾಕಿ ಮತ್ತೆ ದಾಸ್ಯತ್ವವನ್ನು ಪೋಷಿಸಿದ್ದಾರೆ ನಮ್ಮ ಸ್ವಾಮಿಗಳು. ಇನ್ನು ಗುರು ಪೂರ್ಣಿಮೆ ಬಂತೆಂದರೆ ಸಾಕು ದುಡ್ಡಿನ ಆಶೆಗೆ ಕಾಲು ತೊಳೆಸಿಕೊಂಡು  ಹಣ ಮಾಡುವ ಬಹುತೇಕ ಮಠಾಧೀಶರು ಅಕ್ಕನವರು  ಶರಣರ ತತ್ವಗಳಿಗೆ ತಿಲಾಂಜಲಿ ಇಟ್ಟಿದ್ದಾರೆ .

ಪುರಾಣವನ್ನು ಪುಂಡರ ಗೋಷ್ಠಿ ,ತರ್ಕವೆಂಬುದು ಟಗರಿನ ಕಾಳಗ ಶಾಸ್ತ್ರ ಸಂತೆಯ ಮಾತು ಎಂದು ವಿಡಂಬಿಸಿದ ಶರಣರ ತತ್ವಗಳನ್ನು ಗಾಳಿಗೆ ತೂರಿ ಪ್ರವಚನ ಪೂಜೆ ಶಾಸ್ತ್ರ ಮುಂತಾದ ಆಚರಣೆ ಪಠಣದಲ್ಲಿ ತೊಡಗಿ ಭಕ್ತರನ್ನು ತೊಡಗಿಸಿದ್ದಾರೆ ಸ್ವಾಮಿಗಳು ಅಕ್ಕನವರು . ಸೂರ್ಯ ಉದಯಿಸುವ ದಿಕ್ಕು ಪೂರ್ವವೆಂದು ಗೊತ್ತಿದ್ದರೂ ಪಶ್ಚಿಮ ದಿಕ್ಕಿಗೆ ಜನರನ್ನು ಮುಖಮಾಡಿಸುವ ಕುತಂತ್ರವನ್ನು ನಮ್ಮ ಇಂದಿನ ಎಲ್ಲ ಸ್ವಾಮಿಗಳು ಮಾಡುತ್ತಿದ್ದಾರೆ . ಸನ್ಯಾಸತ್ವ ಬ್ರಹ್ಮ ಚರ್ಯೆ ಶರಣರು ಒಪ್ಪದ ಮಾತು ಆದರೆ ಇಂದು ಇದಕ್ಕೆ ವಿರುದ್ಧವಾಗಿ ಹಣದ ಆಸ್ತಿಯ ಆಮಿಷಕ್ಕಾಗಿ ಒಲ್ಲದ ಮನಸ್ಸಿನಿಂದ ಆಸ್ತಿ ಸಂರಕ್ಷಣೆಗೆ ಮುಂದಾಗುತ್ತಾರೆ ಕಾವಿಧಾರಿಗಳು.

ಲಿಂಗಾಯತ ಧರ್ಮಕ್ಕೆ ಅಡ್ಡಗಾಲಾದ ‘ವೀರಶೈವ’ ಪದ  ಬಳಕೆ ಹಾಗೂ ‘ಸಿದ್ಧಾಂತ ಶಿಖಾಮಣಿ’ಯ ಪ್ರಸ್ತಾಪ.

ಹನ್ನೆರಡನೆಯ ಶತಮಾನದ ಕಲ್ಯಾಣ ಶರಣರು ಬಸವಣ್ಣ ನವರ ದಿಟ್ಟ ನೇತೃತ್ವದಲ್ಲಿ ಸಾಮಾಜಿಕ ಸಮಾನತೆಯ ಆಂದೋಲನವನ್ನು ಆರಂಭಿಸಿದರು. ಇಡೀ ವೈದಿಕ ಸನಾತನ ವ್ಯವಸ್ಥೆಗೆ ಪರ್ಯಾಯವಾದ ಬಡವರ, ಮಹಿಳೆಯರ, ಅಸ್ಪೃಶ್ಯರ_ದಲಿತರ_ಶೋಷಿತರು ದಮನಿತರು ಕಾರ್ಮಿಕರು  ಕೂಡಿ ಕಟ್ಟಿದ ಮೊಟ್ಟ ಮೊದಲನೆಯ  ಕನ್ನಡದ ಧರ್ಮವೇ ಲಿಂಗಾಯತ ಧರ್ಮವಾಗಿದೆ..

- Advertisement -

ವರ್ಗ ವರ್ಣ ಲಿಂಗ ಆಶ್ರಮ ಭೇದ ಅಳಿದು ಸಾರ್ವಕಾಲಿಕ ಸಮಾನತೆಯ ಸಾರಿದ ಎಲ್ಲ ಶ್ರೇಣೀಕೃತವಾದ ವ್ಯವಸ್ಥೆಯನ್ನು ಕಿತ್ತು ಹಾಕಿದ ಬಸವಣ್ಣ ಸಮತೆ ಶಾಂತಿ ಪ್ರೀತಿ ಸಹ ಬಾಳ್ವೆ  ಹೀಗೆ ಮಾನವೀಯ ಮೌಲ್ಯಗಳ ಬದುಕಿನ  ಸರಳ ಸೂತ್ರಗಳನ್ನು ಜನತೆಗೆ ಸಮೂಹಕ್ಕೆ ಪರಿಚಯಿಸಿದರು.
ಆಡು ಭಾಷೆಯಾದ ಕನ್ನಡವೇ ದೇವ ಭಾಷೆಯಾಯಿತು

ಪೌರೋಹಿತ್ಯವು ಧರ್ಮದ ದೇವರ ಹೆಸರಿನಲ್ಲಿ ನಡೆಯುವ ಶೋಷಣೆ ಅನ್ಯಾಯ ವಂಚನೆಗಳನ್ನು ತೊಡೆದು ಹಾಕಿ, ಜಾತಿ ಅಸ್ಪ್ರಶ್ಯತೆಯನ್ನು ಬೇರು ಸಮೇತ ಸುಟ್ಟು ಸುಂದರ ಸಹಜ ಧಾರ್ಮಿಕ ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ, ನೈತಿಕ, ಮಾನಸಿಕ, ತಾತ್ವಿಕ ವಿಷಯಗಳನ್ನು ಶರಣರು  ಪ್ರತಿಪಾದಿಸಿದರು.

ಕಾಯಕ  ದಾಸೋಹ ಕಡ್ಡಾಯವಾಗಿತ್ತು. ಕಾಯಕವೆಂದರೆ ಮತ್ತೆ ಸತ್ಯ ಶುದ್ಧವಾದ ಕಾಯಕ ಪರಿಶ್ರಮದಿಂದ ಕೂಡಿದ ವೃತ್ತಿಯಾಗಿತ್ತು.

- Advertisement -

ಗುಡಿ ಗುಂಡಾರಗಳ ಸಂಸ್ಕೃತಿ ವಿರೋಧಿಸಿ -ಜಂಗಮ ಸಂಸ್ಕೃತಿಯನ್ನು ಶರಣರು ಬೆಂಬಲಿಸಿದರು.

ಶರಣರದು ಅನುಭಾವ ಧರ್ಮ – ಹಂಚಿಕೊಳ್ಳುವ ವ್ಯಕ್ತಿ ಸಮಷ್ಟಿಯ ಸಂಬಂಧಗಳನ್ನು ಗಟ್ಟಿಗೊಳಿಸುವ  ಉದಾರ ಗುಣಗಳನ್ನು ನಾವು ಶರಣರಲ್ಲಿ ಕಾಣಬಹುದು.
ಜಗತ್ತಿನ ಹಲವು ತಾತ್ವಿಕ ಸಂದೇಶಗಳಲ್ಲಿ ದರ್ಶನಗಳಲ್ಲಿ ಬಸವಣ್ಣ ಸ್ಥಾಪಿಸಿದ ಸಾರಿದ ಲಿಂಗಾಯತ ಧರ್ಮಗಳ ತತ್ವಗಳು ಉನ್ನತಸ್ಥಿತಿಯಲ್ಲಿವೆ.

ಹೀಗಿದ್ದರೂ 15 -16   ನೇ ಶತಮಾನದಲ್ಲಿ ಆಂಧ್ರ ಮೂಲದ ಆಗಮ ಆರಾಧ್ಯರ ಸಂಸ್ಕೃತಿಯಲ್ಲಿ ಅರಳಿ ಬಂದ ಶೈವ ಸಂಸ್ಕೃತಿಯ ಅಂಗವಾದ ವೀರಶೈವವು ಒಂದು ಆಚರಣೆ   ಮಾತ್ರವು. ಅವರ ನಂಬಿಕೆ ಮತ್ತು ಸಿದ್ಧಾಂತದಂತೆ ಅವರು ಆಂಧ್ರದ ಕೊಲ್ಲಿಪಾಕಿಯಲ್ಲಿ ಕಲ್ಲಿನಿಂದ ಉದ್ಭವವಾದ ಪೂಜ್ಯರು. ಅದು ಪೌರಾಣಿಕ ಕಲ್ಪನೆ. ಅದನ್ನು ಸಮರ್ಥಿಸುವ, ವಿರೋಧಿಸುವ ಗೋಜಿಗೆ ಲಿಂಗಾಯತರು ಹೋಗಲೇ ಬಾರದು. ಅದು ಲಿಂಗಾಯತರಿಗೆ ಸಂಬಂಧವಿಲ್ಲದ ವಿಷಯವು.ವೀರಶೈವ ಒಂದು ಆಚರಣೆ ಮಾತ್ರವು.. ಲಕುಲೀಶ ಕಾಳಾಮುಖಿಯಂತೆ ಇದು ಒಂದು ಶೈವ ಪಂಥದ ಪ್ರಭೇದವು.

ಆದರೆ ಲಿಂಗಾಯತ ತತ್ವ ಧರ್ಮಗಳ ಆಚರಣೆಯನ್ನು ಅನುಕರಿಸಿ ಬಸವ ಪೂರ್ವ ಯುಗದಲ್ಲಿ ಇಷ್ಟಲಿಂಗ ಪೂಜೆ ಇತ್ತು ವೀರಶೈವ ಪ್ರಾಚೀನತೆಯ ಬಗ್ಗೆ ಅನೇಕ ಸಂಶೋಧಕರು  ಜ್ಞಾನಿಗಳು ಸುಳ್ಳು ಹೇಳುತ್ತಿರುವುದನ್ನು ಕಂಡರೆ ಮನಸಿಗೆ ನೋವೆನಿಸುತ್ತದೆ.ಕಾಲಕಾಲಕ್ಕೆ ಲಿಂಗಾಯತ ಧರ್ಮವು ಅನಾಥ ಪ್ರಜ್ಞೆಯಲ್ಲಿಯೂ ತನ್ನ ತತ್ವ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ.

16  ನೆ ಶತಮಾನದ ಸಂಕಲನದ ಕಾರ್ಯದಲ್ಲಿ ಪ್ರಕ್ಷಿಪ್ತತೆ ನಡೆದು ಹೋಯಿತು .ಕೊಂಡುಗುಳಿ ಕೇಶರಾಜನ ಕೃತಿಗಳಲ್ಲಿ ದೊಡ್ಡ ಪ್ರಮಾಣದ ಪ್ರಕ್ಷಿಪ್ತತೆ ಕಂಡು ಬರುತ್ತದೆ. ಅದರ ಕಾಲ ನಿರ್ಣಯಗಳ ಬಗ್ಗೆ ಇತ್ಯರ್ಥವಾಗಿಲ್ಲ.  ತದನಂತರ ಯೋಗಿ ಶಿವಾಚಾರ್ಯನೆಂಬ ಕಾಲ್ಪನಿಕ ವ್ಯಕ್ತಿ ರಚಿಸಿದನೆನ್ನಲಾದ ಸಿದ್ಧಾಂತ ಶಿಖಾಮಣಿಯ ಕಾಲ ಇತ್ಯರ್ಥವಾಗಿದೆ ಅದು 14 – 15 ನೇ ಶತಮಾನದಲ್ಲಿ ರಚಿತಗೊಂಡಿದೆಯೆಂದು ಕುಂದಕೂರು ಡಾ ಇಮ್ಮಡಿ ಶಿವ ಬಸವ ಸ್ವಾಮಿಗಳು ಈಗಾಗಲೇ ರುಜುವಾತು ಮಾಡಿದ್ದಾರೆ.  ವೀರಶೈವವಾದಿಗಳು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಅವರಲ್ಲಿ ಡಾ ಎಂ ಚಿದಾನಂದ ಮೂರ್ತಿ ಮತ್ತು ಡಾ. ಗೊ.ರು. ಚನ್ನಬಸಪ್ಪ. ಸುಮಾರು 200 ಅಧಿಕ ಕನ್ನಡದ ವಚನಗಳು ಸಂಸ್ಕೃತಕ್ಕೆ ತರ್ಜುಮೆಯಾಗಿವೆ. ಸಿದ್ಧಾಂತ ಶಿಖಾಮಣಿಯ ಆರಂಭದಲ್ಲಿಯೇ ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂದು ನಮೂದಿಸಲಾಗಿದೆ.

ಲಿಂಗಾಯತ ಎಂಬ ಪದವು ಜನಪದಿಗರ ರಕ್ತನಾಡಿಯಲ್ಲಿ ಸಮಷ್ಟಿಯ ಚೈತನ್ಯವಾಗಿ ಮೂಡಿ ಬಂದಿದೆ. ಲಿಂಗಾಯತರು ದೇಹ ದೇಗುಲ ಮಾಡಿ ಚೈತನ್ಯವನ್ನು ಜಾಗೃತಗೊಳಿಸುವ ಅರಿವನ್ನು ಕುರುಹಾಗಿ ಪಡೆದುಕೊಂಡು ತಾವೇ ದೇವರಾಗುವ ಸೂಕ್ಶ್ಮ ತತ್ವವೇ ಶರಣ ಸಿದ್ಧಾಂತ ಲಿಂಗಾಯತ ಧರ್ಮವಾಗಿದೆ
ಇಲ್ಲದ ವೀರಶೈವವು ನಮ್ಮ ಮೇಲೆ ಯಜಮಾನಿಕೆ ಮಾಡದಿರಲಿ. ಕೆಲ ನಾಜೂಕಯ್ಯನವರು ಅತ್ತಲೂ ಸಹಿ ಇತ್ತಲೂ ಸಹಿ ಎಂದು ತಮ್ಮ ದ್ವಂದ್ವ ಆಷಾಢಭೂತತನವನ್ನು ಪ್ರದರ್ಶಿಸುತ್ತಿದ್ದಾರೆ.

ಲಿಂಗಾಯತ ಧರ್ಮಕ್ಕೆ ಅಡ್ಡಗಾಲಾದ ವೀರಶೈವ ಪದ  ಬಳಕೆ ಹಾಗೂ ಸಿದ್ಧಾಂತ ಶಿಖಾಮಣಿಯ ಪ್ರಸ್ತಾಪಗಳು. ಮತ್ತೆ ಮತ್ತೆ ಅಂತಹ ವಾದಗಳು ಗೊಂದಲಗಳು ಏಳುವುದು ಸಾಮಾನ್ಯ. ಚರ್ಚೆಗೂ ಬಾರದ ಸತ್ಯಾಸತ್ಯವನ್ನು ಒಪ್ಪಿಕೊಳ್ಳದ ಸಂಶೋಧಕರು ಆಚಾರ್ಯರು ಲಿಂಗಾಯತ ಧರ್ಮಕ್ಕೆ ಅಡ್ಡಿಗಾಲಾಗದಿರಲಿ. ವೀರಶೈವದ ಪ್ರಾಚೀನತೆ ಚರ್ಚೆ ಲಿಂಗಾಯತರಿಗೆ ಬೇಡವಾದ ವಿಷಯವಾಗಿದೆ. ಲಿಂಗಾಯತರು ಅವೈದಿಕ ಹಿಂದುಯೇತರ ಸ್ವತಂತ್ರ ಧರ್ಮಿಗಳು

ರಾಜಕೀಯಗೊಂಡ ಲಿಂಗಾಯತರ ನ್ಯಾಯಯುತವಾದ ಧರ್ಮ ಮಾನ್ಯತೆ ಮತ್ತು ಅಲ್ಸಸಂಖ್ಯಾತ ಸ್ಥಾನಮಾನದ ಹೋರಾಟ

ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವು ಒಂದು ಸ್ವತಂತ್ರ ಧರ್ಮವಾಗಿದೆ. ಇದು ನಮ್ಮೆಲ್ಲರ ಹಕ್ಕಾಗಲಿ ಭಿಕ್ಷೆಯಲ್ಲ. ಹೋರಾಟ ಸಂಘರ್ಷ ಕಾನೂನು ಚೌಕಟ್ಟಿನಲ್ಲಿ ಪ್ರಜಾಸತ್ತಾತ್ಮಕವಾಗಿದ್ದಲ್ಲಿ ಖಂಡಿತ  ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮತ್ತು ಅಲ್ಪ ಸಂಖ್ಯಾತ ಮಾನ್ಯತೆ ದೊರೆಯುವಲ್ಲಿ ಎರಡು ಮಾತಿಲ್ಲ. ಅಖಿಲ ಭಾರತ ವೀರಶೈವ ಮಹಾ ಸಭೆ ಕೇವಲ ಮಂತ್ರಿಗಳ ಆಯ್ಕೆಗೆ ರಾಜಕೀಯ ನಿರ್ಧಾರಕ್ಕೆ ನಿಲ್ಲುವ ಸ್ವಾರ್ಥತನದ ವೇದಿಕೆಯಾಗಿದೆ, ವೀರಶೈವ ಜೊತೆ ಲಿಂಗಾಯತ ಧರ್ಮವು ಕಲಬೆರಕೆಯಾಗಬಾರದು.

ಕರ್ನಾಟಕದ ಮಟ್ಟಿಗೆ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟವು ಸಂಪೂರ್ಣ ರಾಜಕೀಯಗೊಂಡು ಲಿಂಗಾಯತರು ಕೆಸರಿನ ಪಶುವಂತೆ  ಒದ್ದಾಡುವ ಪರಿಸ್ಥಿತಿ ಬಂದೊದಗಿತು. ಎಸ ನಿಜಲಿಂಗಪ್ಪ  ಬಿ ಡಿ ಜತ್ತಿ  ವೀರೇಂದ್ರ ಪಾಟೀಲ ಮುಂತಾದ ಅಪ್ಪಟ ಬಸವ ಭಕ್ತರ ಜೀವನವು ಕರ್ನಾಟಕದ ರಾಜಕೀಯ ಪಕ್ಷಗಳು ಹಾಡು ಹಗಲೇ ಅವರನ್ನು ಸ್ಥಾನಪಲ್ಲಟ ಮಾಡಿದ್ದಾರೆ .
ಲಿಂಗಾಯತರು ಇಂದು ರಾಜಕೀಯ ದಾಳಕ್ಕೆ ಬಲಿಯಾಗಿ ಅಸ್ಪ್ರಶ್ಯರಂತೆ ಬದುಕುವ ದುಸ್ಥಿತಿಗೆ ತಲುಪಿದ್ದಾರೆ .

ಮತಗಳ ಬೇಟೆಗೆ ಸಜ್ಜಾದ ರಾಜಕೀಯ ಪಕ್ಷಗಳು ಅದರಲ್ಲೂ ಕಾಂಗ್ರೆಸು  ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದಿರುವ ಮತ್ತು ಅತಿಯಾದ ಭ್ರಷ್ಟಾಚಾರ,  ಒಳಮೀಸಲಾತಿ ಆಧಾರದ ಮೇಲೆ  ಲಿಂಗಾಯತರ ಜನಗಣತಿ , ಹೀಗೆ ಲಿಂಗಾಯತರ ಮತಗಳನ್ನು ಸೆಳೆಯಲು ಕೆಲ ರಾಜಕೀಯ ಮುಖಂಡರನ್ನು ಹುರುಪು ಮಾಡಿ ತನ್ನ ತಪ್ಪನ್ನು ಮುಚ್ಚಿ ಹಾಕಲು ಲಿಂಗಾಯತರಿಗೆ ಧಾರ್ಮಿಕ ಮಾನ್ಯತೆ  ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ  ಆಶೆ ತೋರಿಸಿ ಕೆಲ ನಿವೃತ್ತ ಸರ್ವಾಧಿಕಾರಿ ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯಮಿಸಿ ರಾಷ್ಟ್ರೀಯ ಬಸವ ಸೇನೆ ಕಟ್ಟಿ   ಕೋಟಿ ಕೋಟಿ ಹಣವನ್ನು ಜಾಹಿರಾತಿಗೆ ಖರ್ಚು ಮಾಡಿ .  ಲಿಂಗಾಯತರ ಸಮಾವೇಶಗಳನ್ನು ಕೆಲ ಮಠಾಧೀಶರ ನೇತೃತ್ವದಲ್ಲಿ ಆರಂಭಿಸಿ ಮುಗ್ಧ ಜನರಲ್ಲಿ
ಭ್ರಮೆ ಭ್ರಾಂತಿಯನ್ನು ಹುಟ್ಟು ಹಾಕಿ ಧರ್ಮದ ನಶೆಯನ್ನು ಹೆಚ್ಚಿಸಿ ಮತಗಳನ್ನು ಒಡೆದು ತಮ್ಮ ಲಾಭ ಪಡೆಯಲು ಯತ್ನಿಸಿದ್ದು ಈಗ ಹೊರಬಿದ್ದಿದೆ .ಮಠಗಳಿಗೆ ಹಬ್ಬವೋ ಹಬ್ಬ
ವ್ಯಾಪಾರ ವ್ಯವಹಾರ ಚೆನ್ನಾಗಿ ಕುದುರಿಸ ಹತ್ತಿದರು . ಅವರಿಗೆ ಬೇಕು ಮತಗಳು ಇವರಿಗೆ ಮಠಗಳು. ಒಟ್ಟಾರೆ ಬಸವಣ್ಣನವರ ಹೆಸರಿನಲ್ಲಿ  ಬೀದಿ ನಾಟಕಗಳು  ನಡೆದು ಹೋದವು .

ಇತ್ತೀಚಿಗೆ ನಡೆದ ಲೋಕ ಸಭೆಯ ಚುನಾವಣೆಯಲ್ಲಿ ಡಿ ಕೆ ಶಿವಕುಮಾರ ದಿನೇಶ ಗುಂಡೂರಾವ ಶ್ಯಾಮನೂರು ಶಿವಶಂಕರಪ್ಪ ಸಿದ್ದರಾಮಯ್ಯನವರು ರೋಷನ್ ಬೇಗ್   ಇವರು ಮತ್ತು ಅನೇಕ ರಾಜಕೀಯ ಮುಖಂಡರು ತಾವು ಲಿಂಗಾಯತ ಧರ್ಮ ಮಾನ್ಯತೆಗೆ ಮುಂದಾಗ ಬಾರದಾಗಿತ್ತು ಅದರಿಂದ ಜನರು ತಕ್ಕ ಪಾಠ ಕಲಿಸಿದ್ದಾರೆಂದು  ಹೇಳಿರುವುದು ವರದಿಯಾಗಿದೆ. ತಾವು ಮಾಡುವ ಭಾನಗಡಿಗೆ ಲಿಂಗಾಯತ ಧರ್ಮವನ್ನು ಹೊಣೆಯನ್ನಾಗಿಸುವ ನೀಚತನವನ್ನು ಕಾಂಗ್ರೆಸಿಗರು ತೋರಿದ್ದಾರೆ .ಹೋರಾಟದ ಅಗ್ರಗಣ್ಯರಾದ  ಬಸವರಾಜ ಹೊರಟ್ಟಿ ಮತ್ತು ಡಾ. ಶರಣಪ್ರಕಾಶ ಪಾಟೀಲ ವಿನಯ ಕುಲಕರ್ಣಿಯಂತಹ ದಿಗ್ಗಜರು ಲಿಂಗಾಯತ ಚಳವಳಿ ಎಂದೋ ಮುಗಿದ ಅಧ್ಯಾಯವೆಂದು ಯಾವ ಪಂಚ ಪೀಠದವರನ್ನು ಟೀಕಿಸಿದ್ದರೋ ಅವರ ಕಾಲಿಗೆ ಶರಣಾಗಿದ್ದು ಈಗ ಇತಿಹಾಸವು .

ಅತ್ಯಂತ ಮಹತ್ತರ ಸಂಗತಿ ಎಂದರೆ ಲಿಂಗಾಯತ ಮಹಾಸಭೆಯ ಹೋರಾಟದ   ನೇತೃತ್ವ ಹಾಗು ಕರ್ಣ ಧಾರತ್ವ ಹೊತ್ತ ನಿವೃತ್ತ ಅಧಿಕಾರಿಗಳು ಸುಪ್ರೀಂ ಕೋರ್ಟ್ 2005 ರಲ್ಲಿ ನೀಡಿದ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ನೀಡಿದ ಐತಿಹಾಸಿಕ ನಿರ್ಣಯವನ್ನು ಮುಚ್ಚಿಟ್ಟು ಮತ್ತು 2001 ರಿಂದ 2011 ವರೆಗೆ ಡಾ ಮಾತೆ ಮಹಾದೇವಿಯವರು ಲಿಂಗಾಯತ ಧರ್ಮ ಮಾನ್ಯತೆಗಾಗಿ ಅಖಿಲ ಭಾರತ ವೀರಶೈವ ಮಹಾಸಭೆಯ ವಿರುದ್ಧ ಹೂಡಿದ ಧಾವೆಗಳು ತಿರಸ್ಕೃತಗೊಂಡಿರುವ   ವಿಷಯಗಳು  ಗೊತ್ತಿದ್ದರೂ ಜನರನ್ನು ಮೂರ್ಖರನ್ನಾಗಿ ಮಾಡಿ   ಉನ್ಮಾದ ಉತ್ಸಾಹಕ್ಕೆ ಅಣಿ ಮಾಡಿ ಕೆಲ ಭ್ರಷ್ಟ ವಿಶ್ವ ವಿದ್ಯಾಲಯಗಳ ಪ್ರಾಧ್ಯಾಪಕರನ್ನು  ಬಾಲಬಡುಕರನ್ನು ಕಾಂಗ್ರೆಸ್ಸ್ ಪಕ್ಷ ಏಜೆಂಟರನ್ನು ಲಿಂಗಾಯತ ಚಳವಳಿಯಲ್ಲಿ ಸಕ್ರಿಯವಾಗಿದ್ದರು .

 ಸಂವಿಧಾನ ಪೀಠಕ್ಕೆ ಬರುವ  ಧಾರ್ಮಿಕ ಅಲ್ಪ ಸಂಖ್ಯಾತ ಸ್ಥಾನಮಾನ ವಿಷಯವು ಅಟಾರ್ನಿ ಜನರಲ್ ಆಫ ಇಂಡಿಯಾ ಕೇಂದ್ರೀಯ ಅಲ್ಪ ಸಂಖ್ಯಾತ ಮುಂತಾದ ಕಚೇರಿಗೆ ತೆರಳಿ ದಾಖಲೆ ಪುರಾವೆಗಳನ್ನು ಮನವಿಯನ್ನು ( PETITION ) ಸಲ್ಲಿಸಬೇಕಿತ್ತೇ ಹೊರತು ನಾಡ ಡೊಂಬರಾಟಕ್ಕೆ ಜನರನ್ನು ಮರಳು ಮಾಡಿ ಸ್ವಾರ್ಥ ಮೆರೆಯುವದಕ್ಕೆ ಅಲ್ಲ .

ಇನ್ನೊಂದು ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷವು ತನಗೂ ಲಿಂಗಾಯತ ಧರ್ಮ ಮಾನ್ಯತೆಯ ವಿಷಯಕ್ಕೂ ಯಾವುದೇ ಸಂಬಂಧವಿಲ್ಲದ ಹಾಗೆ ದೂರ ಕಾಯಕೊಂಡ ಕುತಂತ್ರಿಗಳು. ಇವರಿಗೆ ಲಿಂಗಾಯತ ಮತಗಳು ಬೇಕು ಆದರೆ ಲಿಂಗಾಯತರಿಗೆ ಸಿಗಬೇಕಾದ ಸಂವಿಧಾನ ಬದ್ಧ ಮಾನ್ಯತೆ ಬೇಡ . ಉತ್ತರ ಕರ್ನಾಟಕದಲ್ಲಿ  ಬಿಜೆಪಿ ತನ್ನ ನೆಲೆ ಕಂಡುಕೊಳ್ಳಲು ಮುಖ್ಯ ಕಾರಣವೆ ಲಿಂಗಾಯತರು. ಅಷ್ಟೇ ಅಲ್ಲ ಇತ್ತೀಚೆಗೆ ಈಶ್ವರ ಖಂಡ್ರೆ ಶ್ಯಾಮನೂರು ಜಗದೀಶ ಶೆಟ್ಟರ ಸೇರಿ ಲಿಂಗಾಯತರನ್ನು ವೀರಶೈವ  ಮಹಾಸಭೆಗೆ ಆಹ್ವಾನಿಸಿ ಎರಡೂ ಒಂದೇ ಎಂದು ನಿರ್ಣಯಕೈಕೊಂಡು ಬಸವ ಭಕ್ತರನ್ನು ವೀರಶೈವರ ಪಲ್ಲಕ್ಕಿ ಹೊರಲು ಹಚ್ಚಿದ್ದಾರೆ . ಲಿಂಗಾಯತರಿಗೆ ಒಣ ಪ್ರತಿಷ್ಠೆ ಸ್ವಾಭಿಮಾನ   ಜಂಬ . ಒಬ್ಬ ಅಹಂಕಾರಿಗೆ ಹೊರಟವನು ವಹಿಸಿಕೊಟ್ಟು  ತಪ್ಪು ಮಾಡಿದರೆನಿಸಲಾಯಿತು . ಆರಂಭದಲ್ಲಿ ಬಹು ಆಸ್ಥೆ ವಹಿಸಿದ ಡಾ ಎಂ ಬಿ ಪಾಟೀಲರು ಕೂಡ ಬದಲಾದ ಸನ್ನಿವೇಶದಲ್ಲಿ ಮೌನವಾಗಿದ್ದಾರೆ .
ಲಿಂಗಾಯತ ಸಂಘಟನೆಗಳು ದಾರಿಕಾಣದೆ  ವಿಚಲಿತಗೊಂಡಿವೆ.ನ್ಯಾಯ ಸಮ್ಮತ ಕಾನೂನು ಸಮ್ಮತ ಹೋರಾಟವು ನೆಲಕಚ್ಚಿದ್ದಂತೂ ನಿಜ . ಸತ್ಯ ಗೊತ್ತಿದ್ದರೂ ಅದನ್ನು ಸಮಾಧಿ ಮಾಡಿ ಸುಳ್ಳಿಗೆ ಪಟ್ಟಕಟ್ಟಿದ ಲಿಂಗಾಯತರು ಕೇವಲ ಅಧಿಕಾರ ಲಾಲಸೆಗೆ ಶರಣರ ಬಸವ ಚಳವಳಿಯನ್ನು ಬಳಿ ತೆಗೆದುಕೊಂಡರು.

ಡಾ.ಶಶಿಕಾಂತ ಪಟ್ಟಣ ಪುಣೆ

( ಈ ಬಗ್ಗೆ ಆರೋಗ್ಯಕರ ಚರ್ಚೆಗೆ ಅವಕಾಶವಿದೆ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು 9448863309 ಇಲ್ಲಿಗೆ ವಾಟ್ಸಪ್ ಅಥವಾ ಟೆಲಿಗ್ರಾಮ್ ಮಾಡಬಹುದು )
- Advertisement -
- Advertisement -

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -

More Articles Like This

- Advertisement -
close
error: Content is protected !!
Join WhatsApp Group