ಬದುಕಿನುದ್ದಕ್ಕೂ ಹಲವಾರು ಘಟ್ಟಗಳನ್ನು ದಾಟಿ ಬರುವ ಮನುಷ್ಯ ವ್ಯಕ್ತಿಗತವಾಗಿ ತನ್ನದೇ ಆದ ವೈವಿಧ್ಯಮಯ ಅನುಭವಗಳನ್ನು ಹೊಂದುತ್ತಾನೆ. ಗಳಿಸಿ ಉಳಿಸುತ್ತಾ ತಿಳಿದು ಕಲಿಯುತ್ತಾ ಸಿಹಿ, ಕಹಿ ಅನುಭವಗಳನ್ನು ಹೊಂದುತ್ತಾ ವಯಸ್ಸು ಇಳಿಮುಖವಾದಂತೆ ಸಾಗಿ ಬಂದ ಹಾದಿಯನ್ನು ಮತ್ತೊಮ್ಮೆ ತಿರುಗಿ ನೋಡಿದರೆ ಅಲ್ಲೊಂದು ಅಗಾಧ ಪ್ರಪಂಚವೇ ತೆರೆದುಕೊಳ್ಳುತ್ತದೆ.
ನಮ್ಮ ಹಿರಿಯ ಸಾಹಿತಿಗಳಾದ ಗೊರೂರು ಅನಂತರಾಜು ಅವರು ಇತ್ತೀಚೆಗಷ್ಟೇ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಹಿರಿಯ ಜೀವ ಸಾವಿತ್ರಿ ಬಿ. ಗೌಡ ಅವರ ಕೃತಿಯನ್ನು ತಮ್ಮದೇ ದೃಷ್ಟಿಕೋನದಿಂದ ವಿಮರ್ಶಾತ್ಮಕವಾಗಿ ಪರಿಚಯಿಸುತ್ತಾರೆ. ಸಾವಿತ್ರಿ ಬಿ.ಗೌಡ ಅವರು ತಮ್ಮ ಹರೆಯದಲ್ಲೇ ಹಾಸನ ನಗರವನ್ನು ಕಂಡವರು. ಈಗ ಇಳಿವಯಸ್ಸಿನಲ್ಲಿರುವ ಅವರಿಗೆ ಅಂದಿಗೂ ಇಂದಿಗೂ ಕಾಣುವ ಅಗಾಧವಾದ ಬದಲಾವಣೆಯನ್ನು, ಲೇಖನ ರೂಪದಲ್ಲಿ ಬರೆದು ಪ್ರಕಟಿಸಿ ಬಂದ ನೂರಾರು ಪ್ರತಿಕ್ರಿಯೆಗಳಿಂದ ಪುಳಕಿತಗೊಳ್ಳುತ್ತಾರೆ. ಅಲ್ಲದೆ ಅವರ ಸಾಹಿತ್ಯಕ್ಕೆ ತನ್ಮೂಲಕ ಅಗಾಧ ಪ್ರೇರಣೆಯನ್ನು ನೀಡುವ ಆ ಲೇಖನ ಮುಂದೆ ಹಲವಾರು ಸಾಹಿತ್ಯದ ಪ್ರಕಾರಗಳ ಮೂಲಕ ತಮ್ಮ ಅನುಭವಗಳನ್ನು ವ್ಯಕ್ತಪಡಿಸಲು ಹಾದಿಯೇ ತೆರೆದುಕೊಂಡಂತಾಗುತ್ತದೆ. ಹಾಗೆಯೇ ತಾವು ಬರೆದ ಕವಿತೆಗಳನ್ನು ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಾಚಿಸುವುದರ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿ ಪುಸ್ತಕ ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಒಂದು ಕೊಡುಗೆಯನ್ನು ನೀಡಿರುತ್ತಾರೆ. ಇಂತಹ ಹಿರಿಯ ಲೇಖಕಿಯವರ ಬಗ್ಗೆ ಬರೆಯುತ್ತಾ ಗೊರೂರು ಅನಂತರಾಜು ಅವರು ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಇಲ್ಲಿ ನೆನಪಿಸಿಕೊಳ್ಳುತ್ತಾರೆ.
ತಮ್ಮ ತಂದೆ ವ್ಯಾಪಾರದ ಜೊತೆ ಜೊತೆಗೆ ಭಾನುವಾರದ ಸಂತೆಗೆ ವ್ಯಾಪಾರಕ್ಕೆoದು ಬರುತ್ತಿದ್ದ ಹಲವಾರು ಮಂದಿಗೆ ತಮ್ಮ ಮನೆಯೇ ಒಂದು ಸುಂಕವಿಲ್ಲದ ತಂಗುದಾಣವಾಗಿತ್ತೆಂದು ಹೇಳುತ್ತಾ ತಮ್ಮ ತಾಯಿಯೂ ಕೂಡ ಮುತ್ತುಗದ ಎಲೆಗಳನ್ನು ಜೋಡಿಸಿ ಊಟದ ಎಲೆಗಳನ್ನಾಗಿ ಮಾಡಿ ಅದನ್ನು ಮಾರಿ ಬಂದ ಹಣದಿಂದ ತಮ್ಮ ಎಲೆ ಅಡಿಕೆ ಖರ್ಚನ್ನು ಭರಿಸುತ್ತಿದ್ದುದಲ್ಲದೇ ತಮ್ಮೊಡನೆ ಮಾತನಾಡಲು ಸ್ನೇಹಿತೆಯಾಗಿ ವ್ಯಾಪಾರಕ್ಕಾಗಿ ತಮ್ಮ ಮನೆಗೆ ಬಂದು ತಂಗುತಿದ್ದ ದೊಡ್ಡಕೊಂಡುಗೊಳ್ಳದಮ್ಮನೇ ಆತ್ಮೀಯ ಗೆಳತಿಯಾಗಿರುತಿದ್ದಳು ಎನ್ನುವುದರೊಂದಿಗೆ ಹಾಗೆ ಬರುವ ಹಲವಾರು ಮಂದಿಯೊಂದಿಗೆ ನಡೆಯುತ್ತಿದ್ದ ಚರ್ಚೆಗಳು ಸಂಭಾಷಣೆಗಳಿಂದಲೇ ಒಂದು ಮನೋರಂಜನೇಯ ವಾತಾವರಣ ಸೃಷ್ಟಿಯಾಗುತ್ತಿತ್ತು ಎನ್ನುವಾಗ ನಿಜಕ್ಕೂ ಅಂದಿನ ಕಾಲ ಅದೆಷ್ಟು ಆತ್ಮೀಯವಾದ ಬಂಧಗಳನ್ನು ಬೆಸೆಯುತ್ತಿತ್ತು ಎನ್ನುವುದನ್ನು ನಿರೂಪಿಸುತ್ತದೆ.
ಹಾಗೆಯೇ ಸಾವಿತ್ರಿ ಬಿ ಗೌಡ ಅವರು ಕೂಡ ತಮ್ಮ ಪ್ರಾಯದ ದಿನಗಳಲ್ಲಿ ಹೊಲಿಗೆ, ಕಸೂತಿ, ಉಲ್ಲನ್ ಹೀಗೆ ಉತ್ತಮ ಹವ್ಯಾಸಗಳನ್ನು ಹೊಂದಿ ಅದರ ಮೂಲಕ ತಾನು ಒಬ್ಬ ಕಲೆಗಾರ್ತಿ ಎಂದು ನಿರೂಪಿಸಿದ್ದಲ್ಲದೆ ಈ ಮುಪ್ಪಿನಕಾಲದಲ್ಲೂ ಒಬ್ಬ ಕವಿಯತ್ರಿಯಾಗಿ ಸಾಹಿತಿಯಾಗಿ ತಮ್ಮ ಬದುಕನ್ನು ಸಮಾಜಕ್ಕೆ ಅರ್ಪಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಮೊಹರನ್ನು ಒತ್ತಿರುವುದು ಶ್ಲಾಘನೀಯ ಹಾಗೂ ತಮಗೆ ವಯಸ್ಸಾಯ್ತು ಇನ್ನೇನೂ ಮಾಡಲು ಸಾಧ್ಯವಿಲ್ಲ ತಾವು ಅಶಕ್ತರು ಎನ್ನುವವರಿಗೆ ಅವರ ಜೀವನ ಸಂದೇಶ ನೀಡಿರುವುದು ಸತ್ಯ.. ಅಲ್ಲದೇ ನಾವೆಲ್ಲರೂ ಕಂಡಂತೆ ಅವರ ಇಳಿ ಪ್ರಾಯದ ದೇಹ ಸ್ಪಂದಿಸದೆ ಹೋದರೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು, ಸಾಹಿತ್ಯಾಸಕ್ತರೊಡನೆ ಬೆರೆಯಬೇಕು ಎನ್ನುವ ತೀವ್ರವಾದ ತುಡಿತ ಹರೆಯದವರನ್ನೂ ನಾಚಿಸುವಂಥದ್ದು.. ಹಾಗೆ ತಮ್ಮ ಮದುವೆಯಾದ ದಿನಗಳು ಗಂಡನ ಮನೆ, ಊರು ವಾತಾವರಣ, ಪತಿಯ ಸಾಂಗತ್ಯ ಪತಿಯವರು ತಮಗೆ ಹಾಗೂ ಇತರ ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದ ಗೌರವ ಮರ್ಯಾದೆಗಳನ್ನು ನೆನೆಯುತ್ತಾ ಅವರು ತಮ್ಮನ್ನು ಅಗಲಿದ ನೋವು ಯಾತನೆಗಳ ದಿನಗಳಲ್ಲಿ ಕೊರೊನಾದ ಆತಂಕಕಾರಿ ಪರಿಸ್ಥಿತಿಯಲ್ಲಿಯೂ ಪರ್ಸ್, ಚೌಕಬಾರಾ, ಚೆಸ್ ನ ಹಾಸುಗಳನ್ನು ಹೊಲಿಯುತ್ತಾ ದಿನದೂಡಿದ ಸಂದರ್ಭವನ್ನು ನೆನೆದು ಇತ್ತೀಚೆಗೆ ಸಾಹಿತ್ಯದಲ್ಲಿ ತೊಡಗಿಕೊಂಡು ಅದರ ಮೂಲಕ ತಮ್ಮಲ್ಲಿ ಅಡಗಿದ್ದ ಇನ್ನೊಂದು ಪ್ರತಿಭೆಗೆ ವೇದಿಕೆ ಸಿಕ್ಕಂತಾಗಿದ್ದರೂ ತಮ್ಮ ಇಂದಿನ ಅಸಹಾಯಕ ಸ್ಥಿತಿ, ಇನ್ನೂ ಏನೋ ಸಾಧಿಸಬೇಕೆಂಬ ಹಂಬಲವಿದ್ದರೂ ಸಹಕರಿಸದ ವಯಸ್ಸು ಇಂತಹ ಹಲವಾರು ವಿಚಾರಗಳನ್ನು ಗೊರೂರು ಅನಂತರಾಜು ಅವರು ಮನಮುಟ್ಟುವಂತೆ ಈ ಲೇಖನದ ಮೂಲಕ ತಿಳಿಸುತ್ತಾರೆ.
ಮಾಲಾ ಚೆಲುವನಹಳ್ಳಿ
ಬರಹಗಾರ್ತಿ
ಚೆಲುವನಹಳ್ಳಿ,
ಅರಸೀಕೆರೆ ತಾಲ್ಲೂಕು.