ಗೋಕಾಕ: ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ಅನುಭವ ಮಂಟಪದ ಮೂಲಕ ಜಗತ್ತಿಗೆ ಪರಿಚಯಿಸಿದ ದಾರ್ಶನಿಕ ವಿಶ್ವ ಗುರು ಬಸವಣ್ಣನವರು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ನಭಾಪೂರ ಗ್ರಾಮದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿಯನ್ನು ಪೂಜ್ಯರೊಂದಿಗೆ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದ ಎಲ್ಲ ವರ್ಗದ ಜನರನ್ನು ಒಟ್ಟು ಗೂಡಿಸಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಚಿಂತನೆಗಳನ್ನು ನಡೆಸಿ ಸರ್ವರಿಗೂ ಸಮಬಾಳು, ಸಮಪಾಲನ್ನು ಒದಗಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ದಾರ್ಶನಿಕ, ಸಾಮಾಜಿಕ ಸಾಮರಸ್ಯದ ಹರಿಕಾರ ಬಸವಣ್ಣವರು ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೂ ಸ್ಪೂರ್ತಿದಾಯಕ ಶಕ್ತಿ ಎಂದು ಹೇಳಿದರು.
ನಭಾಪೂರ ಗ್ರಾಮದಲ್ಲಿ ಜನರು ಅತ್ಯಂತ ಉತ್ಸಾಹದಿಂದ ವಂತಿಕೆಯನ್ನು ನೀಡಿ ಅಶ್ವಾರೂಢ ಬಸವೇಶ್ವರರ ಮೂರ್ತಿಯನ್ನು ಸ್ಥಾಪಿಸಿದ್ದನ್ನು ಶ್ಲಾಘಿಸಿದರು. ಬಸವಣ್ಣವರ ಆಶಯದಂತೆ ಗ್ರಾಮದ ಸರ್ವ ವರ್ಗದ ಜನರನ್ನು ಒಂದುಗೂಡಿಸಿಕೊಂಡು ಎಲ್ಲರಿಗೂ ಸಮಾನ ಅವಕಾಶ, ಸಮಾನ ಗೌರವವನ್ನು ನೀಡಿ ಏಕತೆಯನ್ನು ಬೆಳೆಸಿ ಅವರ ಚಿಂತನೆಗಳನ್ನು ಅನುಷ್ಠಾನಗೊಳಿಸಿದಾಗ ಮಾತ್ರ ಬಸವಣ್ಣವರ ಪೂಜೆಗೆ ನಾವೆಲ್ಲ ಅರ್ಹರಾಗುತ್ತೇವೆ ಮತ್ತು ವಿಶ್ವಗುರು ಬಸವಣ್ಣ, ಭಗೀರಥರು, ಕನಕದಾಸರು, ಡಾ. ಬಿ.ಆರ್. ಅಂಬೇಡ್ಕರರು ಇಡಿ ಮಾನವ ಕುಲಕ್ಕೆ ದಾರಿ ತೋರಿದ ದಾರ್ಶನಿಕರು ಅವರೆಲ್ಲರನ್ನು ಕೇವಲ ಒಂದೇ ಜಾತಿಗೆ ಸೀಮಿತಗೊಳಿಸುವ ತಪ್ಪನ್ನು ಯಾರು ಮಾಡಬಾರೆಂದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಗೋಕಾಕ ಶೂನ್ಯಸಂಪಾದನ ಮಠದ ಪೂಜ್ಯರಾದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮುರಗೋಡ ದುರದುಂಡೇಶ್ವರ ಮಠದ ಪೂಜ್ಯರಾದ ನೀಲಕಂಠ ಮಹಾಸ್ವಾಮಿಗಳು, ಆಶೀರ್ವಚನ ನೀಡಿದರು.
ಪ್ರಮುಖರಾದ ಬಸಪ್ಪ ವಣ್ಣೂರ. ಪುಂಡಲೀಕ ವಣ್ಣೂರ. ಮಹಾಂತೇಶ ಮಳವಾಡ, ಸುರೇಶ ಪಾಟೀಲ, ಈರಪ್ಪ ಖನಗಾಂವಿ, ಅಪ್ಪಯ್ಯ ಹಮ್ಮಿಣಿ, ಕಾಶಪ್ಪ ಭಾಗೋಜಿ, ಶಿವಾನಂದ ಪಾಟೀಲ, ಮಲ್ಲಪ್ಪ ಶೇಬನ್ನವರ, ಈಶ್ವರ ಭಾಗೋಜಿ, ಕೆಂಪಣ್ಣ ಪಾಟೀಲ ಸೇರಿದಂತೆ ಸಮಾಜದ ಗುರು ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.