ಬೀದರ – ಹಿಂದಿನಿಂದ ನಡೆದುಕೊಂಡು ಬಂದಿದ್ದ ದೇವಿ ಮಹೋತ್ಸವದ ನಿಮಿತ್ತವಾಗಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವಡಗಾಂವ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಣಗಂಬ ಜಾತ್ರಾ ಮಹೋತ್ಸವ ನಡೆಸಲಾಗುತ್ತಿದೆ.
ಕೊರೊನಾ ದೆಸೆಯಿಂದಾಗಿ ಕಳೆದೆರಡು ವರ್ಷಗಳಿಂದ ನಿಂತುಹೋಗಿದ್ದ ರಣಗಂಬ ಉತ್ಸವಕ್ಕೆ ಈ ವರ್ಷ ಕಳೆ ಬಂದಿದೆ ಎಂದು ಹೇಳಬಹುದು. ವಡಗಾಂವ ಗ್ರಾಮದ ಇತಿಹಾಸ ಪುಟ್ಟ ತಿರುವಿ ನೋಡಿದರೆ ಈ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಅದಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ ಎನ್ನಲಾಗುತ್ತಿದೆ.
ದೇಶಮುಖರೆಂಬ ಪಾಳೆಗಾರರು ವಡಗಾಂವ ನಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂಬ ಪ್ರತೀತಿ ಇದ್ದು ಅವರು ವಿರೋಧಿ ಪಡೆಯ ಸೈನ್ಯವನ್ನು ಯುದ್ಧದಲ್ಲಿ ಸೋಲಿಸಿದ ಸವಿನೆನಪಿಗಾಗಿ ಬೃಹತ್ ಗಾತ್ರದ ಕಟ್ಟಿಗೆಯ ದಿಮ್ಮಿಯನ್ನು ದೇಶಮುಖರ ಕೋಟೆಯ (ಸ್ಥಳೀಯವಾಗಿ ಗಡಿ) ಮುಂಭಾಗದ ಆವರಣದಲ್ಲಿ ಮೇಲಕ್ಕೆ ಎತ್ತಿ ನಿಲ್ಲಿಸಿ ವಿಜಯೋತ್ಸವ ಆಚರಿಸುತ್ತಿದ್ದರು.
ಈ ಹಿಂದೆ ವಿಜಯನಗರ ಸಾಮ್ರಾಜ್ಯ ಸೇರಿದಂತೆ ಇತರೆ ಮನೆತನಗಳಲ್ಲಿ ಈ ಪದ್ಧತಿ ಕಾಣಬಹುದು. ರಣದಲ್ಲಿ ಗೆದ್ದ ಸವಿನೆನಪಿಗಾಗಿ ಬೃಹತ್ ಕಂಬವನ್ನು ಎತ್ತಿ ನಿಲ್ಲಿಸುವುದೇ ರಣಗಂಬದ ವಿಶೇಷತೆಯಾಗಿದೆ.
ರಣಗಂಬದ ಇನ್ನೊಂದು ವಿಶೇಷತೆಯೆಂದರೆ ಯಾವುದೇ ಯಂತ್ರ, ತಂತ್ರದ ಸಹಾಯವಿಲ್ಲದೆ ಕೇವಲ ಮಾನವನ ಕೈಬಲದಿಂದ, ಛಂಗಬಲದಿಂದ ಬೃಹತ್ ಗಾತ್ರದ ಹಗ್ಗ ಹಾಗೂ ಕಟ್ಟಿಗೆಯ ಸಹಾಯದಿಂದ ಮೇಲಕೆತ್ತುವುದು ವಿಶೇಷವಾಗಿದೆ.
ಈ ಮಹೋತ್ಸವದಲ್ಲಿ ಇಲ್ಲಿಯವರೆಗೂ ಸಣ್ಣ ಪುಟ್ಟ ಗಾಯಗಳ ಹೊರತುಪಡಿಸಿದರೆ ಯಾವುದೇ ಒಂದೇ ಒಂದು ಸಾವು- ನೋವಿನಂಥ ಅಹಿತಕರ ಘಟನೆ ನಡೆಯದಿರುವುದು ದೈವಿಕ ಶಕ್ತಿಯ ಪ್ರತಿರೂಪದಂತೆ ಕಾಣುತ್ತದೆ.
ಯಾವುದೇ ಒಂದು ವರ್ಷವೂ ರಣಗಂಬವನ್ನು ಎತ್ತಿ ನಿಲ್ಲಿಸದಿದ್ದರೆ ಊರು ಶಾಪಕ್ಕೆ ಒಳಗಾಗಿ ಅಪಾಯ ಎದುರಿಸಬೇಕಾಗುತ್ತದೆ ಎಂದು ಊರಿನ ನಾಗರಿಕರು ಇಂದಿಗೂ ಆಡಿಕೊಳ್ಳುವ ಮಾತಿದೆ.
ರಣಗಂಬವನ್ನು ಹೆಣ್ಣು ದೇವತೆಯ ಪ್ರತಿರೂಪವೆಂದು ಬಿಂಬಿಸಿ ಊರಿನ ನಾಗರಿಕರೆಲ್ಲರೂ ಸದ್ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ರಣಗಂಬವನ್ನು ಬೆಳಿಗ್ಗೆ ಮೇಲಕ್ಕೆರಿಸಲು ಆರಂಭಿಸಿದರೆ ಮಧ್ಯಾಹ್ನದವರೆಗೂ ಏರಿಸಿ ಸಂಜೆ ಕೋಲಾಟ, ನೃತ್ಯ, ಜೋಕರ್ ( ಆಂಧ್ಯಾ ಮೆರವಣಿಗೆ, ಭಜನೆ ) ಕಾರ್ಯಕ್ರಮದ ನಂತರ ಸಂಜೆ ಮತ್ತೆ ನೆಲಕ್ಕೆ ಬೀಳಿಸಲಾಗುತ್ತದೆ.
ರಣಗಂಬ ಜಾತ್ರೆ ಮಹೋತ್ಸವದ ಸಂದರ್ಭದಲ್ಲಿ ಕುಸ್ತಿ ಪ್ರಮುಖ ಆಕರ್ಷಣೆಯಾಗಿದ್ದು ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಬೀದರ್ ಜಿಲ್ಲೆಯ ವಿವಿಧ ಕುಸ್ತಿ ಪಟುಗಳು ಭಾಗವಹಿಸುತ್ತಾರೆ.
ಊರಿನ ಯುವಕರಿಂದ ಕೋಲಾಟ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ.
ಕೋಲಾಟ ಜಾನಪದ ಕಲಾ ಶೈಲಿ ಇಂದೂ ಆಧುನಿಕತೆಯ ಭರಾಟೆಯಲ್ಲಿ ನಶಿಸುತ್ತಿರುವ ಈ ಸಂದರ್ಭದಲ್ಲಿ ಊರಿನ ಕೆಲ ಸಮಾನ ಮನಸ್ಕ ಯುವಕರು ಸೇರಿಕೊಂಡು ಕೋಲಾಟಕ್ಕೆ ಮರುಜೀವ ನೀಡುವ ಪ್ರಯತ್ನಕ್ಕೆ ಕೈ ಹಾಕಿದ್ದು ಅದಕ್ಕೆ ಎಲ್ಲರೂ ಕೈ ಜೋಡಿಸುವುದು ಇಂದಿನ ವಡಗಾಂವ ಗ್ರಾಮದ ದೇವಿ ಮಹೋತ್ಸವ ಜರೂರಾಗಿದೆ. ನಮ್ಮ ಸಂಸ್ಕೃತಿ ಇನ್ನೂ ಜೀವಂತವಾಗಿರಲು ಸತತ ಪ್ರಯತ್ನ ಪಡಬೇಕಾದ ಜವಾಬ್ದಾರಿ ಹಾಗೂ ಈ ಸಂಭ್ರಮವನ್ನು ಉಳಿಸಿಕೊಂಡು ಹೋಗುವುದು ಮುಂದಿನ ಯುವಕರ ಕೈಯಲ್ಲಿ ಇದೆ ಎಂದು ಹೇಳಬಹುದು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ