ಗ್ರಾಮೀಣ ಪ್ರದೇಶಗಳಲ್ಲೂ ಆಂಗ್ಲ ಭಾಷಾ ನಾಮಫಲಕಗಳ ಹಾವಳಿ ಆರಂಭಗೊಂಡಿದ್ದು, ಕನ್ನಡ ಭಾಷೆಯ ಬಗ್ಗೆ ನಾಮಫಲಕಗಳಲ್ಲಿ ಅಸಡ್ಡೆ ತೋರಲಾಗುತ್ತಿದೆ ಎಂದು ಹಿರಿಯ ಸಾಹಿತಿ,ಪತ್ರಕರ್ತರಾದ ಡಾ.ಭೇರ್ಯ ರಾಮಕುಮಾರ್ ಆರೋಪಿಸಿದ್ದಾರೆ.
ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರಗಳಿಗೆ ದೂರು ನೀಡಿರುವ ಅವರು ಮೈಸೂರು ಜಿಲ್ಲೆ ಕೆ.ಆರ್.ನಗರ ಟೌನ್ ನಲ್ಲಿ ಮೈಸೂರು-ಹಾಸನ ರಸ್ತೆಯಲ್ಲಿರುವ ಪೆಟ್ರೊಲ್ ಬಂಕ್ ಒಂದರ ಮುಂದೆ ಇತ್ತೀಚೆಗ ಐ ಲವ್ ಕೆ.ಆರ್.ನಗರ ಎಂಬ ಆಂಗ್ಲಭಾಷಾ ನಾಮಫಲಕ ತಲೆ ಎತ್ತಿದೆ. ಈ ಫಲಕವನ್ನು ಇಂಡಿಯನ್ ಆಯಿಲ್ ಸಂಸ್ಥೆ ತನ್ನ ಪೆಟ್ರೊಲ್ ಬಂಕ್ ಮುಂದೆ ಅಳವಡಿಸಿದೆ. ಆ ಮೂಲಕ ತಾಲ್ಲೂಕು ಕೇಂದ್ರಗಳಲ್ಲು ತನ್ನ ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.
ತಾಲ್ಲೂಕು ಕೇಂದ್ರಗಳಲ್ಲಿನ ಬಹುತೇಕ ನಾಮಫಲಕಗಳು ಕನ್ನಡ ಭಾಷೆಯಲ್ಲಿರುತ್ತವೆ. ಕೆಲವೆಡೆ ಕನ್ನಡ ಹಾಗೂ ಆಂಗ್ಲಭಾಷೆ ಎರಡನ್ನೂ ಬಳಸಲಾಗುತ್ತಿದೆ ಆದರೆ ಇಂಡಿಯನ್ ಆಯಿಲ್ ಸಂಸ್ಥೆಯ ಇಂತಹ ನಾಮಫಲಕಗಳಿಂದ ಕನ್ನಡ ಪರ ಮನಸ್ಸುಗಳಿಗೆ ತೀವ್ರ ನೋವು ಉಂಟಾಗಿದೆ.
ಸದರಿ ನಾಮಫಲಕದಲ್ಲಿ ನನ್ನ ಪ್ರೀತಿಯ ಕೆ.ಆರ್.ನಗರ ಎಬ ಕನ್ನಡ ಅಕ್ಷರಗಳನ್ನೂ ಅಳವಡಿಸಬೇಕು. ಕನ್ನಡ ಭಾಷೆಗೆ ನಾಮಫಲಕದಲ್ಲಿ ಪ್ರಥಮ ಆದ್ಯತೆ ನೀಡಬೇಕು.ಈ ಬಗ್ಗೆ ಇಂಡಿಯನ್ ಆಯಿಲ್ ಸಂಸ್ಥೆಗೆ ಶೀಘ್ರ ಆದೇಶ ನೀಡಬೇಕೆಂದು ಭೇರ್ಯ ರಾಮಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಮನಸ್ಥೆಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಇಂಡಿಯನ್ ಆಯಿಲ್ ಸಂಸ್ಥೆಯು ಅಳವಡಿಸಿರುವ ಆಂಗ್ಲ ಭಾಷಾ ನಾಮಫಲಕಗಳ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಸದರಿ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸುವಂತೆ ಸೂಚಿಸಬೇಕು ಎಂದವರು ಆಗ್ರಹಪಡಿಸಿದ್ದಾರೆ.