Homeಸುದ್ದಿಗಳುತೂಕ ಕೇವಲ ೧೦೦ ಗ್ರಾಮ್ ಹೆಚ್ಚಿದ್ದಕ್ಕೆ ಚಿನ್ನದ ಪದಕ ಹೋಯಿತು !

ತೂಕ ಕೇವಲ ೧೦೦ ಗ್ರಾಮ್ ಹೆಚ್ಚಿದ್ದಕ್ಕೆ ಚಿನ್ನದ ಪದಕ ಹೋಯಿತು !

ಓಲಿಂಪಿಕ್ಸ್ ಕುಸ್ತಿಯಲ್ಲಿ ವಿನೇಶ ಫೋಗಟ್ ಗೆ ಆಘಾತ

ಮಹಿಳಾ ಕುಸ್ತಿಯಲ್ಲಿ ಇನ್ನೇನು ಚಿನ್ನದ ಪದಕ ಗೆದ್ದ ಭಾರತದ ಪ್ರಥಮ ಮಹಿಳೆ ಎನಿಸಿಕೊಳ್ಳುವ ಹಂತದಲ್ಲಿದ್ದ ಖ್ಯಾತ ಕುಸ್ತಿ ಪಟು ವಿನೇಶ ಫೋಗಟ್ ಕೇವಲ ೧೦೦ ಗ್ರಾಮ್ ತೂಕ ಹೆಚ್ಚಾಗಿದ್ದಕ್ಕೆ ಓಲಿಂಪಿಕ್ ಸ್ಪರ್ಧೆಯಿಂದ ಅನರ್ಹಗೊಂಡು ಆಘಾತಗೊಂಡಿದ್ದಾರೆ.

ವಿನೇಶ ಫೋಗಟ್ ಅವರನ್ನು ನಿರ್ಜಲೀಕರಣದ ಕಾರಣದಿಂದಾಗಿ ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ.
ಮಂಗಳವಾರ ರಾತ್ರಿ ಪ್ಯಾರಿಸ್ ಓಲಿಂಪಿಕ್ಸ್ ನ ೫೦ ಕೆಜಿ ಕುಸ್ತಿ ಪಂದ್ಯದಲ್ಲಿ ಹಿಂದಿನ ಚಾಂಪಿಯನ್ ಯೂಯಿ ಸುಸಾಕಿ ಅವರನ್ನು ಸೋಲಿಸಿ ಫೈನಲ್ ತಲುಪಿ ಚಿನ್ನದ ಪದಕ ಬಾಚಲು ಸಜ್ಜಾಗಿದ್ದ ಫೋಗಟ್ ಅವರು ಬೆಳಿಗ್ಗೆ ತಮ್ಮ ತೂಕದಲ್ಲಿ ಕೇವಲ ೧೦೦ ಗ್ರಾಮ್ ಹೆಚ್ವಾಗಿದ್ದಕ್ಕೆ ಅನರ್ಹಗೊಂಡು ಹೊರಗೆ ಬಂದರು. ಹೀಗಾಗಿ ಅಮೇರಿಕದ ಸಾರಾ ಆ್ಯನ್ ಅವರೊಂದಿಗೆ ಬುಧವಾರ ಸೆಣಸುವ ಹಾಗು ಚಿನ್ನದ ಪದಕ ಗಳಿಸುವ ಅವರ ಕನಸು ನುಚ್ಚು ನೂರಾಯಿತು.

ವಿನೇಶ ಫೋಗಟ್ ಅವರ ಸತತ ಪ್ರಯತ್ನದ ನಡುವೆಯೂ ಕೆಲವೇ ಗ್ರಾಮ್ ಗಳ ಹೆಚ್ವು ತೂಕದಿಂದಾಗಿ ಓಲಿಂಪಿಕ್ ಪದಕ ಕಳೆದುಕೊಂಡದ್ದಕ್ಕೆ ತುಂಬಾ ವಿಷಾದವಾಗುತ್ತಿದೆ. ಆದರೂ ಫೋಗಟ್ ಅವರ ಖಾಸಗಿತನವನ್ನು ನಾವು ಗೌರವಿಸಬೇಕಾಗುತ್ತದೆ ಎಂದು ಭಾರತೀಯ ಓಲಿಂಪಿಕ್ ಅಸೋಸಿಯೇಶನ್ ತಿಳಿಸಿದೆ.

ಘಟನೆಯ ನಂತರ ಪ್ರಧಾನಿ ಮೋದಿಯವರು ತಮ್ಮ ವಿಷಾದ ವ್ಯಕ್ತಪಡಿಸಿದ್ದಾರಲ್ಲದೆ ಫೋಗಟ್ ಅವರಿಗೆ ನೈತಿಕ ಬೆಂಬಲ ವನ್ನೂ ತಿಳಿಸಿದ್ದಾರೆ.
ಟ್ಟೀಟ್ ಮಾಡಿರುವ ಮೋದಿ, ” ವಿನೇಶ ನೀವು ಚಾಂಪಿಯನ್ನರಲ್ಲಿ ಚಾಂಪಿಯನ್. ನೀವು ಭಾರತದ ಹೆಮ್ಮೆ ಹಾಗೂ ಪ್ರತಿ ಭಾರತೀಯನ ಸ್ಫೂರ್ತಿ.
ಇಂದಿನ ಹಿನ್ನಡೆಯಿಂದ ನೋವಾಗಿದೆ. ನಾನು ಅನುಭವಿಸುತ್ತಿರುವ ನಿರಾಶೆಯನ್ನು ಶಬ್ದಗಳಲ್ಲಿ ವರ್ಣಿಸಲು ಆಗದು.
ಇದೇ ಕಾಲಕ್ಕೆ ನೀವು ಸ್ಥಿತಪ್ರಜ್ಞರಾಗಿರುತ್ತೀರಿ ಎಂಬುದನ್ನು ನಾನು ಬಲ್ಲೆ. ಸವಾಲುಗಳನ್ನು ಎದುರಿಸುವುದು ನಿಮ್ಮ ಜಾಯಮಾನದಲ್ಲಿಯೇ ಇದೆ. ಇನ್ನಷ್ಟು ಶಕ್ತಿಯುತವಾಗಿ ಮರಳಿ ಬನ್ನಿ ನಾವು ಕಾಯುತ್ತಿದ್ದೇವೆ ”
ಎಂದು ಹುರಿದುಂಬಿಸಿದ್ದಾರೆ.

ಹಾಗೆಯೇ ಗೃಹ ಸಚಿವ ಅಮಿತ್ ಷಾ ಕೂಡ ಟ್ವೀಟ್ ಮಾಡಿದ್ದು, ” ವಿನೇಶ ಫೋಗಟ್ ಅವರ ಹಿನ್ನಡೆ ಕೋಟ್ಯಂತರ ಭಾರತೀಯರಿಗೆ ಆಘಾತ ತಂದಿದೆ. ಅವರಿಗೆ ಅದ್ಭುತ ಕ್ರೀಡಾ ಭವಿಷ್ಯವಿದೆ. ಈ ದುರ್ದೈವ ಅವರ ಕ್ರೀಡಾ ಭವಿಷ್ಯದಲ್ಲಿ ಒಂದು ಗೆರೆ ಅಷ್ಟೇ. ಅವರು ಎಂದಿನಂತೆ ಮತ್ತೆ ಗೆಲುವಿನ ರೂವಾರಿಯಾಗಿ ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ. ನಮ್ಮ ಹಾರೈಕೆ ಬೆಂಬಲಗಳು ಸದಾ ಅವರ ಜೊತೆಗೆ ಇವೆ ” ಎಂದು ಬರೆದುಕೊಂಡಿದ್ದಾರೆ

RELATED ARTICLES

Most Popular

close
error: Content is protected !!
Join WhatsApp Group