ಬೆಳಗಾವಿ – ವಚನಗಳನ್ನು ಮನೆಮನೆಗೆ ತಲುಪಿಸಿದ ಕೀರ್ತಿ ಡಾ ಫ.ಗು ಹಳಕಟ್ಟಿಯವರಿಗೆ ಸಲ್ಲಬೇಕು ಎಂದು ಹಿರಿಯ ಸಾಹಿತಿಗಳಾದ ಡಾ. ಪಿ.ಜಿ. ಕೆಂಪನ್ನವರ ಅಭಿಮತ ವ್ಯಕ್ತಪಡಿಸಿದರು.
ದಿನಾಂಕ 18 ರಂದು ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ನಡೆದ ವಾರದ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ವಚನ ಚಿಂತನೆ ಕುರಿತಾಗಿ ತಮ್ಮ ಅನುಭಾವ ನೀಡಿದ ಅವರು, ಶರಣರ ವಚನಗಳು ಮಾನವ ಬದುಕಿನ ವಾಸ್ತವತೆಯನ್ನು ಪ್ರತಿಬಿಂಬಿಸಿ , ಬದುಕಲು ಬೇಕಾದ ಮಾನವೀಯ ಮೌಲ್ಯಗಳನ್ನು ತಿಳಿಸಿ ಕೊಡುವ ಸಾಧನಗಳಾಗಿವೆ ಎಂದು ಹೇಳಿದರು.
ವಿಶ್ವಗುರು ಬಸವಣ್ಣನವರ ಒಂದು ಶ್ರೇಷ್ಠ ವಚನವಾದ “ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡು ಹೋಗದ ಮುನ್ನ, ಕಾಲ ಮೇಲೆ ಕೈಯನೂರಿ ಕೋಲು ಹಿಡಿಯದ ಮುನ್ನ…” ಇದೊಂದೇ ವಚನ ಸಾಕು.. ನಮ್ಮ ಆಯುಷ್ಯದ ಎಲ್ಲಾ ಅವಧಿಗಳನ್ನು ಸಮಾಜಕ್ಕಾಗಿ, ದೇಶಕ್ಕಾಗಿ, ನಮಗಾಗಿ ಹೇಗೆ ಸದುಪಯೋಗ ಪಡಿಸಿಕೊಂಡು ಇರಬೇಕೆಂದು ತಿಳಿಸಿಕೊಡುತ್ತದೆ ಎಂದು ಹೇಳುತ್ತ ಹಲವಾರು ಸನ್ನಿವೇಶಗಳನ್ನು, ಉಪಕಥೆಗಳನ್ನು ಈ ಸಂದರ್ಭದಲ್ಲಿ ಉದಾಹರಣೆಗೆ ಬಳಸಿಕೊಂಡು ಎಲ್ಲರ ಮನಮುಟ್ಟುವಂತೆ ಉಪನ್ಯಾಸ ಮಾಡಿದರು.
ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ ಮಾತನಾಡುತ್ತಾ ದೇವರನ್ನು ಕಾಣಲು ಅಲ್ಲಿ ಇಲ್ಲಿ ಎನ್ನುತ್ತಾ, ದೇವಸ್ಥಾನಗಳಿಗೆ ಕಷ್ಟಪಟ್ಟು ತೊಂದರೆ ಎದುರಿಸಿ ಹೋಗುವ ಬದಲು ಗುರು ಬಸವಣ್ಣನವರು ನೀಡಿದ ಇಷ್ಟಲಿಂಗದ ನಿರೀಕ್ಷಣೆಯಿಂದ ಮನಸ್ಸಿನ ಸಮಾಧಾನ ಮತ್ತು ಸಂತೃಪ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವೆಂದು ಹೇಳಿದರು.
ಹಿರಿಯ ನ್ಯಾಯವಾದಿಗಳಾದ ಶರಣ ವಿ.ಕೆ.ಪಾಟೀಲ, ನಿವೃತ್ತ ಮುಖ್ಯೋಪಾಧ್ಯಾಯರಾದ ಶರಣೆ ಅಕ್ಕಮಹಾದೇವಿ ತೆಗ್ಗಿ ವಚನ ವಿಶ್ಲೇಷಣೆ ಮಾಡಿದರು.
ಬೆಳಗಾವಿಯ ಕಸಾಪದ ಕಾರ್ಯದರ್ಶಿಗಳಾದ ಮಹಾಂತೇಶ ಮೆಣಸಿನಕಾಯಿ ಗುರುಗಳು ಸಭೆಗೆ ಪಿ.ಜಿ. ಕೆಂಪನ್ನವರ ಅವರ ಸಾಧನೆ ಕುರಿತಾಗಿ ಪರಿಚಯಿಸಿದರು. ಶರಣರಾದ ಆನಂದ ಕರ್ಕಿ ಅವರಿಂದ ಪ್ರಸಾದ ದಾಸೋಹ ನೆರವೇರಿತು.
ಮಹಾದೇವಿ ಅರಳಿಯವರ ನೇತೃತ್ವದಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಶಂಕರ ಬೇವಿನ ಮರದ, ಶರಣಪ್ಪ ಗೂoಗಡಶೆಟ್ಟಿ ವಚನ ಗಾಯನ ನಡೆಸಿಕೊಟ್ಟರು. ಕುಮಾರ ಪಾಟೀಲ್ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು. ಸಂಘಟನೆಯ ಉಪಾಧ್ಯಕ್ಷರಾದ ಸಂಗಮೇಶ ಅರಳಿ.
ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ಶಶಿಭೂಷಣ ಪಾಟೀಲ, ಬಸವರಾಜ ಕರಡಿಮಠ,ಮಹಾಂತೇಶ ಮೆಣಸಿನಕಾಯಿ, ಬಸವರಾಜ ಬಿಜ್ಜರಗಿ, ಆರ್.ಎಸ. ಚಾಪಗಾವಿ, ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ್, ಸುರೇಶ ಹಂಜಿ , ಬಿ.ಬಿ. ಮಠಪತಿ, ಮಹಾಂತೇಶ ತೋರಣಗಟ್ಟಿ ಹೀಗೆ ಸಂಘಟನೆಯ ಕಾರ್ಯಕರ್ತರು ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.