ಸಿಂದಗಿ: ತಾಲೂಕಿನಲ್ಲಿ ಈಚೆಗೆ ಸುರಿದ ಮಳೆಯಿಂದ ತೊಗರಿ, ಹ, ಉಳ್ಳಾಗಡ್ಡಿ ಹೂವು-ಕಾಯಿ ಹಂತದಲ್ಲಿರುವ ದ್ರಾಕ್ಷಿ ಬೆಳೆಗೆ ಹಾನಿಯಾಗಿರುವುದನ್ನು ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಂಗಳವಾರ ವೀಕ್ಷಣೆ ಮಾಡಿದರು.
ಸಸ್ಯರೋಗ ತಜ್ಞ ಡಾ| ಎಸ್.ಎಂ. ವಸದ, ಕೀಟ ತಜ್ಞರಾದ ಡಾ| ಎಸ್.ಎಸ್. ಕರಬಂಟನಾಳ, ಬೇಸಾಯ ತಜ್ಞ ಎಸ್.ಬಿ. ಪಾಟೀಲ, ತಳಿ ವರ್ಧಕರಾದ ಡಾ| ಎಂ.ಡಿ. ಪಾಟೀಲ, ಕೃಷಿ ಇಲಾಖೆ ಜಂಟಿ ಕೃಷಿನಿರ್ದೇಶಕ ಡಾ ಪಿಲಿಯಮ ರಾಜಶೇಖರ, ಇಂಡಿ ಉಪ ಕೃಷಿ ನಿರ್ದೇಶಕ ಡಾ| ಚಂದ್ರಕಾಂತ ಪವಾರ, ಸಹಾಯಕ ಕೃಷಿ ನಿರ್ದೇಶಕ ಡಾ| ಎಚ್.ವೈ. ಒಂಗೆಗೋಳ, ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಚಿದಾನಂದ ಬೂದಿಹಾಳ, ವಿ.ಬಿ. ಕಟ್ಟಿ ಅವರು ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಪರಿಶೀಲಿಸುವ ಕಾರ್ಯ ಕೈಗೊಂಡರು.
ಶಾಸಕ ರಮೇಶ ಭೂಸನೂರ ಮಾತನಾಡಿ, ತಾಲೂಕಿನಲ್ಲಿ 792 – ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ 25 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ 1.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 18.29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಅಕಾಲಿಕ ಮಳೆಯಿಂದ ತೂಗು, ಹತ್ತಿ, ಉಳ್ಳಾಗಡ್ಡಿ ಸೇರಿದಂತೆ ದ್ರಾಕ್ಷಿ ಬೆಳೆ ಸಂಪೂರ್ಣ ಹಾಳಾಗಿದೆ.
ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಗಮನ ಸೆಳೆಯುತ್ತೇನೆ ಎಂದು ಭರವ ನೀಡಿ ರೈತರಿಗೆ ಧೈರ್ಯ ತುಂಬಿದರು.
ಸಿಂದಗಿ ಮತ್ತು ಆಲಮೇಲ ತಾಲೂಕಿನಲ್ಲಿ 192 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು ಮಳೆಗೆ ಸಂಪೂರ್ಣ ದ್ರಾಕ್ಷಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ವೈಜ್ಞಾನಿಕವಾಗಿ ಸರ್ವೇ ಕಾರ್ಯ ಕೈಗೊಂಡು ಸಮೀಕ್ಷೆ ನಡೆಸಲಾಗಿದೆ. ರೈತರಿಗೆ ಅನ್ಯಾಯವಾಗದಂತೆ ಬೆಳೆ ಪರಿಹಾರ ಧನ ಒದಗಿಸಲು ಸರಕಾರ ಮಟ್ಟದಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕೃಷಿ ವಿಜ್ಞಾನಿಗಳ ಮತ್ತು ಅಧಿಕಾರಿಗಳ ತಂಡ ಕ್ಷೇತ್ರದಲ್ಲಿ ಸಂಚರಿಸಿದ್ದು ತೊಗರಿ, ಹತ್ತಿ ಮುಂತಾದ ಬೆಳೆಗಳ ಹಾನಿ ಬಗ್ಗೆ ವೀಕ್ಷಣೆ ಮಾಡಿದ್ದಾರೆ. ಮಳೆಯಿಂದ ಸಂಪೂರ್ಣ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಇಲ್ಲಿ ಈಗ ಹೂವು ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿದ್ದು, ನಿರಂತರ ಮಳೆಯಿಂದ ಇಲ್ಲಿ ಹೂವು ಮತ್ತುಕಾಯಿ ಕೊಳೆತು ಹೋಗಿದೆ, ದ್ರಾಕ್ಷಿ ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರು ಪರಿಹಾರಕ್ಕಾಗಿ ಇಲಾಖೆ ಮೊರೆ ಹೋಗುವಂತಾಗಿದೆ ಎಂದು ಸಿಂದಗಿಯ ದ್ರಾಕ್ಷಿ ಬೆಳೆಗಾರ ಬಿ. ಹೂಗಾರ ಅಳಲು ತೋಡಿಕೊಂಡರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ| ವಿಲಿಯಮ್ ರಾಜಶೇಖರ ಮಾತನಾಡಿ, ನಿಗದಿತ ಸಮಯ ಅಕ್ಟೋಬರ್ ತಿಂಗಳಲ್ಲಿ ಮಳೆಯಾಗಬೇಕಾಗಿತ್ತು, ಆಗ ಸಮರ್ಪಕವಾಗಿ ಆಗಲಿಲ್ಲ ಹೀಗಾಗಿ ತೇವಾಂಶ ಕಡಿಮೆಯಾದ್ದರಿಂದ ತೂಗು ಗಿಡದಲ್ಲಿದ್ದ ಹೂಗಳು ಉದುರಿವೆ, ತೇವಾಂಶ ಕಡಿಮೆಯಾಗಿದ್ದರಿಂದ ಇಳುವರಿಯಲ್ಲಿ ಕುಂಠಿತವಾಗುವ ಸಾಧ್ಯತೆ ಹೆಚ್ಚು ಈಗ ಮಳೆ ಹೆಚ್ಚಾಗುತ್ತಿದ್ದು ಗಿಡದಲ್ಲಾದ ಕಾಯಿಗಳು ಕಪ್ಪಾಗುತ್ತಿವೆ ಎಂದು ಹೇಳಿದರು.
ರೈತರಾದ ಮಡಿವಾಳಪ್ಪ ಕಷ್ಟಗೊಂಡ, ಖಾದರ ಬಂಕಲಗಿ, ಅನಿಲ ಆಲಮೇಲ, ಸಂತೋಷ ನ್ಯಾವನೂರ, ಈರಪ್ಪ ಗ ದಾವಲಸಾಬ ಬಂಕಲಗಿ ಶ್ರೀಶೈಲ ಹರನಾಳ, ಶಾಂತವೀರ ಮುತ್ತಾ ಸೇರಿದಂತೆ ಇತರರು ಇದ್ದರು.