ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಕುಡಿಯುವ ನೀರಿಗಾಗಿ ಜನರು ಸಂಕಷ್ಟ ಪಡುವಂತಾಗಿದೆ. ಜನರ ಗೋಳು ಕೇಳುವರೇ ಇಲ್ಲ ಎಂಬಂಥ ಪರಿಸ್ಥಿತಿ ಉಂಟಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಇನ್ನೂ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಉಳಿದು ಕೊಂಡಿದ್ದು ಕ್ಷೇತ್ರದ ಬಗ್ಗೆ, ಜನತೆಯ ಗೋಳಿನ ಬಗ್ಗೆ ಕೇಳುವ ವ್ಯವಧಾನ ಅವರಿಗೆ ಇಲ್ಲವಾಗಿದೆ. ರಾಜ್ಯದಲ್ಲಿ ಮುಂಗಾರು ಪ್ರವೇಶ ವಿಳಂಬವಾಗಿದ್ದು, ಜನರ ಗೋಳು ಹೇಳ ತೀರದಾಗಿದೆ. ಒಂದೆಡೆ ರೈತರು ಬಿತ್ತನೆ ಮಾಡದೆ ಮಳೆರಾಯನನ್ನೇ ನೆಚ್ಚಿಕೊಂಡು ಕುಳಿತು ಕೊಂಡಿದ್ದಾರೆ. ಕೆಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಜನರ ಕಷ್ಟ ಹೇಳ ತೀರದಾಗಿದೆ.
ಇನ್ನು ಬೀದರ್ ಜಿಲ್ಲೆ ಔರದ ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನರು ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿನ ವಿಚಾರವಾಗಿ ಮಹಿಳೆಯರು ಪಿಡಿಒ ವಿರುದ್ಧ ಜಗಳ ನಡೆಸಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಜಂಬಗಿ ಗ್ರಾಮದ ಘಾಮಾ ತಾಂಡಾದಲ್ಲಿ ನಡೆದಿದೆ.
ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಜಂಬಗಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಪಂಚಾಯಿತಿ ಕಚೇರಿಗೆ ಬೀಗ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪಿಡಿಒ ಶ್ವೇತಾ ಹಾಗು ಅಧಿಕಾರಿಗಳಿಗೆ ಸಮರ್ಪಕವಾಗಿ ನೀರು ಯಾಕೆ ಪೂರೈಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ತಾಂಡಾಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ದೂರು ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಈ ವೇಳೆ ಪ್ರತಿಭಟನಾ ನಿರತರು ಹಾಗೂ ಪಿಡಿಒ ಶ್ವೇತಾ ನಡುವೆ ಮಾತಿಗೆ ಮಾತು ಬೆಳೆದಿದ್ದು, ಮಹಿಳೆಯರು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಿಡಿಒ ಶ್ವೇತಾ ಘಾಮಾ ತಾಂಡಾಕ್ಕೆ ಬಾವಿಯಿಂದ ಪೈಪ್ಲೈನ್ ಮಾಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದೇವೆ. ಆದರೆ, ಅಲ್ಲಿನ ನಿವಾಸಿಗಳು ಪದೇ ಪದೇ ಪೈಪ್ಅನ್ನು ಹೊಡೆದು ಹಾಕುತ್ತಿದ್ದಾರೆ ಎಂದು ಪ್ರತಿ ದೂರು ಹೇಳಿದರು.
ಈ ಎಲ್ಲ ಘಟನೆ ನಡೆಯುವ ವೇಳೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಇನ್ನೂ ಬೆಂಗಳೂರು ನಲ್ಲಿ ಉಳಿದು ಕೊಂಡಿದ್ದು..ಬೀದರ ಜನರಿಗೆ ಶುದ್ಧ ನೀರು ಕುಡಿಸುತ್ತಾರೋ ಇಲ್ಲವೊ ಎಂಬುದನ್ನು ಕಾದು ನೋಡಬೇಕು ಅಷ್ಟೇ.
ವರದಿ: ನಂದಕುಮಾರ ಕರಂಜೆ, ಬೀದರ