ಸರಳ ಸಾತ್ವಿಕ ಆಹಾರ, ಸಕಾರಾತ್ಮಕ ಯೋಚನೆ, ಸತ್ಸಂಗಗಳೇ ಆರೋಗ್ಯದ ಸೂತ್ರಗಳು -ಕುಲಸಚಿವೆ ಡಾ. ವಿಜಯಲಕ್ಷ್ಮಿ ಪುಟ್ಟಿ ಅಭಿಮತ.
ಸಾತ್ವಿಕ ಆಹಾರ ಸೇವನೆ, ನೈಸರ್ಗಿಕ ಪಾನೀಯ ಸೇವನೆ, ಸಕಾರಾತ್ಮಕ ಯೋಚನೆ ಸತ್ಸಂಗಗಳಲ್ಲಿ ಭಾಗಿಯಾಗುವುದರ ಮೂಲಕ ಆರೋಗ್ಯವನ್ನು ಸದೃಢವಾಗಿ ಕಾಯ್ದುಕೊಳ್ಳಬಹುದು ಎಂದು ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ. ವಿಜಯಲಕ್ಷ್ಮಿ ಪುಟ್ಟಿ ರವಿವಾರ ದಿ.6 ರಂದು ಬೆಳಗಾವಿ ನಗರದ ಫ. ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಂಡ’ ಆರೋಗ್ಯ ಅರಿವು’ ಕಾರ್ಯಕ್ರಮದಲ್ಲಿ ತಮ್ಮ ಅಭಿಮತ ವ್ಯಕ್ತಪಡಿಸಿದರು.
ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, ಪದೇ ಪದೇ ಚಹಾ ಸೇವನೆ ಒಳ್ಳೆಯದಲ್ಲ. ಬಿಳಿ ಪದಾರ್ಥಗಳಾದ ಸಕ್ಕರೆ, ಉಪ್ಪು, ಮೈದಾ ಆರೋಗ್ಯಕ್ಕೆ ವಿಷಕಾರಿ. ಸಸ್ಯಾಹಾರ ಮತ್ತು ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಸೇವನೆ ಮಾಡುವುದರ ಮೂಲಕ ಹೆಚ್ಚಿಗೆ ಸಕಾರಾತ್ಮಕ ಯೋಚನೆಗಳನ್ನು ಮಾಡಿ ಒತ್ತಡಗಳಿಂದಲೂ ದೂರ ಉಳಿದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವಚನ ಸಾಹಿತ್ಯದಲ್ಲಿ ಅಡಗಿರುವ ಆರೋಗ್ಯದ ಕುರಿತಾದ ಮಾಹಿತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಸತ್ಸಂಗ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಒಳ್ಳೆಯ ಆರೋಗ್ಯಕರ ವಾತಾವರಣ ಉಂಟು ಮಾಡುವಲ್ಲಿ ಸಂಘಟನೆ ಶ್ರಮಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಆಗಸ್ಟ್ 15 ರಂದು ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ದೇಶಭಕ್ತಿ ಹೆಚ್ಚಿಸುವ ‘ಡ್ಯಾನ್ಸ್ ಬೆಳಗಾವಿ ಡಾನ್ಸ್’ ವಿಶೇಷ ಸ್ಪರ್ಧೆ ಕಾರ್ಯಕ್ರಮ ಕುರಿತು ಶಂಕರ ಗುಡಸ ಎಲ್ಲರಿಗೂ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಆನಂದ ಕರ್ಕಿ, ಸದಾಶಿವ ದೇವರಮನಿ,ಬಿ ಬಿ ದೊಡ್ಡಮನಿ ಬಸವರಾಜ ಕರಡಿಮಠ, ಎಸ್ ಎಸ್ ಪೂಜಾರ,ಎಂವೈ ಮೆಣಸಿನಕಾಯಿ, ಡಾ.ಅಡಿವೆಪ್ಪ ಇಟಗಿ, ಶಿವಾನಂದ ತಲ್ಲೂರ, ಸುಶೀಲಾ ಗುರವ, ಅಹನಾ ಕಾಕತಿಕರ,ಶ್ರೀದೇವಿ ನರಗುಂದ ಶೋಭಾ ದೇಯನ್ನವರ, ದೀಪಾ ಪಾಟೀಲ, ಅಕ್ಕಮಹಾದೇವಿ ತೆಗ್ಗಿ, ಸೇರಿದಂತೆ ಸರ್ವ ಶರಣ ಬಳಗ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು. ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸುರೇಶ ನರಗುಂದ ನಿರೂಪಿಸಿದರು. ವಿ.ಕೆ ಪಾಟೀಲ ವಂದಿಸಿದರು.