ಸಿಂದಗಿ: ಸೃಜನಶೀಲವಾದ ಜೀವನ ಏನೆಲ್ಲ ಸಾಧಿಸುವ ಕನಸನ್ನು ನೀಡುತ್ತದೆ. ಪರೀಕ್ಷೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳಿ ಭಯ ಬೇಡ ಸಾಧಿಸುವ ಭರವಸೆ ಇಟ್ಟುಕೊಳ್ಳಿ ಎಂದು ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 2023-24 ನೇ ಸಾಲಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಓದುವುದು ನಮ್ಮ ಉಸಿರಾಗಬೇಕು. ಜೀವನದಲ್ಲಿ ಕಷ್ಟಪಟ್ಟರೆ ನಮಗೆ ಬದುಕಿನಲ್ಲಿ ಇಷ್ಟಪಟ್ಟಿದ್ದು ಸಿಗುತ್ತದೆ. ಎಂದರು.
ಕಾರ್ಯಕ್ರಮವನ್ನ ಉದ್ಘಾಟಿಸಿದ ಪತ್ರಕರ್ತ ಶಾಂತೂ ಹಿರೇಮಠ ಮಾತನಾಡಿ, ಜೀವನದಲ್ಲಿ ಅಸಾಧ್ಯ ಎನ್ನುವದು ಯಾವುದು ಇಲ್ಲ. ಮನಸ್ಸು ಗಟ್ಟಿಯಾಗಿದ್ದರೆ, ಕಾರ್ಯದಲ್ಲಿ ಆಸಕ್ತಿ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ. ತಂದೆ-ತಾಯಿಗಳು ಅತ್ಯಂತ ಕಷ್ಟದ ಬದುಕಿನಲ್ಲಿಯೂ ಮಕ್ಕಳ ಶಿಕ್ಷಣಕ್ಕಾಗಿ ಅವರ ಬದುಕಿಗಾಗಿ ಏನೆಲ್ಲ ಶ್ರಮ ಪಡುತ್ತಾರೆ. ಅದರ ಅರಿವು ಮಕ್ಕಳಿಗೆ ಇರಬೇಕು. ಸಾಧಿಸುವ ಛಲ ಇದ್ದವನು ತನ್ನ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರು ಎದುರಿಸಿ ಮುನ್ನುಗ್ಗುತ್ತಾನೆ. ಆದರೆ ಪ್ರಸ್ತುತ ಯುವ ಜನಾಂಗದವರಲ್ಲಿ ಸಾಧಿಸುವ ಕನಸುಗಳು ಇಲ್ಲದಂತಾಗುತ್ತಿರುವುದು ವಿಪರ್ಯಾಸ ಸಂಗತಿ. ಕೀಳರಿಮೆ ತೊರೆಯಿರಿ, ಬುದ್ದಿವಂತಿಕೆ ಮತ್ತು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಿ ಸದಾ ಕಲಿಕೆಯತ್ತ ಚಿತ್ತವಿರಲಿ, ಹೊಸ ಹೊಸ ಕನಸುಗಳನ್ನು ಕಟ್ಟಿಕೊಳ್ಳಿ, ಸಾಧಕರ ಜೀವನ ಚರಿತ್ರೆ ತಿಳಿಯಿರಿ ಎಂದು ಸಲಹೆ ನೀಡಿದರು.
ಈ ವೇಳೆ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ದ್ವಿತೀಯ ವರ್ಷದ ಸಂತೋಷ ಮಳ್ಳಿ ಅನಿಸಿಕೆ ವ್ಯಕ್ತ ಪಡಿಸಿದರು. ವೇದಿಕೆ ಮೇಲೆ 2023-24 ನೇ ಸಾಲಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎಸ್.ಎ.ಪಾಟೀಲ, ಉಪನ್ಯಾಸಕರಾದ ಭೀಮನಗೌಡ ಬಿರಾದಾರ, ಆರ್.ಬಿ.ಹೊಸಮನಿ ಮತ್ತು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಯಲ್ಲಾಲಿಂಗ ಪಡದಳ್ಳಿ ಇದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಮ್.ಎನ್.ಅಜ್ಜಪ್ಪ, ಎಸ್.ಪಿ.ಬಿರಾದಾರ, ಮುಕ್ತಾಯಕ್ಕ ಕತ್ತಿ, ಎಫ್.ಎ.ಹಾಲಪ್ಪನವರ, ಎ.ಆರ್.ಸಿಂದಗಿಕರ, ಸಿದ್ದಲಿಂಗ ಕಿಣಗಿ, ಆರ್.ವಾಯ್.ಪರೀಟ, ಎ.ಬಿ.ಪಾಟೀಲ, ಡಾ. ಶಾಂತುಲಾಲ ಚವ್ಹಾಣ, ಸತೀಶ ಬಸರಕೋಡ, ಗಂಗಾರಾಮ ಪವಾರ, ಸಚೀನ ಕನಾಳ, ಸುರೇಶ ಮಂಗೊಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.