ಸವದತ್ತಿ– ನಮ್ಮ ದಿನನಿತ್ಯದ ಬದುಕಿನಲ್ಲಿ ನಾಮ ಜಪ ಮಂತ್ರದ ಮೂಲಕ ಸಕಾರಾತ್ಮಕ ಶಕ್ತಿಯನ್ನು ಹಚ್ಚಿಸಿಕೊಳ್ಳುವುದರಿಂದ ಹೃದಯದ ಆರೋಗ್ಯದಲ್ಲಿ ಸುಧಾರಣೆಯನ್ನು ನಾವು ಕಾಣಬಹುದಾಗಿದೆ.ಸುಖ ಎಂಬ ಶಬ್ದಕ್ಕೆ ಪರ್ಯಾಯವಾಗಿ ನಾವು ಬಳಸುವ ಇನ್ನೊಂದು ಶಬ್ಧವೇ ಆನಂದ.ಆನಂದಮಯ ಜೀವನವನ್ನು ನಮಗೆ ಅಧ್ಯಾತ್ಮ ಕಲಿಸುತ್ತದೆ.ನಾಮಜಪವನ್ನು ನಾವು ಮಾಡುವುದರಿಂದ ಮನಸ್ಸು ಶಾಂತವಾಗಿರುವುದರಿಂದ ಮಾನಸಿಕ ಒತ್ತಡದಿಂದ ನಿರ್ಮಾಣವಾಗುವ ಶಾರೀರಿಕ ರೋಗಗಳು ಬರುವುದಿಲ್ಲ.ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುವುದು ಎಂದು ಸತ್ಸಂಗಿಗಳಾದ ಯಶವಂತ ಗೌಡರ ತಿಳಿಸಿದರು.
ಅವರು ಸಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಜಪದ ಮಹತ್ವ ಕುರಿತು ಮಾತನಾಡಿದರು. ಮುಂದುವರೆದು ಅವರು ಜಪದ ಮಹತ್ವ ಕುರಿತಂತೆ ವೈಜ್ಞಾನಿಕ ಸಂಶೋಧನೆ ಜರುಗಿದುದನ್ನು ಉದಾಹರಿಸುತ್ತ ಪುಣೆಯ ಸಸೂನ್ ಜನರಲ್ ಆಸ್ಪತ್ರೆಯ ಜಿಯೋಪಥಾಲಿ ಸ್ವ ವೈದ್ಯರ ಸಂಶೋಧನೆಯ ಪ್ರಕಾರ 30 ಜನರ ಅಧ್ಯಯನಕ್ಕೆ ಒಳಪಡಿಸಿದಾಗ ಅವರ ಹೃದಯ ಚಕ್ರದಲ್ಲಾಗುವ ಬದಲಾವಣೆಗಳನ್ನು ಜಪದಿಂದ ಆಗುವ ಪರಿಣಾಮ ಕುರಿತು ತಿಳಿಸಿದಿದ್ದರ ನೇರ ಪರಿಣಾಮ ಶಾರೀರಿಕ ಸ್ಥಿತಿಯ ಮೇಲೆ ಮನಸ್ಸು ಮತ್ತು ಮಿದುಳಿನ ಮೇಲೆ ಆಗುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ ಎಂಬುದನ್ನು ಹಲವು ಉದಾಹರಣೆಗಳ ಮೂಲಕ ತಿಳಿಸುತ್ತ ಮಹಾರಾಷ್ಟ್ರದ ದಹಿವಾಡಿ ತಾಲೂಕಿನ ತಾಲೂಕ ಅಧಿಕಾರಿ ಕೇಳ್ಕರ ಅವರ ಘಟನೆಯನ್ನು ಗೋಂದಾವಲಿ ಬ್ರಹ್ಮಚೈತನ್ಯ ಮಹಾರಾಜರ ಜೊತೆಗಿನ ಸಂವಾದವನ್ನು ಜಪಯಂತ್ರದ ಕುರಿತು ಉದಾಹರಿಸಿದರು.ನಂತರ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪೂಜ್ಯರು ಸತ್ಸಂಗವನ್ನು ನಡೆಸಿ ಯಾವ ನಾಮ ಜಪವನ್ನು ನಾವು ಮಾಡುತ್ತೇವೆಯೋ ಆ ನಾಮ ಜಪವನ್ನು ಮಾಡುವಾಗ ಆ ದೇವರ ಚಿತ್ರ ನಮ್ಮ ಮನಸ್ಸಿನಲ್ಲಿ (ಕಣ್ಮುಂದೆ) ಮೂಡಬೇಕು.
ನಾಮಸ್ಮರಣೆ ಉಚ್ಚಾರ ಮಾಡುವಾಗ ಮನಸ್ಸಿನ ಚಿತ್ತವು ಬೇರೆ ಕೆಲಸದಲ್ಲಿ ತೊಡಗಬಾರದು. ನಾರಾಯಣ ನಾರಾಯಣಎಂದು ಉಚ್ಚರಿಸುತ್ತಿದ್ದರೆ ನಮ್ಮ ಮನಸ್ಸಿನಲ್ಲಿ ನಾರಾಯಣನ ಚಿತ್ರ ಬರಬೇಕು ವಿನಹ ನಮ್ಮ ದೈನಂದಿನ ಯಾವುದಾದರೂ ಕೆಲಸದ ವಿಚಾರ ಬರಬಾರದು. ಅಂದಾಗ ಮಾತ್ರ ನಾಮಸ್ಮರಣೆ ಸಾರ್ಥಕಗೊಳ್ಳುತ್ತದೆ. ಇದಕ್ಕೆ ಉದಾಹರಣೆ ವಿಠ್ಠಲ ವಿಠ್ಠಲ ಎಂದು ನಾಮಸ್ಮರಣೆಯ ಮೂಲಕ ಹೃದಯರೋಗ ವಾಸಿಯಾದ ಭಕ್ತನ ಉದಾಹರಣೆಯನ್ನು ಉದಾಹರಿಸುತ್ತ ಪ್ರತಿ ವರ್ಷ ಆಳಂದಿ ದಿಂಡಿಗೆ ಪಾದಯಾತ್ರೆಯಲ್ಲಿ ತೊಡಗಿರುವ ಭಕ್ತರ ಬದುಕಿನಲ್ಲಾದ ಪರಿಣಾಮಗಳನ್ನು ತಿಳಿಸಿದರು.
ಈ ಸತ್ಸಂಗದ ಪ್ರಾರಂಭದಲ್ಲಿ ಅಲೋಕ ಬೆಟಗೇರಿ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ವಚನವನ್ನು ಹೇಳಿದನು. ನಂತರ ಸುಲೋಚನಾ ಹೊನ್ನುಂಗರ ಅಂಬಿಗ ನಾ ನಿನ್ನ ನಂಬಿದೆ ಪುರಂದರ ದಾಸರ ರಚನೆಯನ್ನು ಹೇಳಿದರು. ಶೃದ್ಧೆಯ ಸರೋವರದಿ ನಾಮ ಜಪದಾ ನೌಕೆ ಎಂಬ ಭಾವಪೂರ್ಣ ಗೀತೆಯನ್ನು ಹಿರಿಯ ಅನುಭಾವಿ ಸತ್ಸಂಗಿಗಳಾದ ಯಶವಂತ ಗೌಡರ ಹಾಡಿ ಎಲ್ಲರಿಗೂ ಹಾಡನ್ನು ಹೇಳಿಸುವ ಮೂಲಕ ಸತ್ಸಂಗಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟರು.
ಈ ಗೂಗಲ್ ಮೀಟ್ ಸತ್ಸಂಗದಲ್ಲಿ ಮುನವಳ್ಳಿ ಸಿಂದೋಗಿ ಬೈಲಹೊಂಗಲ ಸವದತ್ತಿ ಚಿಕ್ಕುಂಬಿ ಯಕ್ಕುಂಡಿ ಬಾಗಲಕೋಟ, ಪೂನಾ,ಬೆಂಗಳೂರು, ಧಾರವಾಡ. ಹುಬ್ಬಳ್ಳಿ. ದೇವರ ಹುಬ್ಬಳ್ಳಿ. ಬೆಳಗಾವಿ ಸೇರಿದಂತೆ 60 ಕ್ಕೂ ಹೆಚ್ಚು ಕುಟುಂಬಗಳ ಸತ್ಸಂಗಿಗಳು ಪಾಲ್ಗೊಂಡರು.
ಈ ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕರಾದ ವೀರಣ್ಣ ಕೊಳಕಿ ನಿರ್ವಹಿಸುವ ಮೂಲಕ ಸ್ವಾಗತ ಮತ್ತು ವಂದನಾರ್ಪಣೆಯನ್ನು ನಡೆಸಿಕೊಟ್ಟರು.
ವರದಿ – ವೈ.ಬಿ.ಕಡಕೋಳ ಸಂಪನ್ಮೂಲ ವ್ಯಕ್ತಿಗಳು