spot_img
spot_img

ಕಟ್ಟುನಿಟ್ಟಾಗಿ ಅಭಿವೃದ್ಧಿ ಕಾರ್ಯ ಆರಂಭಿಸಿ ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

Must Read

- Advertisement -

ಮೂಡಲಗಿ: ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ತತ್‍ಕ್ಷಣವೇ ಸ್ಪಂದಿಸಬೇಕು, ಸಾರ್ವಜನಿಕರಿಗೆ ಶೌಚಾಲಯ, ಒಳಚರಂಡಿ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರದಂದು ಇಲ್ಲಿನ ತಹಶೀಲದಾರರ ಕಛೇರಿಯಲ್ಲಿ ಜರುಗಿದ ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರಭಾವಿ ಕ್ಷೇತ್ರದ ಪ್ರತಿ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳ ಪಟ್ಟಿಯನ್ನು ಜೂನ್ ತಿಂಗಳಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.

ಮೂಡಲಗಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಇನ್ನೂ ಶೌಚಾಲಯಗಳ ಸಮಸ್ಯೆಗಳು ಮುಂದುವರಿದಿವೆ. ಇದರಿಂದ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ಮಹಿಳೆಯರ ಗೌರವ ಕಾಪಾಡುವ ಜವಾಬ್ದಾರಿಯನ್ನು ಅಧಿಕಾರಿಗಳು ಅರಿಯಬೇಕು. ಜೊತೆಗೆ ಒಳಚರಂಡಿಗಳ ವ್ಯವಸ್ಥೆಗಳು ಸಹ ಸಮರ್ಪಕವಾಗಿಲ್ಲ. ಸ್ಥಳೀಯ ಅಧಿಕಾರಿಗಳು ಮಾಡುತ್ತಿರುವ ತಪ್ಪಿನಿಂದ ಕೆಲವರು ನಮ್ಮನ್ನೇ ದೂರುತ್ತಿದ್ದಾರೆ.

- Advertisement -

ಕೇವಲ ಕಛೇರಿಯಲ್ಲಿ ಕುಳಿತರೇ ಸಾಲದು. ಎಲ್ಲೆಲ್ಲಿ ಸಾರ್ವಜನಿಕರ ಸಮಸ್ಯೆಗಳು ಇವೆಯೋ ಅಲ್ಲಿ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಜನಸ್ಪಂದನ ಮಾಡುವ ಕೆಲಸ ನಡೆಯಬೇಕು. ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದರೇ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳುವುದಾಗಿ ಅವರು ಎಚ್ಚರಿಕೆಯನ್ನು ನೀಡಿದರು.

ಗ್ರಾಮ ಪಂಚಾಯತಿ ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.  ಮನೆಯ ಉತಾರಗಳನ್ನು ಸಹ ಸಾರ್ವಜನಿಕರಿಗೆ ಕೊಡುತ್ತಿಲ್ಲ. ಉತಾರಗಳಿಗಾಗಿಯೇ ತಿಂಗಳುಗಟ್ಟಲೇ ಪಂಚಾಯತಿಗಳಿಗೆ ಅಲೆದಾಡಿಸುತ್ತಿದ್ದಾರೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ಇನ್ನಾದರೂ ಎಚ್ಚೆತ್ತುಕೊಂಡು ಕೆಲಸ ಮಾಡುವಂತೆ ಸೂಚನೆ ನೀಡಿದರು.

ಪ್ರವಾಹ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ಇನ್ನೂ ಕೆಲವು ಮನೆಗಳ ಬಾಕಿ ಇವೆ. ಈಗಲೂ ದಿನನಿತ್ಯ ಸಂತ್ರಸ್ತರು ನಮ್ಮ ಕಚೇರಿಗೆ ಬಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಅರ್ಹ ಬಡ ಕುಟುಂಬಗಳಿಗೆ ಸರ್ಕಾರದ ಮನೆಗಳು ಮಂಜೂರಾಗಿಲ್ಲ. ಸ್ಥಳೀಯವಾಗಿ ಪಂಚಾಯತಿ ಅಧಿಕಾರಿಗಳು ಶ್ರೀಮಂತ ಫಲಾನುಭವಿಗಳಿಂದ ಹಣ ಪಡೆದು ನಿಜವಾದ ಬಡಕುಟುಂಬಗಳಿಗೆ ಅನ್ಯಾಯವೆಸಗಿದ್ದಾರೆ.

- Advertisement -

ಪ್ರವಾಹ ಹಾಗೂ ನಿರಂತರ ಮಳೆಯಿಂದಾಗಿ ಕೆಲ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ಸೂರು ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಪರಿಹಾರ ಧನದಿಂದ ವಂಚಿತರಾದ ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮತ್ತೇ ಹಳೆಯ ಚಾಳಿಯನ್ನು ಮುಂದುವರಿಸಿ ಬಡವರಿಂದ ಹಣವನ್ನು ಪಡೆದರೇ ನಾನೇ ಸ್ವತಃ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.

ಕೆಲ ಅಧಿಕಾರಿಗಳು ಬಡವರಿಂದ ದುಡ್ಡು ತಿಂದು ನಮ್ಮ ಹೆಸರಿಗೆ ಕಳಂಕ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಅಂತವರ ಮೇಲೆ ನಮ್ಮ ಹದ್ದಿನ ಕಣ್ಣು ಇದೆ ಎಂದು ಖಡಕ್ಕಾಗಿ ವಾರ್ನಿಂಗ ಮಾಡಿದರು.

ಇನ್ನೂ ಮುಂದೆ ಅರಭಾವಿ ಕ್ಷೇತ್ರದ ಪ್ರತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು. ಸರ್ಕಾರದ ವಿವಿಧ ಪಿಂಚಣಿ ಸೌಲಭ್ಯಗಳನ್ನು ಸ್ಥಳದಲ್ಲಿಯೇ ಅರ್ಹ ಫಲಾನುಭವಿಗಳಿಗೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.

ತಹಶೀಲದಾರರು ಸೇರಿದಂತೆ ವಿವಿಧ ಅಧಿಕಾರಿಗಳನ್ನು ಸ್ಥಳದಲ್ಲಿಯೇ ಕರೆಯಿಸಿಕೊಂಡು ಅರ್ಹರಿಗೆ ಪಿಂಚಣಿ ಸೌಲಭ್ಯ ಒದಗಿಸಲಾಗವುದು ಇದರಿಂದ ಬಡ ನಾಗರೀಕರ ಕಚೇರಿ ಅಲೆದಾಟ ಸೇರಿದಂತೆ ಮಧ್ಯವರ್ತಿಗಳ ಹಾವಳಿಯೂ ಇನ್ನು ಮುಂದೆ ತಪ್ಪಲಿದೆ ಎಂದು ತಿಳಿಸಿದರು.

ಯಾರಿಗೂ ಹೆದರದೇ ಒಳ್ಳೆಯ ಕೆಲಸ ಮಾಡಿ. ಜನರ ಪ್ರೀತಿ ವಿಶ್ವಾಸ ಸಂಪಾದನೆ ಮಾಡಿ. ಬಡವರಿಗೆ ಸಹಾಯ ಮಾಡಿ. ಕೆಲ ಮಾಹಿತಿ ಹಕ್ಕು ಕಾರ್ಯಕರ್ತರ ಹಾವಳಿ ಹೆಚ್ಚಾಗಿದ್ದು, ನಿಮ್ಮ ಕೆಲಸವನ್ನು ನೀವು ಅಚ್ಚುಕಟ್ಟಾಗಿ ಮಾಡಿದರೇ ಯಾರಿಗೂ ಅಂಜಬೇಡಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಸಭೆಯಲ್ಲಿ ಮೂಡಲಗಿ ತಹಶೀಲದಾರ ಪ್ರಶಾಂತ ಚಿನಗೊಂಡ, ಗೋಕಾಕ ತಹಶೀಲದಾರ ಮಂಜುನಾಥ ಕೆ, ಮೂಡಲಗಿ ತಾ.ಪಂ ಇಓ ಎಫ್.ಜಿ.ಚಿನ್ನನವರ, ಗೋಕಾಕ ತಾ.ಪಂ ಇಓ ಮುರಳಿಧರ ದೇಶಪಾಂಡೆ, ಮೂಡಲಗಿ-ಗೋಕಾಕ ತಾಲೂಕಿನ ಪಿಡಿಓ, ಇಂಜಿನಿಯರ್, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group