ಮೈಸೂರು ಕರ್ನಾಟಕ ರಾಜ್ಯದ ಸಾಂಸೃತಿಕ ರಾಜದಾನಿ. ಕನ್ನಡ ನಾಡು-ನುಡಿ ರಕ್ಷಣೆಗಾಗಿ ಹೋರಾಟಗಳು ಆರಂಭಗೊಂಡಿರುವುದು ಮೈಸೂರು ನಗರದಿಂದಲೇ. ಮೈಸೂರು ಯದುವಂಶದ ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ನಾಡಿನ ಅಭಿವೃದ್ದಿಗೆ ನೀಡಿದ ಕೊಡುಗೆ ಅಪಾರ.ಕನ್ನಡ ನಾಡು-ನುಡಿ , ನೆಲ- ಜಲ ಸಂರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಗೊಂಡಿದ್ದೂ ಸಹ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದಲೇ ಎನ್ನುವುದು ಮೈಸೂರು ನಗರದ ಹೆಗ್ಗಳಿಕೆ.
ಇಂತಹ ಮೈಸೂರಿನ ಕನ್ನಡ ನಾಡು- ನುಡಿ ಮಿಡಿತಕ್ಕೆ ಇಲ್ಲಿನ ಜೆ.ಕೆ. ಟೈರ್ಸ್ ಸಂಸ್ಥೆ ಆಂಗ್ಲ ಭಾಷಾ ಫಲಕಗಳನ್ನು ಅಳವಡಿಸುವ ಮೂಲಕ ಧಕ್ಕೆ ತಂದಿದೆ ಎಂದು ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ದೂರಿದ್ದಾರೆ.
ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಅವರಿಗೆ ದೂರು ನೀಡಿರುವ ಅವರು ಮೈಸೂರಿನ ಮಾನಸ ಗಂಗೋತ್ರಿ ಬಳಿ ಇರುವ ಜಯಚಾಮರಾಜೇಂದ್ರ ಇಂಜನಿಯರಿಂಗ್ ಕಾಲೇಜು ಮುಂಭಾಗ, ಕೆ.ಆರ್.ಎಸ್ ರಸ್ತೆಯಲ್ಲಿರುವ ಗೋಕುಲಂ ಬಸ್ ನಿಲ್ದಾಣ (ಇ.ಎಸ್.ಐ ಆಸ್ಪತ್ರೆ ಎದುರು) ಇರುವ ಬಸ್ ನಿಲ್ದಾಣಗಳ ತುಂಬಾ ಆಂಗ್ಲ ಭಾಷಾ ನಾಮಫಲಕಗಳನ್ನು ಅಳವಡಿಸುವ ಮೂಲಕ ಜೆ.ಕೆ. ಟೈರ್ಸ್ ಸಂಸ್ಥೆ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೂಡಲೇ ಶಿಸ್ತಿನ ಕ್ರಮ ಕೈಗೊಂಡು, ಎಲ್ಲೆಡೆಕನ್ನಡ ಭಾಷಾ ನಾಮಫಲಕಗಳನ್ಬು ಅಳವಡಿಸುವಂತೆ ಜೆ.ಕೆ. ಟೈರ್ಸ್ ಸಂಸ್ಥೆಗೆ ಕಠಿಣ ಆದೇಶ ನೀಡಬೇಕೆಂದು ಭೇರ್ಯ ರಾಮಕುಮಾರ್ ಆಗ್ರಹಪಡಿಸಿದ್ದಾರೆ.