ಬೈಲಹೊಂಗಲ : ಕನ್ನಡ ನಾಡು, ನುಡಿಯ ರಕ್ಷಣೆಯ ಉದ್ದೇಶದಿಂದ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆ ಸಂಸ್ಥೆ ಎಂದು ಹಿರಿಯ ಶಿಕ್ಷಣ ತಜ್ಞರಾದ ಗುರುಪುತ್ರಪ್ಪ ತುರಮರಿ ಹೇಳಿದರು.
ಪಟ್ಟಣದ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೈಲಹೊಂಗಲ ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 110 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
1915 ರಲ್ಲಿ ಸ್ಥಾಪನೆಗೊಂಡ ಪರಿಷತ್ತಿನ ಕನ್ನಡಪರ ಕಾರ್ಯಗಳನ್ನು ಮೆಚ್ಚಲೇಬೇಕು ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಪಟ್ಟಿಹಾಳ ಕೆ.ಬಿ ಗ್ರಾಮದ ಶ್ರೀಬಸವೇಶ್ವರ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಎಸ್.ಎಂ. ಪಾಟೀಲ ‘ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತ ಮಾತನಾಡಿ ಸಾಕಷ್ಟು ಸದುದ್ದೇಶಗಳನ್ನು ಇಟ್ಟುಕೊಂಡು ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರ ಮನಸ್ಸಿಗೆ ಇನ್ನಷ್ಟು ಆಪ್ತವಾಗಬೇಕು ಹಾಗೂ ಪರಿಷತ್ತಿಗೆ ಪ್ರತಿಯೊಬ್ಬರೂ ಬೆಂಬಲವಾಗಿ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು. ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ದೂರದೃಷ್ಟಿ, ಕನ್ನಡಾಭಿಮಾನ ಪ್ರಶಂಸನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಎನ್.ವಿ.ವಿ.ಎಸ್ ಐಟಿಐ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಎಸ್.ಡಿ. ಮಡಿವಾಳರ ಮಾತನಾಡಿ ವಿದ್ಯಾರ್ಥಿಗಳು ಪರಿಷತ್ತಿನ ಇತಿಹಾಸ, ಪರಂಪರೆಯನ್ನು ಅರಿಯಬೇಕು ಎಂದರು. ಯುವಜನತೆ ಕನ್ನಡ ಸಾಹಿತ್ಯವನ್ನು ಓದುವ ಕಡೆಗೆ ಹೆಚ್ಚು ಒಲವು ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವುದರ ಮೂಲಕ ಕನ್ನಡ ಕಟ್ಟುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸಾಕಷ್ಟು ಶ್ರೇಷ್ಠ ಸಾಹಿತಿಗಳಿದ್ದು ಅವರ ಜೀವನ-ಸಾಹಿತ್ಯವನ್ನು ಪರಿಚಯ ಮಾಡಿಕೊಳ್ಳುವ ಕುತೂಹಲ ನಮ್ಮದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪ್ರಕಾಶ ಮೆಳವಂಕಿ, ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ, ಪದಾಧಿಕಾರಿಗಳಾದ ಸಂತೋಷ ಹಡಪದ, ಲಕ್ಷ್ಮೀ ಮುಗಡ್ಲಿಮಠ, ಎಸ್.ಎನ್.ವಿ.ವಿ.ಎಸ್ ಐಟಿಐ ಕಾಲೇಜಿನ ಸಿಬ್ಬಂದಿಗಳಾದ ಕೆ.ಐ.ಮುಜಾವರ, ವಿ.ವಿ.ಕರವಿನಕೊಪ್ಪ, ಜಿ.ಎಂ.ಭಜಂತ್ರಿ, ಎಂ.ಆರ್.ಬಾಳೇಕುಂದರಗಿ, ಪಿ.ವಿ.ರಾವುಲ್, ಕೆ.ಎಸ್.ಜೈನರ, ಐ.ಎಂ.ಈಟಿ, ಎನ್.ಎಸ್.ಮರಕುಂಬಿ, ಬಿ.ಎಸ್.ರೋಡಬಸನ್ನವರ, ಎಸ್.ಆರ್.ಪಾಟೀಲ ಹಾಗೂ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಎಸ್.ಆರ್.ಸಂಕೇಶ್ವರ ಸ್ವಾಗತಿಸಿದರು. ಚನ್ನಮ್ಮ ಪಾಟೀಲ ಪ್ರಾರ್ಥಿಸಿದರು. ಕೆ.ಎಸ್.ಹಿರೇಮೇತ್ರಿ ನಿರೂಪಿಸಿದರು. ಪಿ.ಎಂ.ಡಬ್ಬ ವಂದಿಸಿದರು.