ಧಾರವಾಡದ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಆಶ್ರಯದಲ್ಲಿ ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ನಿನ ಅಧ್ಯಕ್ಷ ಭಾಲಚಂದ್ರ ಜಾಬಶೆಟ್ಟಿ ಸೌರ ವಿದ್ಯುತ್ ಉತ್ಪಾದನಾ ಅವಕಾಶಗಳು ಮತ್ತು ಸಬ್ಸಿಡಿ ಲಭ್ಯತೆ ಕುರಿತು ಉಪನ್ಯಾಸ ನೀಡಿದರು.
ಸೂರ್ಯನಿಂದ ಉಚಿತವಾಗಿ ದೊರೆಯುವ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಕುರಿತು ಸಮಗ್ರ ಮಾಹಿತಿ ನೀಡಿದರು.
ಕೇಂದ್ರ ಸರಕಾರವು ಘೋಷಿಸಿದ “ಸೂರ್ಯ ಘರ” ಯೋಜನೆಯ ಕುರಿತು ವಿವರಿಸಿದ ಅವರು, ಫೋಟೋ- ವೋಲ್ಟಾಯಿಕ್ ಸೆಲ್ ಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಆಗುತ್ತಿರುವ ಸಂಶೋಧನೆ ಹಾಗೂ ಅದರಿಂದಾಗಿ ಮಾಳಿಗೆಯ ಮೇಲೆ ಅಳವಡಿಸುತ್ತಿರುವ ಸೋಲಾರ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನಾ ವೆಚ್ಚದಲ್ಲಿ ಗಣನೀಯ ಇಳಿಕೆಯನ್ನು ಗಮನಿಸಬಹುದು, ಜೊತೆಗೆ ಮೂರು ಕಿಲೋ ವ್ಯಾಟ್ ಉತ್ಪಾದನಾ ಘಟಕಗಳಿಗೆ ಸರಕಾರದಿಂದ ರೂ. 78000/- ಗಳ ಸಹಾಯಧನ ದೊರೆಯುವ ಕುರಿತು ವಿವರಣೆ ನೀಡಿದರು.
ಸೋಲಾರ ಪ್ಯಾನೆಲಗಳ ಗುಣಮಟ್ಟ ಸುಧಾರಣೆಗಳಿಗೆ ನಡೆಯುತ್ತಿರುವ ಸಂಶೋಧನೆ ಕುರಿತು ವಿವರಣೆ ನೀಡುವ ಸಂದರ್ಭದಲ್ಲಿ, ಪ್ರಥಮದಲ್ಲಿನ ಪಾಲಿಕ್ರಷ್ಟಲೈನ್, ಮೋನೋಕ್ರಷ್ಟಲೈನ್, ಮೋನೋಕ್ರಷ್ಟಲೈನ್ ಪರ್ಕ, ಮೋನೋಕ್ರಷ್ಟಲೈನ್ ಪರ್ಕ ಹಾಫ್ ಕಟ್, ಬೈಫೇಸಿಯಲ್, ಟಾಪ್ ಕಾನ್, ಹಾಗೂ ಎಚ್.ಜೆ.ಟಿ. ಮುಂತಾದ ಸೌರಫಲಕಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು, ವಿವಿಧ ಸೌರಫಲಕಗಳನ್ನು ಅಳವಡಿಸಿ ಉತ್ಪಾದಿಸಬಹುದಾದ ಗರಿಷ್ಟ ವಿದ್ಯುಚ್ಛಕ್ತಿ ಪ್ರಮಾಣದ ಕುರಿತು ಅಂಕಿ ಸಂಖ್ಯೆ ಗಳನ್ನಾಧರಿಸಿದ ವಿಷಯ ಮಂಡಿಸಿದರು.
ಸೌರಫಲಕಗಳಿಂದ ಗರಿಷ್ಠ ವಿದ್ಯುತ್ ಉತ್ಪಾದನೆಗಾಗಿ ಅಳವಡಿಸಬಹುದಾದ ಇತರೆ ಉಪಘಟಕಗಳಾದ ಡಿಸಿಡಿಬಿ, ಎಸಿಡಿಬಿ, ಸೋಲಾರ ಇನ್ವರ್ಟರ್, ಲೈಟನಿಂಗ್ ಅರೆಸ್ಟರ್, ರಾಸಾಯನಿಕ ವಿದ್ಯುತ್ ವಾಹಕ ಗುಂಡಿ ಅಳವಡಿಕೆ, ಸ್ಟ್ರಕ್ಚರ್ ಗಳ ನಿರ್ಮಾಣ, ನೆಟ್ ಮೀಟರಿಂಗ್, ಹಾಗೂ ಅಳವಡಿಕೆ ಮಾಡಲು ತಗಲುವ ಖರ್ಚುವೆಚ್ಚಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಸೌರಫಲಕಗಳ ಅಳವಡಿಕೆಯ ದಿಕ್ಕು, ‘ಟಿಲ್ಟ್ ಆ್ಯಂಗಲ್’, ‘ಅಝಮತ್ ಆ್ಯಂಗಲ್’ ಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಹಾಗೆ ಮಾಡುವುದರಿಂದ ದೊರೆಯುವ ಪ್ರಯೋಜನಗಳ ಕುರಿತೂ ಸಹ ವಿವರಿಸಿದರು.
ಸೌರಫಲಕಗಳ ರಚನೆ, ವಿವಿಧ ತಂತ್ರಜ್ಞಾನಗಳ ಅಳವಡಿಕೆಯಿಂದ ಉತ್ಪಾದನಾ ವಿಧಾನಗಳ ಕುರಿತು ವಿವರಿಸಿದರು.
ಭೌತಶಾಸ್ತ್ರದ ಉಪನ್ಯಾಸಕ ಟಿ.ಎಂ. ಶ್ರೀಧರ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿನದತ್ ಹಡಗಲಿ ಕಾರ್ಯಕ್ರಮ ನಿರೂಪಿಸುವ ಜೊತೆಗೆ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ನವೀನಶಾಸ್ತ್ರಿ ಪುರಾಣಿಕ ವಂದಿಸಿದರು.
ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ, ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ಡಾ.ಕೊಲೋಳಗಿ, ಡಾ.ಪೂರ್ಣಿಮಾ ಗೌರೋಜಿ, ಅಶೋಕ ಗೌರೋಜಿ, ಜಿ.ಜಿ.ಗೊಂದಿ, ನಾರಾಯಣ ರಸಾಳಕರ, ಚಿದಂಬರ ನಿಂಬರಗಿ ಮುಂತಾದವರು ಉಪಸ್ಥಿತರಿದ್ದರು