ಕಳ್ಳಕಾಕರು ಬಂದು ಕದ್ದೊಯ್ದರೆನ್ನದಿರು
ಧನಕನಕ ಹೋಯ್ತೆಂದು ಚಿಂತಿಸದಿರು
ಅಲ್ಲಿ ಭೋಗಿಸುವವನು ಇಲ್ಲಿ ಭೋಗಿಸುವವನು
ಆ ದೇವನೊಬ್ಬವನೆ – ಎಮ್ಮೆತಮ್ಮ
ಶಬ್ಧಾರ್ಥ
ಭೋಗಿಸುವವನು = ಅನುಭವಿಸುವವನು
ತಾತ್ಪರ್ಯ
ಯಾರಾದರು ಕಳ್ಳರು ಬಂದು ನಿನ್ನ ವಸ್ತ್ರ ಒಡವೆ ಧನಕನಕ
ಕಳ್ಳತನ ಮಾಡಿದರೆ ಚಿಂತೆ ಮಾಡಬೇಡ. ಅಂಥ ಚಿಂತೆಯಿಂದ
ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದಕಾರಣ ಹೋದದ್ದು
ಹೋಯಿತು ಮತ್ತೆ ಬರುವುದಿಲ್ಲ ಎಂದು ಅರ್ಥಮಾಡಿಕೊಂಡು ಚಿಂತಿಸುವುದನ್ನು ಬಿಡಬೇಕು. ಎಲ್ಲರಲ್ಲಿ ಆ ಪರಮಾತ್ಮನು ವಾಸವಾಗಿದ್ದಾನೆ ಎಂದು ಸಮಾಧಾನಪಡಬೇಕು. ನೀನು ಬೇರಲ್ಲ ಆ ಕಳ್ಳ ಬೇರಲ್ಲ. ನೀವಿಬ್ಬರು ಆ ದೇವನ ಸ್ವರೂಪ.
ಆ ವಸ್ತುಗಳನ್ನು ಇಲ್ಲಿ ಬಳಸುವವನು ನೀನು ಮತ್ತು ಅಲ್ಲಿ
ಬಳಸುವವನು ಕಳ್ಳ . ಯಾರು ಬಳಸಿ ಅನುಭವಿಸುವವನು
ಆ ಪರಮಾತ್ಮಎಂಬ ಭಾವ ಇದ್ದರೆ ಮಾನಸಿಕ ಒತ್ತಡಗಳು
ಉಂಟಾಗುವುದಿಲ್ಲ. ವಿಶಾಲ ಮನೋಭಾವನೆಯನ್ನು
ಬೆಳೆಸಿಕೊಂಡರೆ ಸಮಾಧಾನ ಶಾಂತಿ ದೊರಕುತ್ತದೆ.
ಬಸವಣ್ಣನವರು ಎಲ್ಲರಲ್ಲಿ ದೇವನನ್ನು ಕಂಡವರು.
ಗೋಶಾಲೆಯಲ್ಲಿರುವ ಆಕಳುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದಾಗ ‘ಆಕಳ ಕಳ್ಳರು ಕೊಂಡೊಯ್ದರೆನ್ನದಿರಿಂಭೋ ನಿಮ್ಮ ಧರ್ಮ, ಅಲ್ಲಿ ಉಂಬರೆ ಸಂಗ ಇಲ್ಲಿ ಉಂಬರೆ ಸಂಗ, ಕೂಡಲಸಂಗಮದೇವ ಏಕೋ ಭಾವ’ ಎನ್ನುತ್ತಾರೆ. ಕಳ್ಳತನಕ್ಕೆ ಬಂದ ಕಳ್ಳರಲ್ಲಿಯೂ ಕೂಡಲ ಸಂಗಮನನ್ನು ಕಂಡವರು ಬಸವಣ್ಣನವರು. ಇಂಥ ಬಸವಣ್ಣನವರ ಭಾವ ನಮ್ಮ ನಿಮ್ಮಲ್ಲಿ ಬರಬೇಕು.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990