ಅಣಕವಾಡು ಕವನ : ಹೊನ್ನಳ್ಳಿಯಾಕಿ

Must Read

ಹೊನ್ನಳ್ಳಿಯಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ಭಾರಿ ಜರಿಯ ರೇಷ್ಮೆ ಸೀರಿ ಉಟ್ಟುಕೊಂಡಾಕಿ
ಕರಿಯ ಹುಬ್ಬು ತಿದ್ದಿಕೋತ ಕಣ್ಣ ಹೊಡೆಯಾಕಿ ಮಾತುಮಾತಿನಲ್ಲಿ ಹಾಸ್ಯ ಉಕ್ಕಿಸುವಾಕಿ
ಏನೋ ಅಂದರ ಏನೋ ಅಂದು ನಕ್ಕು ನಗಿಸಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ತಾಳಿ ಸರಕ ಚಿನ್ನದ ಗುಂಡು ಕೊಡಿಸು ಎಂದಾಕಿ
ಕೈಗೆ ಚಿನ್ನದಬಳಿ ನಾಲ್ಕು ತೊಡಿಸು ಎಂದಾಕಿ
ಪ್ಯಾಟಿಗಿ ಬಂದು ಏಟು ಮಾತು ಕಲಿತುಕೊಂಡಾಕಿ
ಸ್ವಾಟಿ ತಿರುವಿ ಗಲ್ಲ ಚೂಟಿ ಮಳ್ಳ ಮಾಡಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ಬಾರೆ ಅಂದರ ಬರ್ತಿನಂತ ಬಂದುಬಿಡಾಕಿ
ಕೇಳಿದ್ದನ್ನ ಕೊಡಿಸದಿದ್ರ ಹೊರಟು ನಿಲ್ಲಾಕಿ
ಸೀರಿಕುಬುಸ ತಂದುಕೊಟ್ರ ಖುಷಿಯಾಗಾಕಿ
ಎಂಥ ಚೆಲುವ ಚೆನ್ನಿಗಂತ ತಬ್ಬಿಕೊಳ್ಳಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ನೀನೆ ನನ್ನ ಸರದಾರಂತ ಮೆಚ್ಚಿಕೊಂಡಾಕಿ
ನೀನೆ ನನ್ನ ಮನ್ಮಥಂತ ನೆಚ್ಚಿಕೊಂಡಾಕಿ
ಕೊರಳಿನ್ಯಾಗ ಕರಿಮಣಿಸರ ಕಟ್ಟಿಕೊಂಡಾಕಿ
ಬೆರಳಿನ್ಯಾಗ ಒಲವಿನುಂಗರ ಇಟ್ಟುಕೊಂಡಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ಮಾರಿಯಲ್ಲಿ ನಗೀಮಲ್ಲಿಗೆ ಮುಡಿದುಕೊಂಡಾಕಿ
ಕಣ್ಣಿನಲ್ಲಿ ಚಿಕ್ಕಿಬೆಳಕ ತುಂಬಿಕೊಂಡಾಕಿ
ಏಳು ಜಲ್ಮಕ ಹೆಣ್ತಿಯಾಗಿ ಬರ್ತಿನಂದಾಕಿ
ಉಸಿರಿನಲ್ಲಿ ನನ್ನ ಹೆಸರು ಇರಿಸಿಕೊಂಡಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ಮಲ್ಲ ! ಕಲ್ಲ ! ಈರ ! ಬೀರ ! ಬಂದಾಳೇನಾಕಿ ?
ಸಂಗ್ಯ ! ನಿಂಗ್ಯ ಸಿದ್ದಲಿಂಗ್ಯ ! ಎಲ್ಲಿ ನನ್ನಾಕಿ ?
ಸಿಟ್ಟು ಸೆಡವು ಮಾಡಿಕೊಂಡು ಹೋದಾಳ ಜ್ಞಾಕಿ
ದಾರಿ ಕಾದು ನಾನಾಗೀನಿ ಜಾತಕಪಕ್ಷಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

(ದ.ರಾ ಬೇಂದ್ರೆಯವರ ಕವನ “ಹುಬ್ಬಳ್ಳಿಯಾಂವಾ” “ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸರತಿ ಬಂದುಹೋಗಾಂವಾ’ ಧಾಟಿಯಲ್ಲಿ)

ಎನ್‌.ಶರಣಪ್ಪ ಮೆಟ್ರಿ

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group