ಅಣಕವಾಡು ಕವನ : ಹೊನ್ನಳ್ಳಿಯಾಕಿ

Must Read

ಹೊನ್ನಳ್ಳಿಯಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ಭಾರಿ ಜರಿಯ ರೇಷ್ಮೆ ಸೀರಿ ಉಟ್ಟುಕೊಂಡಾಕಿ
ಕರಿಯ ಹುಬ್ಬು ತಿದ್ದಿಕೋತ ಕಣ್ಣ ಹೊಡೆಯಾಕಿ ಮಾತುಮಾತಿನಲ್ಲಿ ಹಾಸ್ಯ ಉಕ್ಕಿಸುವಾಕಿ
ಏನೋ ಅಂದರ ಏನೋ ಅಂದು ನಕ್ಕು ನಗಿಸಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ತಾಳಿ ಸರಕ ಚಿನ್ನದ ಗುಂಡು ಕೊಡಿಸು ಎಂದಾಕಿ
ಕೈಗೆ ಚಿನ್ನದಬಳಿ ನಾಲ್ಕು ತೊಡಿಸು ಎಂದಾಕಿ
ಪ್ಯಾಟಿಗಿ ಬಂದು ಏಟು ಮಾತು ಕಲಿತುಕೊಂಡಾಕಿ
ಸ್ವಾಟಿ ತಿರುವಿ ಗಲ್ಲ ಚೂಟಿ ಮಳ್ಳ ಮಾಡಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ಬಾರೆ ಅಂದರ ಬರ್ತಿನಂತ ಬಂದುಬಿಡಾಕಿ
ಕೇಳಿದ್ದನ್ನ ಕೊಡಿಸದಿದ್ರ ಹೊರಟು ನಿಲ್ಲಾಕಿ
ಸೀರಿಕುಬುಸ ತಂದುಕೊಟ್ರ ಖುಷಿಯಾಗಾಕಿ
ಎಂಥ ಚೆಲುವ ಚೆನ್ನಿಗಂತ ತಬ್ಬಿಕೊಳ್ಳಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ನೀನೆ ನನ್ನ ಸರದಾರಂತ ಮೆಚ್ಚಿಕೊಂಡಾಕಿ
ನೀನೆ ನನ್ನ ಮನ್ಮಥಂತ ನೆಚ್ಚಿಕೊಂಡಾಕಿ
ಕೊರಳಿನ್ಯಾಗ ಕರಿಮಣಿಸರ ಕಟ್ಟಿಕೊಂಡಾಕಿ
ಬೆರಳಿನ್ಯಾಗ ಒಲವಿನುಂಗರ ಇಟ್ಟುಕೊಂಡಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ಮಾರಿಯಲ್ಲಿ ನಗೀಮಲ್ಲಿಗೆ ಮುಡಿದುಕೊಂಡಾಕಿ
ಕಣ್ಣಿನಲ್ಲಿ ಚಿಕ್ಕಿಬೆಳಕ ತುಂಬಿಕೊಂಡಾಕಿ
ಏಳು ಜಲ್ಮಕ ಹೆಣ್ತಿಯಾಗಿ ಬರ್ತಿನಂದಾಕಿ
ಉಸಿರಿನಲ್ಲಿ ನನ್ನ ಹೆಸರು ಇರಿಸಿಕೊಂಡಾಕಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

ಮಲ್ಲ ! ಕಲ್ಲ ! ಈರ ! ಬೀರ ! ಬಂದಾಳೇನಾಕಿ ?
ಸಂಗ್ಯ ! ನಿಂಗ್ಯ ಸಿದ್ದಲಿಂಗ್ಯ ! ಎಲ್ಲಿ ನನ್ನಾಕಿ ?
ಸಿಟ್ಟು ಸೆಡವು ಮಾಡಿಕೊಂಡು ಹೋದಾಳ ಜ್ಞಾಕಿ
ದಾರಿ ಕಾದು ನಾನಾಗೀನಿ ಜಾತಕಪಕ್ಷಿ

ಇನ್ನು ಯಾಕ ಬರಲಿಲ್ಲಯ್ಯೋ ಹೊನ್ನಳ್ಳಿಯಾಕಿ !
ವಾರದಾಗ ಬರ್ತಿನಂತ ಹೇಳಿ ಹೋದಾಕಿ

(ದ.ರಾ ಬೇಂದ್ರೆಯವರ ಕವನ “ಹುಬ್ಬಳ್ಳಿಯಾಂವಾ” “ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸರತಿ ಬಂದುಹೋಗಾಂವಾ’ ಧಾಟಿಯಲ್ಲಿ)

ಎನ್‌.ಶರಣಪ್ಪ ಮೆಟ್ರಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group