ಮೂಡಲಗಿ: ಸಾರ್ವಜನಿಕರು ಮನೆಯಲ್ಲಿ ಉಪಯೋಗಿಸಿ ಬಿಸಾಡುವ ವಸ್ತುಗಳನ್ನು ಪುರಸಭೆಗೆ ತಂದುಕೊಟ್ಡರೆ ಅವರಿಗೆ ಕಾಣಿಕೆಯಾಗಿ ವಸ್ತುಗಳನ್ನು ನಾವು ನೀಡುತ್ತೇವೆ. Reuse (ಮರುಬಳಕೆ), Reduce (ತ್ಯಾಜ್ಯ ಕಡಿಮೆ ಮಾಡುವುದು) ಹಾಗೂ Re cycle (ರೂಪಾಂತರಗೊಳಿಸಿ ಮರುಬಳಕೆ) RRR ಎಂದು ಕರೆಯುವ ಈ ಯೋಜನೆಯನ್ನು ಮೇ ೨೦ ರಿಂದ ಜೂನ್ ಐದರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಹೇಳಿದರು.
ಅವರು ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಯೋಜನೆ ಅಡಿಯಲ್ಲಿ RRR ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಾರ್ವಜನಿಕರು ಕೆಟ್ಟುಹೋದ ಮಕ್ಕಳ ಆಟಿಕೆಗಳು, ಇಲೆಕ್ಟ್ರಾನಿಕ್ ವಸ್ತುಗಳು, ಪೇಪರ್,ಮುಂತಾದ ವಸ್ತುಗಳನ್ನು ನಮಗೆ ನೀಡಿದರೆ ಪುರಸಭೆಯಿಂದ ಎರೆಹುಳ ಗೊಬ್ಬರ, ಕೈಚೀಲ, ಸಸಿಗಳನ್ನು ಕಾಣಿಕೆಯಾಗಿ ಕೊಡಲಾಗುವುದು. ಸ್ವಚ್ಛ ನಗರಕ್ಕೆ ಉತ್ತೇಜನ ನೀಡಲು ಈ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಪುರಸಭೆಯ ಕಚೇರಿ ನಿರ್ವಹಣಾಧಿಕಾರಿ ಜ್ಯೋತಿ ಉಪ್ಪಾರ ಮಾತನಾಡಿ, ಕಸದಿಂದ ರಸ ತೆಗೆಯುವ ಯೋಜನೆ ಇದಾಗಿದ್ದು ನೀವು ನೀಡಿದ ವಸ್ತುಗಳನ್ನು ನಾವು ಮರಬಳಸುತ್ತೇವೆ. ನೀವು ನೀಡಿದ ವಸ್ತುಗಳನ್ನು ಬಡ ಮಕ್ಕಳಿಗೆ, ಬಾಲಾಪರಾಧಿ ಕೇಂದ್ರಗಳಿಗೆ, ಅನಾಥಾಶ್ರಮಗಳಿಗೆ ನೀಡುತ್ತೇವೆ ಎಂದರು.
ಉದ್ಘಾಟನೆಯನ್ನು ಅಮೃತ ಬೋಧ ಸ್ವಾಮೀಜಿ ನೆರವೇರಿಸಿ ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಆಗಬೇಕು. ಸಾರ್ವಜನಿಕರ ಮನೆ ಮನೆಗೂ ಇದರ ವೈಶಿಷ್ಟ್ಯ ತಲುಪುವಂತೆ ಆಗಬೇಕು.
ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಅನ್ವರ ನದಾಫ, ಶಿವು ಸಣ್ಣಕ್ಕಿ, ಹಾಗೂ ಪುರಸಭೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.