spot_img
spot_img

“ಸ್ವರ್ಗನರಕ” ಚಿಣ್ಣರ ಲೋಕದ ಚೆಂದದ ಕಥೆಗಳು

Must Read

- Advertisement -

‘ಸ್ವರ್ಗನರಕ’ ಕಥಾಸಂಕಲನ ಮಕ್ಕಳಿಗಾಗಿ ರಚಿಸಿದ ಸುಂದರ ಕೃತಿ. ಕತೆಗಾರ ಕಡಕೋಳರ ಸೃಜನಶೀಲ ಸಾಹಿತ್ಯದ ಶಕ್ತಿಯ ಹೊಸ ಕುರುಹು. ಅಜ್ಜಿ ಹೇಳಿದ ಕತೆಗಳ ಜಾಡಿನಲ್ಲಿ ಇಲ್ಲಿನ ಕತೆಗಳು ಮೂಡಿ ಬಂದಿವೆ. ಗ್ರಾಮೀಣ ಬದುಕಿನ ಗಂಧ ಗಾಳಿ ಬಡಿಸಿಕೊಂಡು ಬೆಳೆದ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳರ ಆ ಅಂಶಗಳು ಕತೆಯಲ್ಲಿ ಮೂಡಿ ಕತೆಯ ಕಸುವಿಗೆ ಪುಷ್ಠಿ ನೀಡಿವೆ. ಇಲ್ಲಿ ‘ಯಾರು ದುರಾದೃಷ್ಟಶಾಲಿಗಳು?’ ಕತೆಯಿಂದ ಆರಂಭವಾಗಿ ‘ರೂಪಕ್ಕಿಂತ ಗುಣಮುಖ್ಯ ‘ ದವರಗೆ 30 ಕತೆಗಳು ಸುಂದರವಾಗಿ ಅರಳಿವೆ.

ಈ ಕೃತಿ ಬೆಂಗಳೂರಿನ ಎಸ್.ಎಲ್.ಎನ್. ಪಬ್ಲಿಕೇಷನ್‍ನಿಂದ ಪ್ರಕಟಗೊಂಡಿದೆ. ಚಿಣ್ಣರಲೋಕದ ಕತೆ ಬರೆಯಲು ಸ್ಫೂರ್ತಿ ತಾಯಿ ಹಾಗೂ ಅಜ್ಜಿಯರು. ಅವರು ಕತೆಗಾರರು ಚಿಕ್ಕವರಿದ್ದಾಗ ಹೇಳಿದ ಕತೆಗಳಿಗೆ ಸೃಜನಶೀಲ ಬೆಸುಗೆ ಹಾಕಿ ಒಂದಿಷ್ಟು ಬದಲಾವಣೆ ಮಾಡಿಕೊಂಡು ಗ್ರಾಮೀಣ ಬದುಕಿನ ವಿಷಯ ವಸ್ತು ಆಯ್ದುಕೊಂಡು ಹವಳದಂತೆ ಪೋಣಿಸಲು ಪ್ರಯತ್ನಿಸಿದ್ದಾರೆ.

ಇವರ ಚೊಚ್ಚಿಲ ಕತೆ ‘ಮಾತೆಯ ಮೌಲ್ಯ’ ಪತ್ರಿಕೆಗೆ ಬರೆಯುವದರ ಮೂಲಕ ಕಥಾರಂಭ ಮಾಡಿದವರು ತೊಂಬತ್ತರ ದಶಕದಲ್ಲಿ. ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವದರಿಂದ ಎಳೆಯ ಮನಸ್ಸುಗಳ ಸ್ಥಿತಿ ನಿತ್ಯವೂ ಕಾಣುವ ಇವರು ಅವರ ಅಭಿರುಚಿಗೆ ತಕ್ಕಂತೆ ಕತೆಗಳನ್ನು ರಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಇಲ್ಲಿ ಮಾಡಿರುವರು. ಕತೆಗಳ ಪ್ರಭಾವದಿಂದ ಮಕ್ಕಳ ಮನಸ್ಸು ಆನಂದದಿ ಪುಳಕಿತವಾಗಿ ಅವರ ಬುದ್ದಿಮತ್ತೆ ವಿಸ್ತರಿಸುವ ಕುರುಹುಗಳೆಂದರೆ ಸೃಜನಶೀಲತೆ.

- Advertisement -

ಅದರಲ್ಲೂ ಅಮ್ಮ ಹಿಂದೆ ಹೇಳುತ್ತಿದ್ದ ಕತೆಗಳು ಇಂದಿನ ಜಾಗತೀಕರಣ ದಿನದಲ್ಲಿ ಮಾಯವಾಗಿ ಮೊಬೈಲ್ ಸಂಸ್ಕೃತಿ ಹೆಚ್ಚಾಗಿ ಮಕ್ಕಳು ಹಾಳಾಗುವ ಕೆಟ್ಟ ಪರಂಪರೆ ಬೆಳೆಸುತ್ತಿದ್ದ ಕಾಲಕ್ಕೆ ತಕ್ಕಂತೆ, ಸುಂದರ ವ್ಯವಸ್ಥೆಗೆ ನಾವೆ ಮಾರಕವಾಗಿದ್ದೆವೆ ಎಂದರೆ ತಪ್ಪಾಗಲಾರದು ಎನಿಸುತ್ತದೆ. ಕಡಕೋಳ ಅವರು ವೃತ್ತಿ ಜೀವನದ ಜೊತೆಗೆ ಕತೆಯನ್ನು ಬರೆಯುತ್ತ ಚಿಣ್ಣರಲೋಕಕ್ಕೂ ಹತ್ತಿರವಾಗಿರುವದು ನಿಜವಾಗಲೂ ಹೆಮ್ಮೆ ಪಡುವ ವಿಚಾರ. ಇವರ ಕಥಾರಚನೆ ನಿತ್ಯ ನಿರಂತರ ಹೀಗೆ ಸಾಗಲಿ ತುಂಬಿದ ಹೊಳೆಯಂತೆ.

ಆರಂಭದ ಕತೆ ‘ಯಾರು ದುರಾದೃಷ್ಟ ಶಾಲಿಗಳು?’ ಕತೆ ಮೌಢ್ಯತೆಯ ಪರಾಕಾಷ್ಠೆಯನ್ನು ಬಿಂಬಿಸುತ್ತದೆ. ಚಂದ್ರಸೇನನ ಆಸ್ಥಾನದಲ್ಲಿ ಇದ್ದ ಕುರೂಪಿ ‘ಕಪ್ಪಣ್ಣ’ನ ಮುಖ ನೋಡಿದರೆ ಬೆಳಿಗ್ಗೆ ತೊಂದರೆಯಾಗುತ್ತದೆ ಎಂಬ ಸುದ್ದಿ ಜನಸಾಮಾನ್ಯರಲ್ಲಿ ಹೆಚ್ಚಾಗಿ ಕೊನೆಗೆ ರಾಜನವರೆಗೆ ಹೋಗುತ್ತದೆ. ರಾಜ ಒಂದು ದಿನ ಅವನನ್ನು ಕರೆಸಿ ತನ್ನ ಅರಮನೆಯಲ್ಲಿ ಇಟ್ಟುಕೊಂಡು ಬೆಳಿಗ್ಗೆ ಕಪ್ಪಣ್ಣನ ಮುಖ ನೋಡಿದನು. ನೋಡಿದ ದಿನ ರಾಜನ ಊಟದ ತಾಟಿನಲ್ಲಿ ಹಲ್ಲಿ ಬೀಳುವದು.

ಇದನ್ನು ಗಮನಿಸಿದ ರಾಜ ಕಪ್ಪಣ್ಣನಿಗೆ ಗಲ್ಲು ಶಿಕ್ಷೆಗೆ ಆದೇಶಿಸುವನು. ಕಪ್ಪಣ್ಣನ ಕೊನೆಯ ಆಸೆ ಕೇಳಿದಾಗ ಅವನು ಏನು ತಪ್ಪು ಮಾಡದ ನಾನು ಊರ ಜನ ತಮ್ಮ ತಮ್ಮ ಕಾರ್ಯದಲ್ಲಿ ಏನಾದರೂ ಅನಾಹುತ ಸಂಭವಿಸಿ ಅಂದು ನನ್ನ ನೋಡಿದ್ದಕ್ಕಾಗಿ ಈ ರೀತಿಯಾಯಿತು ಅಂದುಕೊಂಡು ನನ್ನ ಜಾತಕ, ಹಿನ್ನೆಲೆಗೆ ಅಳವಡಿಸಿದರೆ ನಾನು ಹೊಣೆಯೆ? ಎಂದು ಕಪ್ಪಣ್ಣ ಪ್ರಶ್ನಿಸಿದಾಗ, ರಾಜನ ಮುಖ ತಕ್ಷಣ ಬಾಡಿಹೋಯಿತು. ಸತ್ಯದ ಅರಿವಾಯಿತು. ಮಾರನೆಯ ದಿನ ಊರಿನ ಜನರು ಕಪ್ಪಣ್ಣನನ್ನು ತಮ್ಮಂತೆ ಒಬ್ಬ ಎಂದು ಕಾಣಿರಿ ಎಂದು ಆದೇಶಿದ ಇಲ್ಲಿಗೆ ಕತೆ ಮುಕ್ತಾಯಗೊಳ್ಳುತ್ತದೆ. ಜನರು ಹಾಗೂ ರಾಜನ ಮೌಢ್ಯವನ್ನು ಒಬ್ಬ ಸಾಮಾನ್ಯ ಮನುಷ್ಯ ಹೊರದೂಡುವ ವೈಚಾರಿಕ ಅಂಶ ಕಥೆಯಲ್ಲಿ ನಿಚ್ಚಳವಾಗಿ ಮೂಡಿಬಂದಿರುವದು ಅರ್ಥಪೂರ್ಣವೆನಿಸಿದೆ.

- Advertisement -

‘ಸ್ವರ್ಗನರಕ’ ಕತೆಯಲ್ಲಿ ‘ತಿಮ್ಮ’ ಎಂಬ ಬಾಲಕ ತಾಯಿ ಮಾತಿನಿಂದ ಪರಿವರ್ತನೆಯಾದ ಅಂಶ ಕಂಡುಬರುತ್ತದೆ. ಸ್ವರ್ಗದ ಕಲ್ಪನೆ ಬೆನ್ನುಹತ್ತಿದ ಬಾಲಕ ಉಡಾಫೆ ಆದರೆ ತಪಸ್ಸು ಮಾಡಲು ನಿರ್ಧರಿಸುತ್ತಾನೆ. ಆಗ ದೇವರು ಪ್ರತ್ಯಕ್ಷನಾಗಿ ಇದು ದೊಡ್ಡ ಪ್ರಶ್ನೆ ಅಲ್ಲ ಇದನ್ನು ನಿಮ್ಮ ಊರಿನಲ್ಲಿ ಮೂಲಿಮನಿ ಸಂಗಮ್ಮ ಪರಿಹರಿಸುವಳು ಹೋಗಿ ಅವಳನ್ನು ಕೇಳು ಎನ್ನುತ್ತಾನೆ. ಆಗ ಆ ಮುದುಕಿಯಿಂದ ಸ್ವರ್ಗನರಕದ ಅರ್ಥ ತಿಳಿದು ಒಳ್ಳೆಯ ಮನುಷ್ಯನಾಗಿ ಬದುಕುತ್ತಾನೆ. ಕತೆ ಓದುತ್ತ ಹೋದಂತೆ ಕುತುಹಲ ಕೆರಳಿಸುತ್ತದೆ. ಆದರ್ಶದ ಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವಲ್ಲಿ ಈ ಕತೆ ತಕ್ಕಮಟ್ಟಿನ ಯಶಸ್ಸು ಸಾಧಿಸಿದೆ ಎಂದು ಹೇಳಬಹುದು.

‘ನಗುಸುಖದ ಬಾಳು’ ಕತೆ ಬಡತನ ಶ್ರೀಮಂತಿಕೆಯ ವ್ಯತ್ಯಾಸಗಳನ್ನು ತಿಳಿಸುತ್ತದೆ. ಬಡವನ ಪ್ರೀತಿ ತುಂಬಿದ ನಡೆ-ನುಡಿಗಳು, ಶ್ರೀಮಂತನ ದರ್ಪ, ಕಟುಕ ಭಾವನೆಗಳ ಅಂತರವನ್ನು ತಿಳಿಸುತ್ತವೆ. ನಗುತ ಬಾಳಿದರೆ ಅದು ಸುಖ ಬಾಳು ಎನ್ನುವ ಅಂಶ ಈ ಕಥೆಯಲ್ಲಿ ಬಿಂಬಿತವಾದ ಅಂಶ.

‘ಮಾತೆಯ ಮೌಲ್ಯ’ ಒಂದು ಸುಂದರ ಕುಟುಂಬದಲ್ಲಿ ತಾಯಿ ಪಾತ್ರ ಎಷ್ಟು ಇರುತ್ತದೆ ಎನ್ನುವದನ್ನು ಎತ್ತಿಹೇಳುವ ಪ್ರಯತ್ನ ಈ ಕತೆಯಲ್ಲಿ ಅಡಗಿದೆ. ಹಳ್ಳಿಯ ವಾತಾವರಣದ ಹದ, ಮಾತಿನ ದಾಟಿ ಸಹಜತೆ ಕತೆಯಲ್ಲಿ ಹರಿದು ಕತೆಗೆ ಬೆಲೆತಂದಿವೆ. ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯುತ್ತಿರುವ ಕಾಲದಲ್ಲಿ ತಾಯಿಯನ್ನು ಮರೆಯದಿರು ಎನ್ನುವ ಸಂದೇಶವನ್ನು ಹೊತ್ತು ತಂದಿರುವದನ್ನು ಇಲ್ಲಿ ಕಾಣಬಹುದು.

‘ದುರಾಸೆಯ ಫಲ’ ಕತೆಯಲ್ಲಿ ವೈಕುಂಠ ಶಾಂತಾರ ಮುದ್ದಿನ ಮಗಳು ತೇಜಸ್ವಿನಿ. ಇವಳಿಗೆ ಜನ್ಮನೀಡಿದ ತಕ್ಷಣ ತಾಯಿ ಶಾಂತಾ ತೀರಿಹೋಗುವರು. ನಂತರ ಊರವರ ಒತ್ತಾಯಕ್ಕೆ ಮನಿದು ದೇವಕಿ ಎಂಬ ಮಹಿಳೆಯೊಂದಿಗೆ ಮದುವೆಯಾಗಿ ಅವಳ ಕೈಗೊಂಬೆಯಾಗುವನು. ಮಲತಾಯಿ ದೇವಕಿ ತೇಜಸ್ವಿನಿಗೆ ಪ್ರತಿನಿತ್ಯ ಕಾಟಕೊಡುವಳು. ತೇಜಸ್ವಿನಿ ಅದನ್ನು ತಾಳ್ಮೆಯಿಂದ ಸಹಿಸಿ ನಿತ್ಯವು ದನಕಾಯುವ ಕೆಲಸ ಮಾಡುವಳು ಇವಳ ಸೌಂದರ್ಯಕ್ಕೆ ಮಾರುಹೋಗಿ ರಾಜ ಇವಳನ್ನು ಮದುವೆಯಾಗುವನು. ಇದನ್ನು ಸಹಿಸದ ಮಲತಾಯಿ ಇವಳನ್ನು ಸಾಯಿಸಲು ಪ್ರಯತ್ನ ಮಾಡುತ್ತಾಳೆ.

ಇವಳನ್ನು ನಾಗದೇವ ರಕ್ಷಿಸುತ್ತಾನೆ. ರಾಜನ ಮುಂದೆ ಮಲತಾಯಿ ತೇಜಸ್ವಿನಿ ಸತ್ತಳೆಂದು ಹೇಳುತ್ತಾಳೆ. ಇದನ್ನು ನಂಬದ ರಾಜ ಗೂಢಚಾರರಿಂದ ಸ್ಪಷ್ಟಮಾಹಿತಿ ತೆಗೆದು ಸತ್ಯ ಬಯಲಿಗೆ ತೆಗೆಯುತ್ತಾನೆ. ಮಲತಾಯಿಗೆ ಶಿಕ್ಷೆಗೆ ಗುರಿಪಡಿಸುತ್ತಾನೆ. ಸುಖಾಂತ್ಯದಲ್ಲಿ ಕತೆ ಮುಗಿಯುತ್ತದೆ. ಕತೆಯಲ್ಲಿ ಐತಿಹಾಸಿಕ ಘಟನೆಯ ಲೇಪನ, ಉಪದೃಷ್ಟಾಂತಗಳ ಬಳಕೆ ಕತೆಯ ವೇಗಕ್ಕೆ ಒಪ್ಪಿತವಾಗಿವೆ. ಬಳಸಿದ ಭಾಷೆ ಸರಳ ಸುಂದರವಾಗಿದೆ.

ಒಟ್ಟಾರೆ ಮಲತಾಯಿಯ ಅಟ್ಟಹಾಸ, ಹೊಟ್ಟೆ ಕಿಚ್ಚು ಸಂಸ್ಕೃತಿಯನ್ನು ಅಂದವಾಗಿ ಬಿಂಬಿಸುವಲ್ಲಿ ಕತೆಗಾರರು ಯಶಸ್ವಿಯಾಗಿದ್ದಾರೆ.

‘ರೂಪಕ್ಕಿಂತ ಗುಣಮುಖ್ಯ’ ಕತೆಯಲ್ಲಿ ಸೌಂದರ್ಯ ಪ್ರಜ್ಞಯ ಅಹಂಕಾರವನ್ನು ಕೀಟಗಳ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಬಿಳಿ ಕೀಟ ನಾನೆ ಶ್ರೇಷ್ಠವೆಂದು ಸೌಂದರ್ಯದ ಮದದಲ್ಲಿ ಮೆರೆದಾಡುತ್ತಿರುತ್ತದೆ. ಕಪ್ಪು ಕೀಟ ತನ್ನ ಒಳ್ಳೆಯ ಗುಣ ಸಂಪದೊಂದಿಗೆ ಬಾಳು ಸವಿಸುತ್ತಿರುತ್ತದೆ. ಬಿಳಿ ಕೀಟ ಒಮ್ಮೆ ನೀರಿನಲ್ಲಿ ಮುಳಗಿ ಸಾಯುವ ಸಂದರ್ಭದಲ್ಲಿ ಮಾನವಿಯ ಗುಣವುಳ್ಳ ಕಪ್ಪುಕೀಟ ಬೀಳಿ ಕೀಟವನ್ನು ರಕ್ಷಿಸಿ ಅದರ ಪ್ರಾಣವನ್ನು ಉಳಿಸುತ್ತದೆ. ಇಲ್ಲಿ ಸೌಂದರ್ಯಕ್ಕಿಂತ ಗುಣಮುಖ್ಯ ಎನ್ನುವ ನೀತಿಯನ್ನು ಸಾರುತ್ತದೆ ಈ ಕತೆ.

ವೈ.ಬಿ.ಕಡಕೋಳ ಅವರ 30 ಕತೆಗಳು ಬಾಲರ ಬುದ್ದಿ ಮತ್ತೆಗೆ ಅನುಗುಣವಾಗಿ ಸರಳ ಭಾಷೆಯಲ್ಲಿ ರಚಿಸಿದವುಗಳಾಗಿವೆ. ತಂತ್ರ-ಭಾಷೆ ದೃಷ್ಟಿಯಿಂದ ಸಾಮಾನ್ಯವೆನಿಸುತ್ತವೆ. ಕತೆಯಲ್ಲಿ ಆಕರ್ಷಕ ಅಂಶ ಕಡಿಮೆ ಪ್ರಮಾಣದಲ್ಲಿ ಬೆರೆತು ಕತೆಯ ವೇಗಕ್ಕೆ ಅಡ್ಡಿಯಾಗಿದೆ ಎಂದು ಹೇಳಬಹುದು. ವಸ್ತು ವಿಷಯಗಳು ಕೆಲವು ಸಲ ಸ್ಪಷ್ಟತೆಯನ್ನು ನೀಡುವುದಿಲ್ಲ. ಗ್ರಾಮೀಣ ಸೊಗಡು ಕತೆಯಲ್ಲಿ ಅಲ್ಲಲ್ಲಿ ಪ್ರಯೋಗವಾಗಿ ತಕ್ಕ ಮಟ್ಟಿನ ಯಶಸ್ಸಿಗೆ ಕಾರಣವೆನಿಸಿದೆ.

ಮಕ್ಕಳ ದೃಷ್ಟಿಯಿಂದ ನೋಡಿದಾಗ ಉತ್ತಮ ಕತೆಗಳು ಎಂದು ಎದ್ದುಕಾಣುತ್ತವೆ. ಅಲ್ಲಲ್ಲಿ ಇಲ್ಲಿನ ಕತೆಗಳಲ್ಲಿ ವೈಚಾರಿಕ ಅಂಶಗಳು, ಆದರ್ಶ, ತತ್ವ, ಸಿದ್ಧಾಂತ, ಸಿದ್ದ ಸೂತ್ರಗಳು ಕತೆಯ ರಾಶಿಯಲ್ಲಿ ಹೆರಳವಾಗಿ ಹೊಂದಿಕೆಯಾಗಿ ಕತೆಯ ಅಂದವನ್ನು ಹೆಚ್ಚಿಸಿ ಸುಂದರವೆನಿಸಿವೆ. ಮುಂದೆ ಗಟ್ಟಿತನ ತುಂಬಿದ ಮೌಲ್ಯಯುತ ಕತೆಗಳನ್ನು ನಾಡಿಗೆ ಕತೆಗಾರ ಕಡಕೋಳರು ನೀಡಲಿ ಎಂದು ತುಂಬು ಹೃದಯದಿಂದ ಹಾರೈಸುವೆ.



ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ
ಯುವ ಸಾಹಿತಿ
ಬಾದಾಮಿ

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group