ಸಿಂದಗಿ: ಜನಸಂಪರ್ಕ ಸಭೆ ಗ್ರಾಮಗಳ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಪರಿಹಾರ ಕಂಡು ಕೊಳ್ಳುವ ವಿನೂತನ ಪ್ರಯತ್ನ ಮಾಡುವುದಕ್ಕಾಗಿ ಜನಸಂಪರ್ಕ ಸಭೆಯನ್ನು ಶಾಸಕರು ಆಯೋಜಿಸಲಾಗುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದಲ್ಲಿ ತಾಲೂಕು ಪಂಚಾಯತ ಕಾರ್ಯಾಲಯ ಹಾಗೂ ಬಂದಾಳ ಗ್ರಾಮ ಪಂಚಾಯತ ಕಾರ್ಯಾಲಯ ವತಿಯಿಂದ ಆಯೋಜಿಸಿದ್ದ ಜನ ಸಂಪರ್ಕ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿ ಬಂದಾಳ, ಚಿಕ್ಕಸಿಂದಗಿ, ಬೂದಿಹಾಳ ಪಿ ಎಚ್ ಹಾಗೂ ಓತಿಹಾಳ ಗ್ರಾಮದ ಜನರ ಕಷ್ಟ ಸುಖಗಳನ್ನು ತಿಳಿದುಕೊಳ್ಳಲು ಮತ್ತು ಮೂಲಸೌಕರ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಯಾವ ಹೆಜ್ಜೆ ಇಡಬೇಕು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಜನ ಸಂಪರ್ಕ ಸಭೆ ನಡೆಸಲು ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಅಶೋಕ ಎಮ್ ಮನಗೂಳಿ ಅವರು ಭಾಗವಹಿಸುವರು ಎಂದರು.
ಗ್ರಾಮದಲ್ಲಿ ಹತ್ತು ಹಲವು ಉದ್ದೇಶಗಳನ್ನು ಒಳಗೊಂಡ ಯೋಜನೆಗಳನ್ನು ಸರಕಾರ ತಯಾರಿಸಿದ್ದು, ಈ ನಿಟ್ಟಿ ಮತ್ತಷ್ಟು ಸೌಲಭ್ಯವಂಚಿತ ಗ್ರಾಮಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಅಭಿವೃದ್ಧಿ ಪಡಿಸಲು ಅನುಕೂಲವಾಗುವಂತೆ ಮಾಡಲು ಜನ ಸಂಪರ್ಕ ಸಭೆ ಏರ್ಪಡಿಸಿರುವದು ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಬಿ ಬಿ ಪಾಟೀಲ ಮಾತನಾಡಿ ಗ್ರಾಮದಲ್ಲಿ ಜನ ಸಂಪರ್ಕಸಭೆಯನ್ನು ನಡೆಸಲು ಶಿಕ್ಷಕರ ಪಾತ್ರ ಮೇಲು ಕಾಣಬೇಕು ಜನಸಂಪರ್ಕ ಸಭೆ ಸಂಪೂರ್ಣವಾಗಿ ಯಶಸ್ವಿಯಾಗಿ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ನಿತ್ಯಾನಂದ ಯಲಗೋಡ ಮಾತನಾಡಿ ಗ್ರಾಮದಲ್ಲಿ ಜನ ಸಂಪರ್ಕ ಸಭೆ ಜ 06 ರಂದು ಬೆಳಿಗ್ಗೆ 11 ಘಂಟೆಗೆ ಬಂದಾಳ ಗ್ರಾಮ ಪಂಚಾಯತ ಕಾರ್ಯಾಲಯ ಆವರಣದಲ್ಲಿ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ನಡೆಸುವುದರೊಂದಿಗೆ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಲಾಗುವುದು ಆದ ಕಾರಣ ಗ್ರಾಮದ ಜನತೆ ಹಾಗೂ ಸಂಬಂಧ ಪಟ್ಟ ಮಾಹಿತಿಯೊಂದಿಗೆ ತಮ್ಮ ಪರವಾಗಿ ಪ್ರತಿ ನಿಧಿಗಳನ್ನು ಕಳುಹಿಸದೇ ಖದ್ದಾಗಿ ಕಡ್ಡಾಯವಾಗಿ ಹಾಜರಿರಲು ಗ್ರಾಮದಲ್ಲಿ ಗ್ರಾಮ ಪಂಚಾಯತ ಪ್ರತಿನಿಧಿಗಳು ತಾವು ತಿಳಿಸಬೇಕು ಎಂದರು.
ಬಂದಾಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಯಮನಪ್ಪ ಹೊಸಮನಿ ಹಾಗೂ ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.ಗ್ರಾಮ ಪಂಚಾಯತ ಕಾರ್ಯದರ್ಶಿ ಆರ್ ಎಂ ಮುಜಾವರ ಸ್ವಾಗತಿಸಿದರು. ರಾಜಶೇಖರ ಹಿರೇಕುರಬರ ವಂದಿಸಿದರು.ಶಿಕ್ಷಕ ಬಸವರಾಜ ಅಗಸರ ನಿರೂಪಿಸಿದರು.