ಕಲಬುರ್ಗಿ– ರಾಜ್ಯದಲ್ಲಿ ಮುರುಘಾ ಮಠದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ಮಾಸುವ ಮುನ್ನವೇ ಕಲಬುರ್ಗಿಯ ಕುಂಚಾವರಂ ಶಾಲಾ ವಿದ್ಯಾರ್ಥಿನಿಯರ ಮೇಲೆ ಪ್ರಿನ್ಸಿಪಾಲ್ ಹಾಗೂ ಕಂಪ್ಯೂಟರ್ ಆಪರೇಟರ್ ಸೇರಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದ್ದು ರಾಜ್ಯದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವೋ ಅಲ್ಲವೋ ಎಂಬ ಬಗ್ಗೆ ದೊಡ್ಡ ಪ್ರಶ್ನೆ ಏಳುವಂತೆ ಮಾಡಿದೆ.
ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ವಸತಿ ಶಾಲೆಯಲ್ಲಿ ಈ ಪ್ರಕರಣ ನಡೆದಿದ್ದು ಈ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವಸತಿ ಶಾಲೆಗೆ ಬರುವ ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಡುವುದಲ್ಲದೆ ಬಾಯಿ ಬಿಟ್ಟರೆ ಟಿಸಿ ಕಿತ್ತು ಕೊಡುವುದಾಗಿ ಶಾಲೆಯ ಪ್ರಿನ್ಸಿಪಾಲ್ ಹಾಗೂ ಆಪರೇಟರ್ ಬೆದರಿಕೆ ಹಾಕುತ್ತಿದ್ಧರೆಂಬುದಾಗಿ ಸ್ವತಃ ಶಾಲಾ ಮಕ್ಕಳು ದೂರು ಹೇಳಿದ್ದಾರೆ.
ಈ ಬಗ್ಗೆ ಪಾಲಕರೊಬ್ಬರು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಷಕರು ಕೈಗೆ ಸಿಕ್ಕ ಕಂಪ್ಯೂಟರ್ ಆಪರೇಟರ್ ನನ್ನು ಹಿಗ್ಗಾ ಮುಗ್ಗ ಥಳಿಸಿದ್ದಾರೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಯಶವಂತ ಗುರುಕರ್, ಸಂಸದ ಡಾ. ಉಮೇಶ ಜಾಧವ, ಎಸ್ ಪಿ ಇಶಾ ಪಂತ್ ಅವರುಗಳು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು.
ಸರ್ಕಾರ ಇನ್ನು ಮುಂದಾದರೂ ಎಚ್ಚತ್ತುಕೊಂಡು ಸಮಾಜದಲ್ಲಿ ತುಂಬಿಕೊಂಡಿರುವ ಇಂಥ ಕಾಮುಕರ ಹೆಡೆಮುರಿ ಕಟ್ಟಿ ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ