ಹೊಸಪೇಟೆ ಓಣಿಯಲ್ಲಿದ್ದ ಘಾಟಗೆ ಪಾಟೀಲ್ ಟ್ರಾನ್ಸಪೋರ್ಟ ಆಫೀಸಿನ ಬಾಗಿಲು ಮುರಿದು ಒಳಗಡೆ ಇದ್ದ ಪಾರ್ಸಲ್ ಗಳನ್ನು ರಸ್ತೆಗೆ ತಂದು ಅವೆಲ್ಲವನ್ನೂ ಸುಟ್ಟು ಹಾಕಲಾಯಿತು.
ಗುಂಪಿನಲ್ಲಿದ್ದ ಒಬ್ಬ “ಮಾಂಡವಕರ ಮನಿಗೆ ಹೋಗೂನು ನಡ್ರಿ ” ಎಂದು ಚೀರಿದ.
ಉದ್ರಿಕ್ತ ಗುಂಪು “ಕರ್ನಾಟಕ ಮಾತೆಗೆ ಜೈ ; ಮರಾಠಿಗರಿಗೆ ಧಿಕ್ಕಾರ ” ಎಂದು ಘೋಷಣೆ ಕೂಗುತ್ತಾ , ಶಿಳ್ಳೆ ಹೊಡೆಯುತ್ತ , ವಿಕಾರವಾಗಿ ಕೂಗು ಹಾಕುತ್ತ ಹೊರಟರು.
ಅವರೆಲ್ಲ ಮೊದಲು ಮಾರ್ಕೆಟ್ ಓಣಿಯಲ್ಲಿಯ ಮಾಂಡವಕರ ಅವರ ಮನೆಯ ಮುಂದೆ ಸೇರಿಕೊಂಡರು. ಮಾಂಡವಕರರ ಮನೆಯ ಗಟ್ಟಿಮುಟ್ಟಾದ ಸಾಗುವಾನಿ ಕಟ್ಟಿಗೆಯ ಬಾಗಿಲು ಭದ್ರವಾಗಿ ಮುಚ್ಚಲ್ಪಟ್ಟಿತ್ತು. ಕೂಡಿದ ಜನಜಂಗುಳಿ ಕೇಕೆ ಹಾಕುತ್ತಾ , ” ಇವರು ಮರಾಠಿಗರು ಇದ್ದಾರು ; ಇವರನ್ನs ಬಿಡಬಾರ್ದು ” ಎಂದು ಅನ್ನತೊಡಗಿದ್ದರು. ಆಗ ಅಲ್ಲಿ ಶ್ರೀ ವಾ. ಗೋ. ಕುಲಕರ್ಣಿ ಎಂಬ ಹಿರಿಯರು ಬಂದು , ಕೂಡಿದ ಜನಕ್ಕೆ ಸಮಾಧಾನ ಪಡಿಸಲು ನೋಡುತ್ತಾರೆ. ಕೂಡಿದ ಜನರಲ್ಲಿ ಒಬ್ಬ ” ಮಾಂಡವಕರದವ್ರು ಎಲ್ಲಾ ಲೆಕ್ಕಪತ್ರ ಮರಾಠಿ ಒಳಗ ಬರೀತಾರ ; ನಾವು ಅವೆಲ್ಲಾ ವಹಿ ಸುಟ್ಟು ಬಿಡಾವ್ರು ” ಎನ್ನುತ್ತಾನೆ. ಆಗ ವಾ.ಗೋ. ಕುಲಕರ್ಣಿ ಅವರು ಕೆಳಗಿನಿಂದಲೇ ಜೋರಾಗಿ ಮಾಂಡವಕರರಿಗೆ ಕೇಳಿಸುವಂತೆ ಲೆಕ್ಕ ಪತ್ರದ ವಹಿಗಳನ್ನು ಮಾಳಿಗೆಯ ಮೇಲಿಂದ ಕೆಳಕ್ಕೆ ಎಸೆಯುವಂತೆ ಹೇಳುತ್ತಾರೆ.
ಆಗ ಸ್ವಲ್ಪ ಸಮಯದ ನಂತರ ಮೇಲಿನಿಂದ ಕೆಳಗೆ ಲೆಕ್ಕಪತ್ರದ ವಹಿಗಳನ್ನು ಎಸೆಯುತ್ತಾರೆ. ಕೂಡಿದ ಜನರು ಅವನ್ನು ಒಂದು ಕಡೆ ಗುಂಪು ಹಾಕಿ ಬೆಂಕಿ ಪೊಟ್ಟಣ ತೆಗೆದು ಕಡ್ಡಿ ಗೀರಿ ಅವೆಲ್ಲವಕ್ಕೂ ಬೆಂಕಿ ಹಚ್ಚುತ್ತಾರೆ. ಅದೇ ಹೊತ್ತಿಗೆ ರಬಕವಿಯ ಊರ ಪ್ರಮುಖರಾದ ಶ್ರೀ ನಾಗಪ್ಪಣ್ಣ ದುರಡಿ ಅವರು ಅಲ್ಲಿ ಬರುತ್ತಾರೆ.
ಕೂಡಿದ ಉದ್ರಿಕ್ತ ಜನರು ಮಾಂಡವಕರರ ಬಾಗಿಲನ್ನು ಮುರಿಯುವ ಪ್ರಯತ್ನದಲ್ಲಿ ತೊಡಗುತ್ತಾರೆ. ಆಗ ನಾಗಪ್ಪಣ್ಣ ದುರಡಿ ಅವರಿಗೆ ಅದೆಲ್ಲಿಯ ರೋಷ ಬಂತೊ ಆ ದೇವರಿಗೇ ಗೊತ್ತು ! ಅವರು ” ಏನ್ ಹಚ್ಚೇರ್ರೋs ನಾ ಇಲ್ಲಿ ಬಾಗಲದಾಗ ನಿಂದ್ರತೂನ ; ಬರ್ರಿ ಇಲ್ಲಿ ಗಂಡಸರ್ ಯಾರ್ ಅದೀರ್ರಿ ” ಎಂದು ಘರ್ಜಿಸಿ ಬಾಗಿಲಿಗೆ ಅಡ್ಡ ನಿಂತರು.
ಆಗ ಉದ್ರಿಕ್ತ ಜನರು ಗರಬಡಿದವರಂತೆ ಸುಮ್ಮನಾದರು. ಹೀಗಾಗಿ ಅಲ್ಲಿ ನಂತರ ಯಾವುದೇ ಗಲಾಟೆ ಆಗಲಿಲ್ಲ. ಒಂದು ವೇಳೆ ಆ ಸಮಯದಲ್ಲಿ ನಾಗಪ್ಪಣ್ಣ ದುರಡಿ ಅವರು ಪ್ರಸಂಗಾವಧಾನ ತೋರಿಸಿರದಿದ್ದರೆ, ಊಹೆಗೂ ನಿಲುಕಲಾರದಷ್ಟು ಲೂಟಿ ಮತ್ತು ಅತ್ಯಾಚಾರ ಆಗುವ ಸಂಭವವಿತ್ತು.
ಕೂಡಿದ ಜನರು ಅಲ್ಲಿಂದ ಕಾಲ್ದೆಗೆದರು. ಅಲ್ಲಿಂದ ಅವರು ಮತ್ತೆ ಕೂಗು ಹಾಕುತ್ತ, ಮಹಾಲಿಂಗಪೂರ ರಸ್ತೆಯಲ್ಲಿರುವ ಮಾಂಡವಕರರ ಮತ್ತೊಂದು ಮನೆ (ಬಂಗ್ಲೆ) ಹಾಗೂ ಕಾರ್ಖಾನೆಯ ಕಡೆಗೆ ಉದ್ರಿಕ್ತ ಜನಜಂಗುಳಿ ಹೊರಟಿತು.
( ಶಂಕರರಾವ್ ಮಾಂಡವಕರರ ಸಾವು ಮತ್ತು ಪೋಲಿಸ್ ಪೇದೆಯ ಹತ್ಯೆಯ ಬಗ್ಗೆ ನಾಳೆ….)
– ನೀಲಕಂಠ ದಾತಾರ