Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್

0
2430

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಆರು ಕೋಟಿ ಕನ್ನಡಿಗರು ಮಾತನಾಡುವ ಹಾಗೂ ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಸುಂದರ ಭಾಷೆಯಾದ ಕನ್ನಡಕ್ಕೆ ಈಗ ಮಸಿ ಬಳೆಯುವ ಮತ್ತೊಂದು ಅಕ್ಷಮ್ಯ ಕೆಲಸ ನಡೆದಿದೆ. ತಂತ್ರಜ್ಞಾನ ದೈತ್ಯ ಎಂದು ಕರೆಯಲ್ಪಡುವ ಗೂಗಲ್​ನಲ್ಲಿ ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದೆ. ಆ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನ ಎಸಗುವ ಹುನ್ನಾರವೊಂದು ನಡೆದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನಾವಶ್ಯಕವಾಗಿ ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಕೀಳೆಂದು ಬಿಂಬಿಸುವ ಯತ್ನದ ವಿರುದ್ಧ ಧ್ವನಿ ಎತ್ತಲಾಗುತ್ತಿದೆ.

ಗೂಗಲ್​ನಂತಹ ದೊಡ್ಡ ಸಂಸ್ಥೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

debtconsolidationsquad.com ಎಂಬ ಜಾಲತಾಣದಲ್ಲಿ ಇದು ಮೊದಲು ಕಂಡುಬಂದಿದ್ದು, ಸದ್ಯ ಆ ಲೇಖನವನ್ನು ಹಿಂಪಡೆಯಲಾಗಿದೆ.

ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ನಾವು ಈ ವಿಚಾರವಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದೇವೆ. ಗೂಗಲ್​ನಲ್ಲಿ ಕನ್ನಡವನ್ನು ಅವಮಾನಿಸಿದ್ದನ್ನು ಖಂಡಿಸಿ ಲೀಗಲ್​ ನೋಟಿಸ್ ಕಳುಹಿಸಿದ್ದೇವೆ. ನೆಲ, ಜಲ, ಭಾಷೆ, ಸಂಸ್ಕೃತಿಯ ವಿಚಾರದಲ್ಲಿ ಇನ್ನೊಬ್ಬರನ್ನು ಅಪಮಾನ ಮಾಡುವುದನ್ನು ಸಹಿಸಲಾಗದು.

ಇದೊಂದು ಬಗೆಯ ವ್ಯವಸ್ಥಿತ ಸಂಚು ಎನ್ನುವುದು ಸ್ಪಷ್ಟ. ಕನ್ನಡಿಗರನ್ನು, ಕನ್ನಡ ಭಾಷೆಯನ್ನು ನಿಕೃಷ್ಟವಾಗಿ ಕಾಣುವ ಮನಸ್ಥಿತಿಗಳು ಇಂತಹ ಅವಕಾಶ ಸೃಷ್ಟಿಸಲು ಹೊಂಚು ಹಾಕಿ ಕುಳಿತಿರುತ್ತವೆ. ಇದಕ್ಕೆ ಪ್ರತಿರೋಧ ಒಡ್ಡುವುದಷ್ಟೇ ನಮ್ಮ ಕೆಲಸ ಅಲ್ಲ. ಬದಲಾಗಿ ಈ ತೆರನಾದ ಘಟನೆಗಳು ಜರುಗದಂತೆ ಕಾವಲಿರಬೇಕು.

ನಮ್ಮತನಕ್ಕೆ ಧಕ್ಕೆಯಾಗುವ ಸಣ್ಣ ವಿಚಾರವನ್ನೂ ಸಹಿಸುವುದಿಲ್ಲ ಎನ್ನುವುದನ್ನು ಕನ್ನಡಿಗರು ಗಟ್ಟಿ ಧ್ವನಿಯಲ್ಲಿ ಹೇಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೂಗಲ್​ನಲ್ಲಿ Ugliest Language in India ಎಂದು ಹುಡುಕಿದಾಗ ಕನ್ನಡ ಎಂಬ ಉತ್ತರ ಸಿಗುತ್ತಿದ್ದು, ಆ ಉತ್ತರದ ಕೆಳಗಿರುವ debtconsolidationsquad.com ಎಂಬ ಜಾಲತಾಣದ ಕೊಂಡಿಯನ್ನು ತೆರೆಯಲು ಪ್ರತ್ನಿಸಿದರೆ ಅದು ಈಗ ಕೆಲಸ ಮಾಡುತ್ತಿಲ್ಲ.

ಗೂಗಲ್​ನಲ್ಲಿ ಈ ರೀತಿಯ ಉತ್ತರ ಬರಲು ಕಾರಣ ಈ ವೆಬ್​ಸೈಟ್​ನಲ್ಲಿ ಪ್ರಕಟವಾದ ಲೇಖನವಾಗಿದ್ದು ಸದ್ಯ ಅದು ಮರೆಯಾಗಿರುವುದರಿಂದ ಲೇಖನದಲ್ಲಿ ಏನಿತ್ತು, ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ, ಗೂಗಲ್​ನಂತಹ ಸಂಸ್ಥೆ ಇಂತಹ ವಿಚಾರಗಳತ್ತ ಸೂಕ್ಷ್ಮವಾಗಿ ಗಮನ ನೀಡಬೇಕು.

ಯಾವುದೇ ರೀತಿಯಲ್ಲಿ ಸೌಹಾರ್ದತೆಗೆ ಭಂಗ ತರುವ ವಿಚಾರಗಳು ಪ್ರಕಟಗೊಳ್ಳಲು ಆಸ್ಪದ ನೀಡಬಾರದು. ಜತೆಗೆ, ಕನ್ನಡಿಗರು ಕೂಡಾ ಇಂತಹವುಗಳನ್ನು ಒಟ್ಟಾಗಿ ಪ್ರಶ್ನಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.