ಬೀದರ: ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸ್ಪರ್ಧಿಸಲು ಮೂವರು ಅಭ್ಯರ್ಥಿಗಳು ಟಿಕೆಟ್ ಪೈಪೋಟಿಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಯಿತು.
ಓಡುವ ಕುದುರೆ ಎಂದೇ ಪ್ರಸಿದ್ಧಿಯಾಗಿರುವ ಈಶ್ವರ ಖಂಡ್ರೆ ಕಳೆ ಹದಿನೈದು ವರ್ಷಗಳಿಂದ ಭಾಲ್ಕಿ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎನಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ಅಷ್ಟಕ್ಕಷ್ಟೇ ಇದೆಯೆಂಬ ಅಭಿಪ್ರಾಯವಿದ್ದರೂ ಚುನಾವಣೆ ಸಮೀಪಿಸುತ್ತಿದ್ದಂತೆ ರಸ್ತೆ ಅಭಿವೃದ್ಧಿ ಯಂಥ ಕಾರ್ಯ ಮಾಡುತ್ತಿರುವ ಖಂಡ್ರೆಯವರ ವೇಗವನ್ನು ತಡೆಯಲು ಬಿಜೆಪಿ ಈಗ ಒಗ್ಗಟ್ಟಾಗುವುದು ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಂಡಾಯವಿದೆಯೆಂಬುದನ್ನು ತೋರಗೊಡಬಾರದೆಂಬ ಉದ್ದೇಶದಿಂದ ಮೂವರು ಆಕಾಂಕ್ಷಿಗಳಾದ ಡಿ ಕೆ ಸಿದ್ದರಾಮ, ಪ್ರಕಾಶ್ ಖಂಡ್ರೆ ಮತ್ತು ಡಾ.ಮೋರೆ ಅವರನ್ನು ಪ್ರಸಿದ್ಧ ದೇವರ ಮುಂದೆ ನಿಲ್ಲಿಸಿ ಖೂಬಾ ನೇತೃತ್ವದಲ್ಲಿ ಆಣೆ ಪ್ರಮಾಣ ಕೂಡಾ ಮಾಡಿಸಲಾಯಿತು.
ಮೂವರಲ್ಲಿ ಯಾರಿಗೆ ಒಬ್ಬರಿಗೇ ಟಿಕೆಟ್ ಸಿಕ್ಕಿದರೆ ಇನ್ನಿಬ್ಬರು ಅಸಮಾಧಾನಗೊಳ್ಳದೆ ಒಟ್ಟಿಗೆ ಸೇರಿ ಕೆಲಸ ಮಾಡಬೇಕೆಂದು ಆಣೆ ಪ್ರಮಾಣ ಮಾಡಿಸಲಾಯಿತು.
ಭಾಲ್ಕಿ ತಾಲ್ಲೂಕಿನ ಪ್ರಸಿದ್ಧ ದೇವಸ್ಥಾನ ಮೈಲಾರ ಮಲ್ಲಣ್ಣ ದೇವರ ಮುಂದೆ ನಿಲ್ಲಿಸಿ ಆಣಿ ಪ್ರಮಾಣ ಮಾಡಿಸಿದ ಸಚಿವರು ಮೂವರಲ್ಲಿ ಯಾರಿಗೇ ಟಿಕೆಟ್ ಸಿಕ್ಕಿದರೂ ಒಟ್ಟಿಗೆ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.
ವರದಿ: ನಂದಕುಮಾರ ಕರಂಜೆ, ಬೀದರ