ಕರ್ನಾಟಕ ಗಾಂಧಿ ಸ್ಮಾರಕ ನಿಧಿ , ರಾ.ಸೇಯೋ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಗೌರಿಬಿದನೂರು , ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮಿತಿ , ವಿದುರಾಶ್ವತ್ಥ ಹಾಗೂ ಕರ್ನಾಟಕ ಸರ್ವೋದಯ ಮಂಡಲ ಸಂಯುಕ್ತಾಶ್ರಯದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಗಾಂಧಿ -ಸರ್ವೋದಯ ವಿಚಾರ ಚಿಂತನ ಮಂಥನವನ್ನು ವಿದುರಾಶ್ವಥದ ವೀರಸೌಧದ ಆವರಣದ ಎನ್.ಸಿ.ನಾಗಯ್ಯ ರೆಡ್ಡಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮಾಜಿ ಸಚಿವ ಹಾಗೂ ಗೌರಿಬಿದನೂರಿನ ನಿಕಟಪೂರ್ವ ಶಾಸಕ ಎನ್ ಹೆಚ್ ಶಿವಶಂಕರರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಭಾರತದಲ್ಲಿ ಇಂದಿಗೂ ಒಂದು ಮಟ್ಟದ ಪ್ರಜಾಪ್ರಭುತ್ವ ಉಳಿದಿರಲು ಕಾರಣ ಗಾಂಧಿಯ ಅಹಿಂಸೆಯ ಮಾರ್ಗವೇ ಆಗಿದೆ ಎನ್ನಬಹುದು. ಗಾಂಧಿ ಸತ್ತಿರಬಹುದು ಆದರೆ ಅವರ ವಿಚಾರಗಳು ಪ್ರಪಂಚದಲ್ಲಿ ಇಂದಿಗೂ ಉಸಿರಾಡುತ್ತಿವೆ. ಸಮಾಜದ ಸ್ವಾಸ್ತ್ಯದಂತಿರುವ ಗಾಂಧಿಯ ತತ್ತ್ವಗಳನ್ನು ಮತ್ತು ವಿಚಾರಗಳನ್ನು ಜನರಿಗೆ ತಿಳಿಸುವುದರ ಮೂಲಕ ಇಂದಿನ ಪರಿಸ್ಥಿತಿಯಲ್ಲಿ ಗಾಂಧಿಯ ಪ್ರಸ್ತುತತೆಯನ್ನು ಸಾರಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಗೌರಿಬಿದನೂರು ಡಾ. ರಮೇಶಚಂದ್ರ ದತ್ತ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ನವದೆಹಲಿಯ ಗಾಂಧಿ ಸ್ಮೃತಿ ದರ್ಶನ ಸಮಿತಿಯ ಸುರೇಶ ಕಲಘಟಗಿ , ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ.ಎಚ್.ಎಸ್. ಸುರೇಶ್ ಮತ್ತು ಕಾರ್ಯದರ್ಶಿ ಡಾ.ಯ.ಚಿ.ದೊಡ್ಡಯ್ಯ, ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮಿತಿ ಸದಸ್ಯೆ ಡಾ.ಸಿ.ನಾಗರತ್ನ ಮತ್ತು ಡಾ.ಕೆ.ವಿ.ಪ್ರಕಾಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಯ ಸರ್ವೋದಯ ಕಾರ್ಯಕರ್ತರು ಪಾಲ್ಗೊಂಡಿದ್ದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಗೌರಿಬಿದನೂರು ರಾ.ಸೇಯೋ ವಿದ್ಯಾರ್ಥಿಗಳಿಂದ ಶ್ರಮದಾನ ನಡೆಯಿತು.