ದೀ ಪಕ ಬಿಳ್ಳೂರ ಅವರು ಬೆಳಗಾವಿ ಜಿಲ್ಲೆಯ ಅಥಣಿಯವರು, ವೃತ್ತಿಯಿಂದ ಬಿ.ಇ. (ಮೆಕ್ಯಾನಿಕಲ್) ಇಂಜಿನೀಯರ್, ಆದರೂ ಪ್ರವೃತ್ತಿಯಲ್ಲಿ ಲೇಖಕ, ಕವಿ ಹೃದಯರು. ಇವರ ತಂದೆಯವರ ಎಲ್ಲ ಕವನಗಳನ್ನು ಕವನ ಸಂಕಲನವಾಗಿ ಪ್ರಕಟಿಸಿದರು. ಇವರ ಪರಿಚಯ ಕಾಗವಾಡದ ಸಾಹಿತ್ಯ ಸಮ್ಮೇಳನ ಪೂರ್ವದಲ್ಲಿ ಆಯಿತು. ತಂದೆಯ ಋಣವನ್ನು ಕೃತಿ ಪ್ರಕಟಣೆ ಮೂಲಕ ತೀರಿಸುತ್ತಿರುವದು ನಮಗೆಲ್ಲ ಹೆಮ್ಮೆಯ ವಿಷಯ. ೧೪ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ತಂದೆಯವರ ಕವನಸಂಕಲನ ಹಾಗೂ ನಾಟಕದ ಪುಸ್ತಕ ಲೋಕಾರ್ಪಣೆ ಮಾಡಿದೆವು. ಇವರ ತಂದೆಯ ಕವನ ಸಂಕಲನಕ್ಕೆ ಅನೇಕ ಪ್ರಶಸ್ತಿಗಳು ಸಹ ಬಂದವು. ಈಗ ದೀಪಕ ಬಿಳ್ಳ್ಳೂರ ಅವರು “ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣ” (ಪ್ರಬಂಧಗಳ ಸಂಕಲನ) ಸ್ವಾಮಿ ವಿವೇಕಾನಂದರ ತತ್ವವನ್ನು ಮನದಲ್ಲಿ ಇಟ್ಟುಕೊಂಡು ನಮ್ಮ ವ್ಯಕ್ತಿತ್ವವನ್ನು ಯಾವ ರೀತಿಯಾಗಿ ಬೆಳೆಸಿಕೊಳ್ಳಬೇಕು? ಅನ್ನುವುದಕ್ಕಾಗಿ ಒಂದೊಂದು ಲೇಖನವನ್ನು ಒಂದೊಂದು ಉದಾಹರಣೆಯಾಗಿ ತೆಗೆದುಕೊಂಡು ಈ ಲೇಖನ ಬರೆದಿದ್ದು, ಒಟ್ಟು ೧೫ ಲೇಖನಗಳಿವೆ.
ಮೊದಲ ಲೇಖನ ಕನ್ನಡ ಮಾಧ್ಯಮ, ಮಾತಿಗಿಂತ ಬಲಶಾಲಿ ಆಯುಧ ಮೊತ್ತೊಂದಿಲ್ಲ, ಬುದ್ಧಿವಂತರು ತಮ್ಮ ಮಾತುಗಳ ಮೇಲೆ ನಿಂತಿರುತ್ತಾರೆ. ಈ ಮಾತು ಮಾತೃಭಾಷೆಯಿಂದಲೇ ಸಾಧ್ಯ ಎಂದು ಒತ್ತಿ ತಿಳಿಸಿದ್ದಾರೆ.
ಇಂದಿನ ಯುವಜನ ಎತ್ತ ಸಾಗಿದೆ ? ದೇಶಭಕ್ತಿ ರಾಷ್ಟ್ರ ಪುನರುತ್ಥಾನ ಪ್ರಗತಿಯತ್ತ ನಿರ್ಲಕ್ಷ ದೃಷ್ಟಿ ಬೀರುತ್ತಿದ್ದಾರೆ. ಯುವ ಜನತೆ ದಿಕ್ಕು ತಪ್ಪುತ್ತಿದ್ದಾರೆ, ಸರಿ ದಾರಿಗೆ ಬರಬೇಕಾದರೆ, ಒಳ್ಳೆಯ ಹವ್ಯಾಸ, ಒಳ್ಳೆಯವರೊಡನೆ ಗೆಳೆತನ ಮಾಡಿರಿ. ದಾರಿ ತಪ್ಪಲು ಕಾರಣ ಅನೇಕವಿದೆ. ಆದರೆ ಬುದ್ದಿ ಜೀವಿಗಳಾದ ನಾವು ತಿಳಿದು ಬಾಳಬೇಕು. ಯುವಕರು ಓದಲೇ ಬೇಕಾದ ಲೇಖನವಾಗಿದೆ.
ದಾನಶೂರ ಕರ್ಣ, ಆಚಾರವೇ ಸ್ವರ್ಗ ಅನಾಚಾರವೇ ನರಕ, ಉಪನಿಷತ್ತು ಲೇಖನಗಳು ಮನಸ್ಸಿಗೆ ನಾಟುವಂತಿವೆ.
ಜನ್ನಕವಿಯ ಯಶೋಧರ ಚರಿತೆ, ರನ್ನ ಕವಿಯಂತೆ, ಜನ್ನ ಕವಿ ರಚಿಸಿದ ಅಮೂಲ್ಯ ಗ್ರಂಥಗಳು ಎರಡು. “ಯಶೋಧರ ಚರಿತೆ”, “ಅನಂತನಾಥ ಪುರಾಣ”, ಚಂಪೂ ಶೈಲಿ ರಚನೆ. ಎರಡರಲ್ಲೂ ಧಾರ್ಮಿಕತೆಯುಂಟು ಆದರೆ “ಯಶೋಧರ ಚರಿತೆ”ಯಲ್ಲಿ ಲೌಕಿಕದ ನೆಲೆಗಟ್ಟು ಇದೆ.
ಕೋಟ್ಯಂತರ ಜನರ ತ್ಯಾಗ ಬಲಿದಾನದಿಂದ ದೊರೆತ ಈ ದೇಶದ ಸ್ವಾತಂತ್ರ್ಯ ದೇವಿಯ ಸಿರಿಮುಡಿ ಹೂವಿನ ಹುಡಿಯಿಂದ ಪಾವನವಾಯ್ತು. ಈ ದೇಶದ ಕೋಟಿ ದೇವತೆಗಳಿಗಿಂತಲೂ ಈ ದೇಶ ದೇಗುಲದ ಈ ದೇವತೆಗಳನ್ನು ನಾವು ನಿತ್ಯವೂ ಪೂಜಿಸಬೇಕು, ಪ್ರಾರ್ಥಿಸಬೇಕು ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ದೇಶ ನನಗಾಗಿ ಏನು ಮಾಡಿದೆ? ಅಂತಾ ಕೇಳದೇ ನಾನು ದೇಶಕ್ಕಾಗಿ ಏನು ಮಾಡಲಿ? ಎಂದು ಕೇಳುವ ವಿವೇಕ ನುಡಿಯೇ ದೇಶಭಕ್ತಿಯ ಶಕ್ತಿರೂಪದ ವಾಹಿನಿ, ಅದರಲ್ಲಿಯೇ ಸರ್ವರ ಸಂತೋಷ ತುಂಬಿ ತುಳುಕುವ ಸ್ನೇಹದ ಒಗ್ಗಟ್ಟೇ ರಾಷ್ಟ್ರೀಯ ಭಾವೈಕ್ಯತೆ ಅಡಗಿದೆ.
ಶಕ್ತಿಯ ಸಾಮರ್ಥ್ಯ, ಅಮರ ಬಿಂದು, ಅಲ್ಲಮರ ವಚನ ದರ್ಶನ ಕಣ್ಣು ತೆರೆಸುವಂತೆ ಮಾಡಿದ್ದಾರೆ.
ಕೂಲಿ ಕಾರ್ಮಿಕರು ಮಾಡುವುದು ಛೋಟಿ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ರಟ್ಟೆ ಮುರಿದು ಹೊಟ್ಟೆಹೊರೆ, ಕೈ ಕೆಸರಾದ್ರೇ ಬಾಯಿ ಮೊಸರು, ದುಡಿಯೈ ಸುಖಮಂ ಪಡಿಯೈ, ದುಡಿತವೇ ದುಡ್ಡಿನ ತಾಯಿ, ಕೂಲಿ ಕಾರ್ಮಿಕರ ಸ್ಥಿತಿಗತಿಗೆ ಸರ್ಕಾರ ಅಷ್ಟೇ ಅಲ್ಲದೇ ನಮ್ಮ ಪಾಲೂ ಇದೆ ಎಂಬುವದನ್ನು ಮರೆಯದಿದ್ದರೆ ಸಾಕು ಎಂದು ಅವರ ಕಷ್ಟ ಸುಖ ಹಂಚಿಕೊಂಡಿದ್ದಾರೆ.
“ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣ” ಎಂಬ ಪ್ರಬಂಧಗಳ ಸಂಕಲನ, ಸಾಹಿತ್ಯ ಲೋಕಕ್ಕೆ ಲೇಖಕ ದೀಪಕ ಬಿಳ್ಳೂರರ ಉತ್ತಮ ಕೊಡುಗೆಯಾಗಿದೆ. ಯುವಕರಿಗೆ ಮಾರ್ಗದರ್ಶಿಯಾಗಿದೆ. ಯಾವುದೇ ಸಾಹಿತ್ಯಕ್ಕೆ ಸರ್ಕಸ್ಸು ಮಾಡದೇ ಮನೆಯ ಹಿತ್ತಲ ಮಲ್ಲಿಗೆ ಬಳ್ಳಿ ಹೂವು ಬಿಟ್ಟಂತೆ ಸಹಜವಾಗಿ ಈ ಲೇಖನಗಳು ಮೂಡಿಬಂದಿವೆ. ಯುವ ಜನಾಂಗ ತಿಳಿಯಲು ಅವರ ಕೈಗೆ ಇಂತಹ ಪುಸ್ತಕ ಕೊಡಬೇಕು.
ಅಮೂಲ್ಯವಾದ ಲೇಖನಗಳನ್ನು, ದೀರ್ಘ ಲೇಖನಗಳನ್ನು ಓದಲು ಬಿಡುವಿಲ್ಲದ ಯುವ ಜನಾಂಗಕ್ಕೆ ಜ್ಞಾನದ ಹಸಿವೆಯನ್ನು ನೀಗಿಸಲು ಕಾರಣವಾಗುತ್ತಿದೆ. ಇಂದು ಯುವ ಜನಾಂಗ ಮೊಬೈಲ್, ಫೇಸ್ಬುಕ್, ವಾಟ್ಸ್ಅಪ್ದ ದಾಸರಾಗದೇ ಈ ಜ್ಞಾನದ ಹಸಿವಿಗೆ ಬಿಳ್ಳೂರರವರು ಕೊಡುತ್ತಿರುವ ಈ “ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣ” ಎಂಬ ಪುಸ್ತಕವು ಅಮೂಲ್ಯವಾದದ್ದು.
ಶ್ರೀಯುತರು ಸ್ನೇಹ ಜೀವಿಗಳು, ಸಮಾಜ ಜೀವಿಗಳು, ಉತ್ತಮ ಆರೋಗ್ಯಕರ ಸಾಮಾಜಿಕ ಪರಿಸರ ನಿರ್ಮಾಣಗೊಳ್ಳಬೇಕೆಂದು ಶ್ರೇಷ್ಠ ಕನಸನ್ನು ಹೊತ್ತಿರುವವರು. ಸದಾ ಮುಗುಳ್ನಗೆಯ ಪುಟಿವ ಕಾರಂಜಿಯಂತೆ ಸದಾ ಉತ್ಸಾಹಿ, ಕ್ರಿಯಾಶೀಲ ಕರ್ತವ್ಯಪ್ರಜ್ಞೆ ಹೊಂದಿರುವ ಸಾಂಸ್ಕೃತಿಕ ಹರಿಕಾರರೂ ಹೌದು. ತಮ್ಮನ್ನು ತಾವು ಸತತವಾಗಿ ರೂಢಿಸಿಕೊಂಡು ಸಾಹಿತ್ಯ ಲೋಕದಲ್ಲೂ ಮುನ್ನುಗ್ಗುತ್ತಿರುವುದು ಗಮನಾರ್ಹ ಹಾಗೂ ಪ್ರಶಂಸನೀಯವಾದುದು. ಸತ್ವಯುತ ಸಾಹಿತ್ಯಶೀಲ, ಜನಾನುರಾಗಿಯಾಗಿ, ಜನಪ್ರಿಯವಾಗುವ ಪುಸ್ತಕಗಳು ಇವರಿಂದ ರಚಿತಗೊಳ್ಳಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ.
ಎಂ.ವೈ. ಮೆಣಸಿನಕಾಯಿ
ಜಿಲ್ಲಾ ಕಾರ್ಯದರ್ಶಿಗಳು
ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ ಜಿಲ್ಲೆ.
(ಪುಸ್ತಕಗಳಿಗಾಗಿ ಸಂಪರ್ಕಿಸಿರಿ: ೮೮೬೧೦೮೧೮೧೭
೯೪೪೯೨೬೭೯೧೦)