ಮೂಡಲಗಿ -ತಾಲೂಕಿನ ಖಾನಟ್ಟಿ ಗ್ರಾಮದ ಡಾllಮಹಾದೇವ ಪೋತರಾಜ ಅವರಿಗೆ ಚೇತನ ಫೌಂಡೇಷನ್ ರವರಿಂದ ವಚನ ವೈಭವ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಭವನ, ಧಾರವಾಡದಲ್ಲಿ ದಿನಾಂಕ:ಮೇ,19 ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ “ರಾಷ್ಟ್ರೀಯ ಬಸವ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಶಿಕ್ಷಣ ಮಹಾವಿದ್ಯಾಲಯ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಡಾ.ಸುರೇಶ ಎಸ್.ಸಮ್ಮಸಗಿರವರು ಕಾರ್ಯಕ್ರಮ ಉದ್ಘಾಟಿಸಿ, ವಚನ ಸಾಹಿತ್ಯ ಮತ್ತು ಶರಣರ ಕೊಡುಗೆಗಳ ಮಹತ್ವ ತಿಳಿಸಿದರು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ನಿವೃತ್ತ ಅಧ್ಯಾಪಕರಾದ ಫೀರಸಾಬ ನದಾಫ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಸನ್ಮಾನಿಸಲಾಯಿತು. ಬೆಳಗಾವಿಯ ತೆರಿಗೆ ಅಧಿಕಾರಿಗಳಾದ ಸುರೇಶ ಕೊರಕೊಪ್ಪರವರು ಆಶಯ ನುಡಿಗಳನ್ನಾಡಿದರು.
ಧಾರವಾಡದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂದಗಿ ಪ್ರಶಸ್ತಿಗಳನ್ನು ವಿತರಿಸಿದರು. ಕಾರ್ಯಕ್ರಮದ ಸಂಯೋಜಕರಾದ ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಚೇತನ ಫೌಂಡೇಷನ್ ಇದುವರೆಗೆ ಮಾಡಿದ ಸಾಧನೆಗಳನ್ನು ತಿಳಿಸಿದರು. ಶ್ರೀಮತಿ ಸುನಂದಾ ಜಾಲವಾದಿ ಹಾಗೂ ಸುವರ್ಣ ಕರ್ನಾಟಕ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷರಾದ ಡಾ. ಶಿವಣ್ಣ ಜಿ ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ದಿವ್ಯ ಸಾನ್ನಿಧ್ಯ ಶ್ರೀ ವೇ. ಜ್ಞಾ.ಬ್ರ. ಚರಂತಯ್ಯ ಹಿರೇಮಠ, ಪುಣ್ಯಕ್ಷೇತ್ರ ಹೆಬ್ಬಳ್ಳಿಯ ಕೊನ್ನೂರು ಮಠದ ಸ್ವಾಮೀಜಿಗಳು ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಜೊತೆ ಜೊತೆಗೆ ವಚನಗಾಯನ, ಕವಿಗೋಷ್ಠಿ ಯನ್ನು ನಡೆಸಲಾಯಿತು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಡಾ.ಮಹಾದೇವ ಪೋತರಾಜ ರವರ ಸುವರ್ಣದೀಪ ವಚನ ಸಂಕಲನ ಹಾಗೂ ಸಮಗ್ರ ಸಾಹಿತ್ಯ ಮತ್ತು ಅನೇಕ ಕಾರ್ಯಕ್ರಮಗಳ ಆಯೋಜನೆ, ನಿರೂಪಣೆ, ಉಪನ್ಯಾಸ ಹಾಗೂ ಬೇರೆ ಬೇರೆ ಸಾಹಿತ್ಯ ಸಂಘಟನೆಗಳ ಸದಸ್ಯತ್ವಗಳನ್ನು ಪರಿಗಣಿಸಿ ಸಾಹಿತ್ಯ ಸೇವೆ ಹಾಗೂ ಸಮಾಜಸೇವೆಯನ್ನು ಗುರುತಿಸಿ ಬೇರೆ ಬೇರೆ ಸಾಧಕರ ಜೊತೆಗೆ ಇವರಿಗೂ”ರಾಷ್ಟ್ರೀಯ ಬಸವ ಪ್ರಶಸ್ತಿ” ನೀಡಿ ಗೌರವಿಸಲಾಯಿತು.