ಬೀದರ – ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರ ಮತಗಳಿಂದಲೇ ಸಾಗರ ಖಂಡ್ರೆ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದ ವಕ್ಫ ಸಚಿವ ಜಮೀರ ಅಹ್ಮದ ಖಾನ್ ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಉಲ್ಟಾ ಹೊಡೆದಿದ್ದು ಹಿಂದೂಗಳೂ ಕೂಡ ಓಟ್ ಹಾಕಿದ್ದಾರೆ. ಕೇವಲ ಮುಸ್ಲಿಮರಷ್ಟೇ ಮತ ಹಾಕಿದರೆ ಗೆಲ್ಲೋದು ಸಾಧ್ಯವಾ ? ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ವಕ್ಫ ಅದಾಲತ್ ನಲ್ಲಿ ಮಾತನಾಡಿದ ಜಮೀರ್ ಅವರು, ಸಾಗರ ಖಂಡ್ರೆ ಮುಸ್ಲಿಮರ ಮತಗಳಿಂದ ಗೆದ್ದಿದ್ದಾರೆ ಎಂದಿದ್ದರು. ಇದರಿಂದ ವಿವಾದದ ಕಿಡಿ ಹೊತ್ತಿದ್ದು ಹಿಂದೂಗಳು ಸಾಗರ ಅವರಿಗೆ ಮತವನ್ನೇ ಹಾಕಿಲ್ಲವೆ ಎಂದು ಹಿಂದೂ ಸಮಾಜದ ಮುಖಂಡರು ಪ್ರಶ್ನೆ ಮಾಡಿ ಅಸಮಾಧಾನ ಹೊರಹಾಕುವಂತಾಗಿತ್ತು. ವಿವಾದ ಹೀಗೆಯೆ ಬೆಳೆಯುತ್ತಿದ್ದಂತೆಯೇ ಎಚ್ಚತ್ತುಕೊಂಡ ಜಮೀರ್ ಖಾನ್, ಮುಸ್ಲಿಮರು ಒನ್ ಸೈಡ್ ಮತ ಕೊಟ್ಟಿದ್ದರಿಂದ ಸಾಗರ ಖಂಡ್ರೆ ಗೆದ್ದಿದ್ದಾರೆ ಅಂದಿದ್ದೆ. ಹಿಂದೂಗಳೂ ಮತ ಕೊಟ್ಟಿದ್ದಾರೆ ಎಂದರು.
ಸಾಗರ ಖಂಡ್ರೆ ಆರು ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದಾರೆ ಅದರಲ್ಲಿ ಎರಡು ಲಕ್ಷ ಮುಸ್ಲಿಮರ ಓಟು ಇವೆ ಅವಷ್ಟೇ ಮತಗಳಿಂದ ಗೆಲ್ಲಲು ಸಾಧ್ಯವಾ ? ಎಂದು ಪ್ರಶ್ನೆ ಮಾಡಿದರು.
ಎಂಪಿ ನಮ್ಮವರೇ ಇದ್ದಾರೆ ಏನು ಬೇಕೋ ಕೆಲಸ ಮಾಡಿಕೊಳ್ಳಿ ಎಂದು ಸಮಾಜದವರಿಗೆ ಹೇಳಿದ್ದೇನೆ ಅಷ್ಟೇ ಎಂದು ತಮ್ಮನ್ನು ಸಮರ್ಥಿಸಿಕೊಂಡರು.
ಜಮೀರ್ ಹಿಂದೂ ವಿರೋಧಿ ಎಂದು ಬಿಜೆಪಿ ಮುಖಂಡ ಸಿಟಿ ರವಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಾಗೆ ಹೇಳಿದ್ದಕ್ಕೇ ಸಿಟಿ ರವಿ ಸೋತಿದ್ದಾರೆ. ನಮಗೆ ಹಿಂದೂಗಳೇ ಹೆಚ್ಚು ಮತ ನೀಡಿದ್ದಾರೆ ಎಂದು ಜಮೀರ್ ಖಾನ್ ಹೇಳಿದರು.
ವರದಿ : ನಂದಕುಮಾರ ಕರಂಜೆ, ಬೀದರ