spot_img
spot_img

ಮಂಗನಬಾವು ಅಲಕ್ಷಿಸಿದರೆ ಬದುಕು ಬರಡಾದೀತು…! – ಡಾ.ಕರವೀರಪ್ರಭು ಕ್ಯಾಲಕೊಂಡ

Must Read

- Advertisement -

Poetry ,Shakespeare and opera ,are like Mumps and should be sought when young .In the unhappy event that there is postponemet to mature years, the results may be devastating “

Dimitris Mita

ಹೆಚ್ಚು ಸುದ್ಧಿಮಾಡದ ,ಸಾವು ನೋವುಗಳಿಗೆ ಕಾರಣವಾಗದ ಸೌಮ್ಯ ಸ್ವರೂಪದ ಸಾಂಕ್ರಾಮಿಕ ಕಾಯಿಲೆ ಮಂಗನಬಾವು. ಈ ವರ್ಷ ಈಗಾಗಲೇ ಅಬ್ಬರಿಸುತ್ತ ಬೊಬ್ಬೆಯಿಡುತ್ತಿದೆ . ರಾಷ್ಟ್ರದ ಉದ್ದಗಲಕ್ಕೂ ವೈದ್ಯರಿಗೆ ಚಿಂತೆಗೀಡು ಮಾಡಿದೆ .ಈ ವರ್ಷ ಜನವರಿಯಲ್ಲಿಯೇ ಮಕ್ಕಳಲ್ಲಿ ಮಂಗನಬಾವಿನ ಸೋಂಕು ಹೆಚ್ಚಾಗುತ್ತಿದೆ .ಮಂಗನಬಾವಿನ ಪ್ರಕರಣಗಳು ಸಾಮಾನ್ಯವಾಗಿ ಜನವರಿಯಿಂದ ಮೇ ತಿಂಗಳ ನಡುವೆ ಹೆಚ್ಚುತ್ತವೆ .ಆದರೆ ,ಸಾಂಕ್ರಾಮಿಕದ ಸ್ಪೋಟ ಪ್ರತಿ 4 – 5 ವರ್ಷಗಳಿಗೊಮ್ಮೆ ಆಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಲಸಿಕೆ ಬಳಸುವ ಮನೋಭಾವದ ಜನರಿಂದಾಗಿ ಇದರ ಸದ್ದು ಅಡಗಿದೆ .ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಂತಹ ರಾಷ್ಟ್ರಗಳಲ್ಲಿ ಅನಕ್ಷರತೆ ,ಅನೈರ್ಮಲ್ಯ ,ಅಜ್ಞಾನ, ಮೂಢನಂಬಿಕೆಗಳು ಮಡುಗಟ್ಟಿ ನಿಂತಿರುವಾಗ ಮಂಗನಬಾವಿನ ಮಂಗನಾಟ ಮುಂದುವರಿದೇ ಇದೆ .

- Advertisement -

ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ ನಿಯೋಜಿತ ಅಧ್ಯಕ್ಷರಾದ ಡಾ.ವಸಂತ ಖಾಲತ್ಕರ್ ಹೇಳಿಕೆಯ ಪ್ರಕಾರ – ನಾಗಪುರದಲ್ಲಿ ಮಂಗನಬಾವಿನ ಪ್ರಕರಣಗಳು ಒಮ್ಮಿಂದೊಮ್ಮೆಲೆ ಜನವರಿಯಲ್ಲಿ ಹೆಚ್ಚಾಗಿವೆ. ಮಹಾರಾಷ್ಟ್ರ, ತೆಲಂಗಾನ ,ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಹಾನಗರಗಳಲ್ಲಿಯೂ ಇದೇ ರೀತಿ ಏರಿಕೆ ಕಂಡುಬಂದಿದೆ. ಒಳ್ಳೆ ಸುದ್ಧಿಯೆಂದರೆ ಎಲ್ಲ ಪ್ರಕರಣಗಳು ಸೌಮ್ಯ ಸ್ವರೂಪದಾಗಿರುವುದು .ಸಂಪೂರ್ಣ ವಿಶ್ರಾಂತಿ ,ನೋವು ನಿವಾರಕ ಔಷಧಿ ,ಸಾಕಷ್ಟು ದ್ರವ ಆಹಾರ ಸೇವನೆ ಅವಶ್ಯ ಎಂದು ಮಕ್ಕಳ ತಜ್ಞರಾದ ಡಾ.ಸಿಲ್ಕಿ ಅಗರವಾಲ್ ಹೇಳಿದ್ದಾರೆ. ತೀವ್ರ ತರಹದ ಲಕ್ಷಣಗಳು ಗೋಚರಿಸಿದಾಗ , ಅಲಕ್ಷಿಸದೇ ವೈದ್ಯರನ್ನು ಕಾಣಲು ಮರೆಯಬಾರದೆಂದು ಅವರು ಎಚ್ಚರಿಸಿರುವರು. ಅಪಾಯದ ಅಂಚಿನಲ್ಲಿ ಇರುವವರೆಂದರೆ – ಲಸಿಕೆಯಿಂದ ವಂಚಿತರಾಗಿರುವ ಮಕ್ಕಳು ಮತ್ತು ಹದಿಹರೆಯದವರು .”ಲಸಿಕೆ ಹಾಕಿಸಿ , ಮಕ್ಕಳನ್ನು ರಕ್ಷಿಸಿ ,ಮಂಗನಬಾವು ಓಡಿಸಿ “ಎಂದು ಡಾ.ವಿದ್ಯಾ ಕೃಷ್ಣ ಜನರಿಗೆ ಈ ಸಂದರ್ಭದಲ್ಲಿ ಕರೆ ಕೊಟ್ಟಿರುವುದು ಅರ್ಥಪೂರ್ಣವಾಗಿದೆ .

ರೋಗಕಾರಕ:

ಮಂಗನಬಾವು ವೈರಸ್ ನಿಂದ ಬರುವ ಕಾಯಿಲೆ. ಈ ವೈರಸ್ ಹೆಸರು ಮಿಕ್ಸೋವೈರಸ್ ಪೆರೋಟಿಡೈಟಿಸ್ .ಗಲ್ಲದ ಬಾವು ಕಾಣಿಸಿಕೊಳ್ಳುವುದಕ್ಕಿಂತ ಒಂದು ವಾರ ಮೊದಲು ಮತ್ತು ಬಾವು ಕಾಣಿಸಿಕೊಂಡ ಒಂದೆರಡು ದಿನ ಮಾತ್ರ ಸೋಂಕನ್ನು ರೋಗಿ ಬೇರೆಯವರಿಗೆ ಕೊಡಬಹುದು. ನಂತರ ಸೋಂಕು ಹರಡುವಿಕೆಯ ಶಕ್ತಿ ಸತ್ವಹೀನಗೊಳ್ಳುವುದು.

ಆಹಾರ ಸಿಕ್ಕಾಗ ಹಸಿದ ಮಂಗ ಗಪ ಗಪ ತಿಂದು ಗಲ್ಲದಲ್ಲಿ ಹಿಡಿದಿಟ್ಟುಕೊಂಡಾಗ ಹೇಗೆ ಕಾಣುವುದೋ ಹಾಗೆ ಈ ರೋಗ ಬಂದಾಗ ಕಾಣುವುದರಿಂದ ಇದಕ್ಕೆ ‘ಮಂಗನಬಾವು ‘ಎಂಬ ಹೆಸರು ಬಂದಿರಬಹುದು. ಈ ರೋಗಕ್ಕೆ ಕೆನ್ನೆಬಾವು, ಕೆನ್ನೆಬೀಗು,ಕೆಪ್ಪಟರಾಯ , ಗದ್ದಕಟ್ಟು, ಸಿಂಗಾರಗೌರಿಬೇನೆ, ಮಂಗಬಾವು ,ಕೆಪ್ಪಟ, ಕೆಪ್ಪಟೆ ,ಕರ್ಣೋಪಾಂತ ಎಂತಲೂ ಕರೆಯುವುದುಂಟು. 5 ರಿಂದ 9 ವರ್ಷದ ಮಕ್ಕಳಲ್ಲಿ ಇದರ ಹಾವಳಿ ಹೆಚ್ಚು.

- Advertisement -

ರೋಗ ಪ್ರಸಾರ:

ರೋಗದಿಂದ ಬಳಲುತ್ತಿರುವ ರೋಗಿಗಳೇ ಸೋಂಕಿನ ಮೂಲವಾಗಿರುತ್ತಾರೆ ಪೂರ್ವಭಾವಿ ಕಾಲಾವಧಿಯಲ್ಲಿಯೇ ರೋಗಿಗಳು ಸೋಂಕನ್ನು ಬೇರೆಯವರಿಗೆ ಬಳುವಳಿ ಕೊಡುವ ಸ್ಥಿತಿಯಲ್ಲಿರುತ್ತಾರೆ. ರೋಗಿಗಳ ನಿಕಟ ಸಂಪರ್ಕ ರೋಗ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸುವುದು.

ಪರೋಕ್ಷವಾಗಿ ರೋಗಿ ಬಳಸುವ ರೋಗವಾಹಕ ವಸ್ತುಗಳಿಂದ ಅಂದರೆ ವಸ್ತ್ರ – ಒಡವೆಗಳಿಂದ ,ಪಾತ್ರೆ- ಪಗಡಿಗಳಿಂದ ,ಹಾಸಿಗೆ ಹೊದಿಕೆಗಳನ್ನು ಮತ್ತೊಬ್ಬರು ಬಳಸುವುದರಿಂದಲೂ ರೋಗ ಹರಡುವುದು .ಅನೇಕರ ದೇಹದಲ್ಲಿ ಈ ವೈರಸ್ ಸೋಂಕು ಬೆಳವಣಿಗೆ ಹೊಂದಿದರೂ ಬಹಿರಂಗದಲ್ಲಿ ಯಾವ ಲಕ್ಷಣಗಳನ್ನು ಪ್ರಕಟಗೊಳಿಸದೆ ರೋಗದ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಇದರ ಪ್ರಮಾಣ ಶೇ.30 ರಿಂದ 40 ರಷ್ಟು ಇರುವುದು. ಒಮ್ಮೆ ರೋಗದಿಂದ ಬಳಲಿದರೆ ಜೀವನ ಪರ್ಯಂತ ರೋಗ ಪ್ರತಿರೋಧಕ ಶಕ್ತಿ ಉಳಿಯುವುದು.

ಈ ರೋಗ ಶಾಲೆಗೆ ಹೋಗುವ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಲಿಂಗಭೇದವಿಲ್ಲದೆ ತೋರಿಬರುತ್ತದೆ ಮಂಗನಬಾವು ವೈರಸ್ ಜೊಲ್ಲಿನ ತುಂತುರು ಹನಿಗಳ ಮೂಲಕ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.

ರೋಗದ ಲಕ್ಷಣಗಳು:

ರೋಗದ ಅದಿಶಯನ ಕಾಲ ( Incubation period) 14 ರಿಂದ 21 ದಿನಗಳು. ಸರಾಸರಿ 17 ದಿನಗಳಲ್ಲಿ ರೋಗ ಏಕಾ ಏಕಿಯಾಗಿ ಪ್ರಕಟಗೊಳ್ಳುವುದು. ಪೂರ್ವಭಾವಿ ಕಾಲದಲ್ಲಿ ಸಣ್ಣಗೆ ಜ್ವರ ,ಗಂಟಲು ನೋವು, ಕಿವಿ ನೋವುಗಳ ಜೊತೆಗೆ ಮೆಲುಕಾಡಿಸುವಾಗ ಮಲಕಿನಲ್ಲಿ ನೋವು ಕಾಣಿಸುವುದು .ಮಲಕಿನ ಕೆಳಗೆ ಮುಟ್ಟಿದರೆ ನೋವಾಗಬಹುದು ಅಥವಾ ಲಾಲಾರಸ ಸ್ರವಿಸುವ ಗ್ರಂಥಿಯ ನಾಳದ ಕೊನೆಯಲ್ಲಿ ಊತ ಕೆಂಪಡರಿಕೆ ಕಾಣುವುದು.

ಪ್ರಾರಂಭದಲ್ಲಿ ಕಿವಿಯ ಕೆಳಗಡೆ ನೋವು ಕಾಣಿಸಿಕೊಂಡು ಮರುದಿನ ಆ ಜಾಗದಲ್ಲಿ ಊತ ಉಂಟಾಗುವುದು . ಮುಂದಿನ ಎರಡು ದಿನಗಳಲ್ಲಿಊತ ಕಿವಿಯ ಮುಂಭಾಗ ಹಾಗೂ ಕೆನ್ನೆಗಳನ್ನು ಆವರಿಸುತ್ತದೆ .ಕಿವಿಯನ್ನು ಮೇಲಕ್ಕೆ ಮತ್ತು ಹೊರಕ್ಕೆ ತಳ್ಳುವುದರಿಂದ ಅವು ನಿಮಿರಿ ನಿಂತಂತೆ ಕಾಣುವವು .ಊತ ಹೆಚ್ಚಿದ ಹಾಗೆ ಜ್ವರ ಏರುತ್ತ ಹೋಗುತ್ತದೆ. ಲಾಲಾರಸ ಗ್ರಂಥಿಯ ಊತ ಸಾಮಾನ್ಯವಾಗಿ ಎರಡೂ ಕೆನ್ನೆಗಳಲ್ಲೂ ಬರುವುದು .ಒಂದೇ ಕೆನ್ನೆಗೆ ಆವರಿಸುವ ಪ್ರಮಾಣ ಶೇ. 20 ರಿಂದ 30 ರಷ್ಟು. ಒಂದು ಪಾರ್ಶ್ವದ ಕೆನ್ನೆಯ ಬಾವು ಬಂದ ಒಂದೆರಡು ದಿನಗಳ ನಂತರ ಇನ್ನೊಂದು ಕೆನ್ನೆಗೆ ಲಗ್ಗೆ ಹಾಕಬಹುದು. ಗದ್ದದ ಕೆಳಗಿನ ಗ್ರಂಥಿಗಳೂ ಊದಿಕೊಳ್ಳಬಹುದು .ಈ ಅವಧಿಯಲ್ಲಿ ಒಬ್ಬೊಬ್ಬರಿಗೆ ವಾಂತಿ ಆಗಬಹುದು. ವಾರಗಟ್ಟಲೆ ಪೀಡಿಸಿದ ಜ್ವರ ಇಳಿಮುಖವಾಗಬಹುದು. ಮುಂದಿನ ವಾರದಲ್ಲಿ ಮಗು ಮೊದಲಿನಂತಾಗುವುದು.

ಮಂಗನಬಾವು ಬಂದ ಮಗುವಿಗೆ ತಲೆನೋವು ಕಾಡಿದರೆ , ಕತ್ತಿನಲ್ಲಿ ನೋವು, ಬಿಗಿ ಕಂಡರೆ, ಸೆಳವುಗಳು ಗೋಚರಿಸಿದರೆ, ಮಗುವಿಗೆ ಮಂಪರು ಮುತ್ತಿದರೆ ,ಪ್ರಜ್ಞಾ ಸ್ಥಿತಿಯಲ್ಲಿ ಬದಲಾವಣೆಗಳು ತೋರಿದಲ್ಲಿ ಅಲಕ್ಷಿಸದೇ ತಕ್ಷಣ ತಜ್ಞ ವೈದ್ಯರಲ್ಲಿಗೆ ಕರೆದುಕೊಂಡು ಹೋಗಬೇಕು. ಈ ಸೋಂಕಿನ ಸುಳಿಯಲ್ಲಿ ಸಿಕ್ಕವರೆಲ್ಲ ಎಲ್ಲ ಲಕ್ಷಣಗಳನ್ನು ತೋರ್ಪಡಿಸಬೇಕೆಂಬ ಕಡ್ಡಾಯವೇನಿಲ್ಲ .ಕೆಲವು ಮಕ್ಕಳಲ್ಲಿ ಕೆನ್ನೆ ಸ್ವಲ್ಪ ಊದಿ ,ಜ್ವರ ಬಾರದೇ ಹೋಗಬಹುದು. ಅವರಿಗೆ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿದೆ ಎಂದು ಅರ್ಥ.

ದುಷ್ಪರಿಣಾಮಗಳು:

ಈ ಮಕ್ಕಳಲ್ಲಿ ವೃಷಣದ ಉರಿತ ಅಪರೂಪಕ್ಕೆ ಆಗಬಹುದು. ಆದರೆ, ವಯಸ್ಕರಲ್ಲಿ ಇದರ ಹಾವಳಿ ಹೆಚ್ಚು. ಆಗ ಸಹಿಸಲಾಗದ ನೋವು ಹಣಕಿ ಹಾಕುವುದು. ಜ್ವರ ಹೆಚ್ಚಾಗುವುದು. ಭವಿಷ್ಯದ ಬಾಳಿನಲ್ಲಿ ಇದರಿಂದ ಸಂತಾನ ನಿರ್ಬಲತೆ ,ಕಾಮ ಶಕ್ತಿ ನಾಶವಾಗುವ ಸಾಧ್ಯತೆಯಿದೆ. ಅದೇ ರೀತಿ ಯುವತಿಯರಲ್ಲಿ ಅಂಡಾಶಯ ಉರಿತವಾಗಿ ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು ಉಂಟಾಗಬಹುದು. ಇವು ಮುಂದೆ ಬಂಜೆತನಕ್ಕೂ ಕಾರಣವಾಗಬಹುದು.

ಕೆಲವರಲ್ಲಿ ಮೇದೋಜ್ಜೀರಕ ಗ್ರಂಥಿಯ ಉರಿತ ಉದ್ಭವಿಸಿ , ಏಕಾ ಏಕಿಯಾಗಿ ತೀವ್ರತರ ಹೊಟ್ಟೆನೋವು, ವಾಂತಿ, ಭೇದಿ , ಸುಸ್ತು ,ಆಘಾತಗಳುಂಟಾಗಬಹುದು.ಚಳಿ ಮತ್ತು ಜ್ವರ ಇವುಗಳಿಂದಾಗಿ ಜಿಗುಪ್ಸೆ ಉಂಟಾಗಬಹುದು. ಇನ್ನು ಕೆಲವರಲ್ಲಿ ಮಿದುಳು ಪೊರೆಉರಿತದಿಂದ ವಿಪರೀತ ತಲೆನೋವು, ಜ್ವರ, ವಾಂತಿ, ಮಂಪರು, ಸೆಳವು ತೋರಬಹುದು.

ಶ್ರವಣ ನರದ ಉರಿತದಿಂದ ಕಿವುಡುತನ ,ಹೃದಯ ಮಾಂಸಖಂಡ ಉರಿತ ,ಕೀಲುಗಳ ಉರಿತ, ಯಕೃತ್ತಿನ ಉರಿತ ಮಂಗನಬಾವಿನಿಂದ ಉಂಟಾಗಬಹುದಾದ ಇತರೆ ತೊಡಕುಗಳು .” Mumps, measles and puppy love are terrible after twenty “ಎಂದು ಮಿಗ್ನಾನ್ ಮ್ಯಾಕ್ ಲಾಪ್ಲಿನ್ (Mignon McLaughlin) ಹೇಳಿರುವುದು ನೂರಕ್ಕೆ ನೂರು ಸತ್ಯ.

ಆರೈಕೆ ಹೇಗೆ?

ಮಂಗನಬಾವು ಮುತ್ತಿಗೆ ಹಾಕಿದಾಗ ಗಲ್ಲದ ಬಾವು ಭಯಂಕರವಾಗಿ ತೋರಿದರೂ ,ಆ ಬಾವು ಬಹುದಿನ ಉಳಿಯುವುದಿಲ್ಲ ಮತ್ತು ಕೀವು ಆಗುವುದಿಲ್ಲ. ರೋಗಿಯಲ್ಲಿ ಬಾವು ಕಾಣಿಸಿಕೊಳ್ಳುವ ಮೊದಲೇ ರೋಗವನ್ನು ಇತರರಿಗೆ ಹಂಚುವುದರಿಂದ ರೋಗಿಯನ್ನು ಪ್ರತ್ಯೇಕವಾಗಿ ಇರಿಸುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲ. ತೊಂದರೆಗಳಿಗೆ ತಕ್ಕ ಚಿಕಿತ್ಸೆಯನ್ನು ಮಾಡಬೇಕಾಗುವುದು ರೋಗಿಯ ಬಾಯಿ ತೊಳೆದು ಸ್ವಚ್ಛವಾಗಿರಿಸಬೇಕು. ಇವರಿಗೆ ಹೆಚ್ಚಾಗಿ ದ್ರವ ಆಹಾರ, ಇಲ್ಲವೆ ಮೆತ್ತಗಿರುವ ಆಹಾರವನ್ನು ಕೊಡಬೇಕು. ನೋವು ಶಮನಕ್ಕಾಗಿ ನೋವು ನಿವಾರಕ ಗುಳಿಗೆಗಳನ್ನು ನೀಡಬೇಕು. ದ್ವಿತೀಯ ಸೋಂಕು ಮತ್ತು ದುಷ್ಪರಿಣಾಮಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜೀವಿರೋಧಕಗಳನ್ನು ನೀಡಬೇಕು.

ಪ್ರತಿಬಂಧಕೋಪಾಯಗಳು:

  • ಎಂ.ಎಂ.ಆರ್.ಲಸಿಕೆಯನ್ನು ಮೌರಿಸ್ ಹಿಲೆಮನ್ 1967 ರಲ್ಲಿ ಕಂಡು ಹಿಡಿದರು. ಇದನ್ನು ಮಕ್ಕಳಿಗೆ ಶಾಲೆಗೆ ಹೋಗುವ ಪೂರ್ವದಲ್ಲಿ ಎರಡು ಸಾರೆ ನೀಡಬೇಕು—
  • ಮಗುವಿಗೆ 12 ರಿಂದ 15 ತಿಂಗಳ ಅವಧಿಯಲ್ಲಿ ಒಮ್ಮೆ
  •  4 ರಿಂದ 6 ವರ್ಷಗಳ ನಡುವೆ ಮತ್ತೊಮ್ಮೆ ಚುಚ್ಚುಮದ್ದನ್ನು ( ಲಸಿಕೆ) ನೀಡುವುದರಿಂದ ಮಂಗನಬಾವಿನಿಂದ ಮಗು ಸಂಪೂರ್ಣ ರಕ್ಷಣೆ ಪಡೆಯುವುದು. ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗುವಿಗೆ, ರಕ್ತದ ವೈಪರಿತ್ಯಗಳಿರುವ ಮಗುವಿಗೆ, ಮಗುವಿನ ರೋಗ ಪ್ರತಿರೋಧಕ ಶಕ್ತಿ ಕುಗ್ಗಿಸುವ ಎಚ್.ಐ.ವಿ / ಏಡ್ಸ್ ರೋಗದಿಂದ ಮಗು ಬಳಲುತ್ತಿದ್ದರೆ ,ಸ್ಟಿರಾಯ್ಡ್ ಚಿಕಿತ್ಸೆ ಮಗು ಪಡೆಯುತ್ತಿದ್ದರೆ ,ಮಗು ನಾಲ್ಕು ವಾರಗಳೊಳಗೆ ಬೇರೆ ಲಸಿಕೆ ಪಡೆದಿದ್ದರೆ ವೈದ್ಯರೊಡನೆ ಸಮಾಲೋಚನೆ ಅವಶ್ಯ ಎಂಬುದನ್ನು ಪಾಲಕರು ಮರೆಯಬಾರದು. 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವಕರು ಮಂಗನಬಾವಿನಿಂದ ಬಳಲದೇ ಇದ್ದರೆ, ಅವರಿಗೆ ಒಂದು ಡೋಸ್ ಲಸಿಕೆಯನ್ನು ನೀಡಬೇಕು.
  • ಲಸಿಕೆಯ ಬಗ್ಗೆ ತಿಳುವಳಿಕೆ ಮತ್ತು ಆರೋಗ್ಯ ಶಿಕ್ಷಣ ನೀಡಬೇಕು.

ಡಾ.ಕರವೀರಪ್ರಭು ಕ್ಯಾಲಕೊಂಡ 

ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು 

- Advertisement -
- Advertisement -

Latest News

ಸೈನಿಕರು ದೇಶದ ಆಸ್ತಿ ಮತ್ತು ಶಕ್ತಿ ಇದ್ದಂತೆ-  ಪ್ರೊ. ಸಂಜೀವ ಮಂಟೂರ

ಮೂಡಲಗಿ:-ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ "ಕಾರ್ಗಿಲ್ ವಿಜಯೋತ್ಸವ" ಕಾರ್ಯಕ್ರಮ ನಡೆಯಿತು. ಭಾರತ ದೇಶದ ರಕ್ಷಣೆಯಲ್ಲಿ ವೀರಯೋಧರು ಒಂದು ಶಕ್ತಿಯಾಗಿ ದೇಶದ ಸಂರಕ್ಷಕರಾಗಿ ತಮ್ಮ ಜೀವವನ್ನು ತ್ಯಾಗ ಮಾಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group