ಸ್ಕೌಟ್ಸ್ ವು ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ
ಮೂಡಲಗಿ: ‘ಸ್ಕೌಟ್ಸ್ ವು ಮಕ್ಕಳಲ್ಲಿ ಶಿಸ್ತು, ಸಂಯಮ, ಸೌಹಾರ್ದತೆ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸುವುದರೊಂದಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತದೆ” ಎಂದು ಧಾರವಾಡ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಪರ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್ಎಸ್ಆರ್ ಪ್ರೌಢ ಶಾಲೆಯಲ್ಲಿ ಸೋಮವಾರ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಮತ್ತು ವಿವಿಧ ವಿಭಾಗಗಳ ಸ್ಕೌಟ್ಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ಶಾಲೆಯಲ್ಲಿ ಸ್ಕೌಟ್ಸ್ ಘಟಕ ಪ್ರಾರಂಭಿಸುವ ಮೂಲಕ ಮಕ್ಕಳನ್ನು ಶ್ರೇಷ್ಠ ನಾಗರಿಕರನ್ನಾಗಿಸಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ದಲ್ಲಿ ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಪಡುವಂತದ್ದು. ಕಳೆದ ಎರಡು ದಶಕಗಳಿಂದ ನಾನು ಸ್ಕೌಟ್ಸ್ ಮತ್ತು ಗೈಡ್ಸ್ ದಲ್ಲಿ ಸೇವೆ ಸಲ್ಲಿಸುತ್ತಿರುವುದು ನನ್ನಲ್ಲಿ ಅಭಿಮಾನ ಮತ್ತು ಹೆಮ್ಮೆ ತಂದಿದೆ ಎಂದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆಯನ್ನು ಬೆಳೆಸುವುದು ಇಂದಿನ ಅವಶ್ಯಕತೆ ಇದೆ. ಮೂಡಲಗಿಯ ಎಸ್ಎಸ್ಆರ್ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಪ್ರಾರಂಭಿಸಿ ಗ್ರಾಮೀಣ ಪ್ರತಿಭೆಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಬೆಳಗಾವಿಯ ನಿರಂಜನ ದೇಸಾಯಿ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ವಿದ್ಯಾರ್ಥಿಗಳಿಗೆ ಆಗುವ ಉಪಯುಕ್ತತೆ ಕುರಿತು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಸಾಧಕರನ್ನು ಸನ್ಮಾನಿಸಿದರು.
ಮುಖ್ಯ ಅತಿಥಿಯಾಗಿ ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ, ಬಿಇಒ ಅಜಿತ್ ಮನ್ನಿಕೇರಿ, ಸಂಸ್ಥೆಯ ನಿರ್ದೇಶಕರಾದ ಅಜ್ಜಪ್ಪ ಗಿರಡ್ಡಿ, ವಿ.ಟಿ. ಸೋನವಾಲಕರ, ಪಿ.ಆರ್. ಲಂಕೆಪ್ಪನ್ನವರ, ಎ.ಐ. ಸತರಡ್ಡಿ, ಪ್ರಾಚಾರ್ಯ ಎ.ಪಿ. ರಡ್ಡಿ, ಪ್ರೊ. ಎಸ್.ಡಿ. ತಳವಾರ, ಬಾಲಶೇಖರ ಬಂದಿ, ಉಪಪ್ರಾಚಾರ್ಯ ಕೆ.ಎಸ್. ಹೊಸಟ್ಟಿ, ವಿಜ್ಞಾನ ಶಿಕ್ಷಕ ಆರ್.ಕೆ. ಕಳಸನ್ನವರ ಇದ್ದರು.
ಪ್ರಾಚಾರ್ಯ ಪ್ರೊ. ಎಸ್.ಡಿ. ತಳವಾರ ಸ್ವಾಗತಿಸಿದರು, ಆರ್.ಎಂ. ಕಾಂಬಳೆ, ಸಿ.ಎಸ್. ಮೋಟೆಪ್ಪಗೋಳ ನಿರೂಪಿಸಿದರು, ಬಿ.ಕೆ. ಕಾಡಪ್ಪಗೋಳ ವಂದಿಸಿದರು.
ಸಮಾರಂಭದ ಪೂರ್ವದಲ್ಲಿ ಸ್ಕೌಟ್ಸ್ ಧ್ವಾಜಾರೋಹಣ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.