ಕಾವ್ಯ ನಮನ
“ನನ್ನೆಲ್ಲ ಪ್ರೀತಿಯ ಕನ್ನಡದ ಹೃದಯಗಳಿಗೆ ನಲುಮೆಯ ಒಲುಮೆಯ ಸಂಭ್ರಮದ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಕಾಮನೆಗಳು”
ಉಸಿರು ಕೊಟ್ಟ, ಹೆಸರು ಕೊಟ್ಟ ಕರುನಾಡಿಗೆ, ಜೀವಕೊಂದು ಧನ್ಯತೆ, ಬದುಕಿಗೊಂದು ಮಾನ್ಯತೆ ಕೊಟ್ಟ ಕನ್ನಡನುಡಿಗೆ ಅಂತರಾಳದ ಅನಂತ ಪ್ರಣಾಮಗಳೊಂದಿಗೆ ತುಂಬಿದೆದೆಯ ನುಡಿ ನಮನ. ಧನ್ಯತೆಯ ಕಾವ್ಯ ನಮನ. ಇದು ಈ ಮಣ್ಣಿನಲ್ಲಿ ಜನಿಸಿದ ಪ್ರತಿ ಕನ್ನಡಿಗನ ಹೃದಯದ ಕವಿತೆ. ಕನ್ನಡದ ಮನಸುಗಳ ಚಿರಂತನ ಭಾವಗೀತೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಕಾವ್ಯ ನಮನ.!
ಅಕ್ಕರೆಯ ತಾಯ್ನುಡಿಗೆ
ಸಕ್ಕರೆಯ ಸವಿನುಡಿಗೆ
ಧೀಮಂತಿಕೆಯ ಸಿರಿನುಡಿಗೆ
ಒಲುಮೆಯ ನಲ್ನುಡಿಗೆ
ಚೆಲುವಿಕೆಯ ಚೆನ್ನುಡಿಗೆ
ಕಸ್ತೂರಿ ಕನ್ನಡನುಡಿಗೆ
ಸಾವಿರ ಸಾವಿರದ ಶರಣು.!
ಅಂದದ ಗಂಧದಗುಡಿಗೆ
ರಮ್ಯ ನಿಸರ್ಗ ಗೂಡಿಗೆ
ಜೀವನದಿಗಳ ಬೀಡಿಗೆ
ಪವಿತ್ರಪಾವನ ನೆಲೆವೀಡಿಗೆ
ಹಿರಿಮೆ ಗರಿಮೆಗಳ
ದಿವ್ಯ ಭವ್ಯ ಕರುನಾಡಿಗೆ
ಸಾವಿರ ಸಾವಿರದ ಶರಣು.!
ರಣಕಲಿಗಳ ಮಹಾಧರೆಗೆ
ಸಾಹಿತ್ಯಕಲೆಗಳ ತವರೂರಿಗೆ
ವರಕವಿಗಳ ಜನ್ಮಭೂಮಿಗೆ
ಸಂಸ್ಕೃತಿ ಸಂಸ್ಕಾರದ ಮಣ್ಣಿಗೆ
ಮಹಾಮಹಿಮರ ಪುಣ್ಯನೆಲಕೆ
ಶಾಂತಿ ಪ್ರೀತಿಗಳ ಕರುನಾಡಿಗೆ
ಸಾವಿರ ಸಾವಿರದ ಶರಣು.!
ಅಖಂಡ ಕರ್ನಾಟಕದ
ಏಕೀಕರಣದ ಸುದಿನವಿಂದು
ಸಂತಸ ಸಡಗರ ಸಂಭ್ರಮಗಳ
ಕನ್ನಡ ರಾಜ್ಯೋತ್ಸವವಿಂದು
ತಾಯಿ ರಾಜರಾಜೇಶ್ವರಿಯ
ಮಹಾ ಮಹೋತ್ಸವವಿಂದು
ಹೆಮ್ಮೆಯಲಿ ಕವಿಭಾವ ನಮಿಸುತ
ಧನ್ಯತೆಯಲಿ ಜೀವ ಹೇಳಿದೆ
ಸಾವಿರ ಸಾವಿರದ ಶರಣು.!
ಎ.ಎನ್.ರಮೇಶ್. ಗುಬ್ಬಿ.