ಸಿಂದಗಿ: ಪ್ರಸ್ತುತ ದಿನದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗಿ ವಿಕೃತ ಕೃತ್ಯಗಳು ನಡೆದು ಮನುಷ್ಯತ್ವ ಮರೆತು ರಾಕ್ಷಸೀಯ ಪ್ರವೃತ್ತಿ ಬೆಳೆಯುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಡೋಣೂರ ಅವರು ಹೇಳಿದರು.
ಪಟ್ಟಣದ ಪಿ.ಇ.ಎಸ್ ಸಂಸ್ಥೆಯಲ್ಲಿ ಲಯನ್ಸ್ ಕ್ಲಬ್ ಹಾಗೂ ಮಾತೋಶ್ರೀ ಗುರುಬಸಮ್ಮ ಹಣಮಂತ್ರಾಯ ಸೋಮಾಪೂರ ಸೇವಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಕೆ.ಎಚ್. ಸೋಮಾಪೂರರವರು ರಚಿಸಿರುವ ಪತಂಗ, ಸಕ್ಕಾಸರಗಿ ಕಥಾ ಸಂಕಲನಗಳು, ಗಂಗೆತ್ತು ಕವನ ಸಂಕಲನ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಮನುಷ್ಯನ ಮನಸ್ಸಿಗೆ ಸಂತೋಷ, ಉತ್ಸಾಹ, ನೆಮ್ಮದಿ ಹಾಗೂ ಮನುಷ್ಯತ್ವ ಒದಗಿಸುವ ತಾಕತ್ತು ಸಾಹಿತ್ಯಕ್ಕಿದೆ ಅಂತಹ ಸಾಹಿತ್ಯ ಸೇವೆಗೈಯುತ್ತಿರುವ ಸೋಮಾಪೂರರವರ ಕಾಯಕ ಶ್ಲಾಘನೀಯ. ಒಂದು ಸಾಹಿತ್ಯ ಕೃತಿ ರಚನೆಯಾಗಬೇಕಾದರೆ ಆ ವ್ಯಕ್ತಿಯ ಮನಸ್ಥಿತಿಯ ಮೇಲೆ ನಿಂತಿರುತ್ತದೆ. ಕವಿಯ ಮನಸ್ಥಿತಿ ಹೇಗಿರುತ್ತದೋ ಹಾಗೆಯೇ ಕೃತಿಗಳು ರಚನೆಯಾಗುತ್ತವೆ. ಅಂತಹ ಉತ್ತಮ ಮನಸ್ಥಿತಿ ಹೊಂದಿ ಕೃತಿ ರಚಿಸಿದ ಲೇಖಕರ ಕೃತಿಗಳನ್ನು ಓದಿ ಪ್ರೋತ್ಸಾಹಿಸಬೇಕು ಎಂದರು.
ಸಕ್ಕಾಸರಗಿ ಕಥಾ ಸಂಕಲನ ಕೃತಿಯನ್ನು ಪರಿಚಯಿಸಿದ ಡಾ. ಶ್ರೀಶೈಲ ನಾಗರಾಳ, “ಪತಂಗ” ಕಥಾ ಸಂಕಲನವನ್ನು ಪರಿಚಯಿಸಿದ ಸಂಶೋಧಕ ನಿಂಗನಗೌಡ ದೇಸಾಯಿ, “ಗಂಗೆತ್ತು” ಕವನ ಸಂಕಲನವನ್ನು ಹಿರಿಯ ಸಾಹಿತಿ ಸಿದ್ಧರಾಮ ಉಪ್ಪಿನರವರು ಕೃತಿ ಅವಲೋಕನ ಮಾಡಿದರು.
ಅಧ್ಯಕ್ಷತೆ ವಹಿಸಿದ ಪಿ.ಇ.ಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ ಪರಮ ಪೂಜ್ಯ ಡಾ|| ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಲೇಖಕರು ಹಾಗೂ ಲಯನ್ಸ್ ಕ್ಲಬ್ನ ಅಧ್ಯಕ್ಷ ಕೆ.ಎಚ್. ಸೋಮಾಪೂರ ಅವರು ಆಶಯ ನುಡಿಗಳನ್ನಾಡಿದರು. ಪ್ರಾಚಾರ್ಯ ಆರ್.ಬಿ. ಗೋಡಕರ, ಬಿ.ಎಂ ಬಿರಾದಾರ, ಸಿ.ಕೆ.ಕಟ್ಟಿ, ಎಸ್.ವಾಯ್.ಬೀಳಗಿ, ಕೃಷಿಕ ಸಂಘದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಪುರಸಭೆಯ ಮಾಜಿ ಸದಸ್ಯ ಶರಣಪ್ಪ ಕುರುಡೆ, ಪ್ರೊ. ಬಿ.ಜಿ. ಕಲಶೆಟ್ಟಿ, ಎಸ್.ಎಸ್ ಮಲ್ಲೇದ, ಲಾಯನ್. ಎಸ್.ಬಿ. ಚಾಗಶೆಟ್ಟಿ, ಉಪಸ್ಥಿತರಿದ್ದರು.
ನಿವೃತ್ತ ಪ್ರಾಚಾರ್ಯ ಆಯ್.ಬಿ. ಬಿರಾದಾರ ಸ್ವಾಗತಿಸಿದರು. ಪ್ರಾಚಾರ್ಯ ಜಿ.ಎಸ್. ಕಡಣಿ ನಿರೂಪಿಸಿದರು. ಬಸವರಾಜ ಸೋಮಾಪೂರ ವಂದಿಸಿದರು.