ಮೂಡಲಗಿ: ಜೀವನದಲ್ಲಿ ಸಾಧನೆ ಮಾಡಿದವರಿಗೆ ಮಾತ್ರ ಬೆಲೆ ಇದೆ ಆದ್ದರಿಂದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಸಾಧನೆಗಾಗಿ ವ್ಯಯ ಮಾಡಿರಿ ಎಂದು ಸಾಹಿತಿ, ಪತ್ರಕರ್ತ ಶಿವಲಿಂಗ ಸಿದ್ನಾಳ ಅವರು ಆರ್ ಡಿಎಸ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಮೂಡಲಗಿಯ ಆರ್ ಡಿಎಸ್ ಸಂಸ್ಥೆಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಶ್ರೀ ವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವತಿಯಿಂದ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಮಯವನ್ನು ಸಾಧನೆಗಾಗಿ ಖರ್ಚು ಮಾಡಿದರೆ ನಾಳೆ ಜನ ನಿಮ್ಮನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. ನಮ್ಮ ಶಕ್ತಿಯ ಬಗ್ಗೆ ನಮಗೆ ಅರಿವಿರಬೇಕು ಕೆಲವು ಸಂದರ್ಭದಲ್ಲಿ ನಮ್ಮನ್ನು ನಾವು ಅನಿವಾರ್ಯಕ್ಕೆ ಒಳಪಡಿಸಿಕೊಂಡಾಗ ನಮ್ಮ ಶಕ್ತಿಯ ಅರಿವಾಗುತ್ತದೆ. ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡಬೇಡಿ ಎಂದು ಹೇಳಿದರು.
ಮತ್ತೊಬ್ಬ ಅತಿಥಿ ಬಾಲಶೇಖರ ಬಂದಿ ಮಾತನಾಡಿ, ಸುಮಾರು ೧೨೦೦ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿರುವ ಆರ್ ಡಿಎಸ್ ಸಂಸ್ಥೆಯ ಒಳಗೆ ಆಗಮಿಸಿದಾಗ ಒಂದು ವಿಶ್ವ ವಿದ್ಯಾಲಯದ ಒಳಗೆ ಬಂದಂಥ ಅನುಭವವಾಗುತ್ತದೆ. ಆರ್ ಡಿಎಸ್ ಸಂಸ್ಥೆಯು ಶಿಕ್ಷಣದ ಜೊತೆಗೆ ಸಮಾಜ ಕಲ್ಯಾಣದ ಕೆಲಸಗಳನ್ನೂ ಮಾಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಚಂದರಗಿ ಕ್ರೀಡಾ ಶಾಲೆಯ ನಿರ್ದೇಶಕ ಸಂತೋಷ ಪಾರ್ಶಿ ವಹಿಸಿದ್ದರು.
ಖ್ಯಾತ ಜಾನಪದ ಹಾಡುಗಾರ ಶಬ್ಬೀರ ಡಾಂಗೆ ಹಾಡು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಸಂತೋಷ ಲಟ್ಟಿ ವರದಿವಾಚನ ಮಾಡಿದರು.
ಸಾವಿರ ದಿನ ಅಧ್ಯಯನ ದಲ್ಲಿ ತೊಡಗುವುದಕ್ಕಿಂತ ಒಂದು ದಿನ ಒಳ್ಳೆಯ ಗುರು ಜೊತೆ ಇರುವುದು ಲೇಸು ಎಂದು ಹೇಳಿ ವಿದ್ಯಾರ್ಥಿನಿ ಭಾರತಿ ಖಾನಟ್ಟಿಯವರು ತಮ್ಮ ಗುರು ಶಿಷ್ಯರ ಸಂಬಂಧದ ಬಗ್ಗೆ ಕಾವ್ಯಾತ್ಮಕವಾಗಿ ಬಣ್ಣನೆ ಮಾಡಿದರು. ಇವರಲ್ಲದೆ ಕೆಲವು ವಿದ್ಯಾರ್ಥಿಗಳೂ ತಮ್ಮ ಅನುಭವ ಹಂಚಿಕೊಂಡರು.
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಅಪಾರ ಸಂಖ್ಯೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪಾರಿತೋಷಕ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು.
ವೇದಿಕೆಯ ಮೇಲೆ ಪುರಸಭಾ ಸದಸ್ಯ ಶಿವು ಚಂಡಕಿ, ಅನ್ವರ ನದಾಫ, ಗಿರಿಗೌಡಾ ಪಾಟೀಲ, ಮುನ್ಯಾಳ ಗ್ರಾಮ ಪಂಚಾಯತ ಮಾಜಿ ಸದಸ್ಯ ರಮೇಶ ಪಾಟೀಲ, ಪತ್ರಕರ್ತರಾದ ಉಮೇಶ ಬೆಳಕೂಡ, ಸುಭಾಸ ಕಡಾಡಿ, ಮಲ್ಲು ಬೋಳನವರ, ಲಕ್ಷ್ಮಣ ಮೆಳ್ಳಿಗೇರಿ, ಸುನೀಲ ಗಸ್ತಿ , ಪಿಯು ಕಾಲೇಜ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ, ಮುಖ್ಯೋಪಾಧ್ಯಾಯ ಕಾಮಣ್ಣ ಕಾಳೆ, ಪ್ರಾಚಾರ್ಯ ಸತೀಶ ಗೋಟೂರೆ, ಪ್ರಾಚಾರ್ಯ ಜೋಸೆಫ್ ಎಸ್ ಬಿ, ಪ್ರಾಚಾರ್ಯ ಚಿದಾನಂದ ಶೆಟ್ಟರ ಉಪಸ್ಥಿತರಿದ್ದರು.