ಮೂಡಲಗಿ: ಸಾರ್ವಜನಿಕ ಸೇವೆಗಳಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಭವಿಷ್ಯತ್ತಿನ ಭವ್ಯ ಸುಂದರ ಸಮಾಜ ಸೃಷ್ಟಿಸುವಲ್ಲಿ ಮಹತ್ವದ ಹಾಗೂ ಜವಾಬ್ದಾರಿಯುತ ಕರ್ತವ್ಯವು ಶಿಕ್ಷಕರದಾಗಿದೆ. ಸಾಮಾಜಿಕವಾಗಿ ಉತ್ತಮ ಸ್ವಾಸ್ಥ್ಯ ನಿರ್ಮಾಣ ಮಾಡುವ ಮಹತ್ತರ ಕೆಲಸ ಶಿಕ್ಷಕ ಸಮುದಾಯದ ಮೇಲಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಸಮೀಪದ ಕೌಜಲಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಡಾ. ಅಂಬೇಡ್ಕರ ಭವನದಲ್ಲಿ ಜರುಗಿದ ದೈಹಿಕ ಶಿಕ್ಷಕರಾದ ಸಿದ್ದಾರೂಢ ನಾಗನೂರ ಇವರ ಸತ್ಕಾರ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವೃತ್ತಿಗಳಲ್ಲಿ ಕೃಷಿಕ, ಸೈನಿಕ ಮತ್ತು ಶಿಕ್ಷಕರ ಸೇವಾ ಕಾರ್ಯಗಳು ಸರ್ವಶ್ರೇಷ್ಠವಾಗಿವೆ. ನಮಗೆ ದೊರೆತಿರುವ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿದಾಗ ಮಾತ್ರ ಸಾರ್ವಜನಿಕರ ಮನ್ನಣೆ ಜೊತೆಗೆ ಪ್ರಶಂಸೆಗೆ ಪಾತ್ರರಾಗಲು ಸಾಧ್ಯವಾಗುವದು. ವೃತ್ತಿ ಬದುಕಿನಲ್ಲಿ ವರ್ಗಾವಣೆ, ಬಡ್ತಿ ಇತ್ಯಾದಿ ನಿಯಮಾವಳಿಗಳು ಸಾಮಾನ್ಯ ಅಂತಹ ಸಂದರ್ಭದಲ್ಲಿ ತಮಗೆ ದೊರೆತಿರುವ ಸಮಯಾವಕಾಶದಲ್ಲಿ ಉತ್ತಮ ಕಾರ್ಯಚಟುವಟಿಕೆಗಳು ನಮ್ಮಿಂದಾದಾಗ ಮಾತ್ರ ಸಾರ್ವಜನಿಕ ಬದುಕಿನಲ್ಲಿ ಸತ್ಕಾರ ಜೊತೆಗೆ ವೃತ್ತಿ ಬದುಕಿನ ಮಹತ್ವ ತಿಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅವ್ವಣ್ಣ ಮೊಡಿ, ನಿಂಗರಾಜ ಯರಗಟ್ಟಿ, ವಿಠ್ಠಲ ಅಮಣಿ ಅನಿಸಿಕೆಗಳನ್ನು ತಿಳಿಸಿ, ನಾಗನೂರ ಅವರ 17 ವರ್ಷಗಳ ವೃತ್ತಿ ಬದುಕಿನ ವಿವಿಧ ಆಯಾಮಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ವರ್ಗಾವಣೆಗೊಂಡ ಸಿದ್ದಾರೂಢ ನಾಗನೂರ ಇವರನ್ನು ಕೌಜಲಗಿಯ ಗೆಳೆಯರ ಬಳಗ ಹಾಗೂ ವಿವಿಧ ಸಂಘ ಸಂಸ್ಥೆಗಳು ಸತ್ಕರಿಸುವದರ ಜೊತೆಗೆ ಬಂಗಾರದ ಆಭರಣ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
ಸಾನ್ನಿಧ್ಯವನ್ನು ಬೀರದೇವರ ವಿಠ್ಠಲ ದೇವರುಷಿ, ಸಾಯಿ ಮಂದಿರ ಅರ್ಚಕ ಹಿರೇಮಠ ವಹಿಸಿದ್ದರು.
ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಶಿವಾನಂದ ಭಜಂತ್ರಿ, ಮುಖಂಡರಾದ ರವಿ ಪರುಶೆಟ್ಟಿ, ಸುಭಾಸ ಕೌಜಲಗಿ, ಬಸು ಜೋಗಿ, ಜಗದೀಶ ಭೋವಿ, ಶಂಕರ ಜ್ಯೋತೆನ್ನವರ, ಅಶೋಕ ಶಿವಾಪೂರ, ಅಶೋಕ ಶಿವಾಪೂರ, ಸಂಗಪ್ಪ ದೋಣಿ, ರಾಯಪ್ಪ ಬಳೋಲದಾರ, ಬಸು ಕೋಟಿನತೋಟ, ಬಸು ಕೋಟಿನತೋಟ, ಎಸ್.ಡಿ.ಎಮ್.ಸಿ ಅಧ್ಯಕ್ಷ ಮಹದೇವ ಬುದ್ನಿ, ಪ್ರಧಾನಗುರುಗಳಾದ ಅಶೋಕ ದಳವಾಯಿ, ಮಾಲತೇಶ ಸಣ್ಣಕ್ಕಿ ಹಾಗೂ ವಿದ್ಯಾರ್ಥಿಗಳು ಶಿಕ್ಷಕ ಸಮೂಹ ಪಾಲಕ-ಪೋಷಕರು, ಹಳೇಯ ವಿದ್ಯಾರ್ಥಿಗಳು ಹಾಜರಿದ್ದರು.