ಮೂಡಲಗಿ: ಸರ್ಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಆ ಸೌಲಭ್ಯಗಳನ್ನು ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರು ಪಡೆಯಬೇಕೆಂದು ಜಿಲ್ಲಾ ಕಾರ್ಮಿಕ ಉಪವಿಭಾಗ 1ರ ಅಧಿಕಾರಿ ಮಹೇಶ ಕುಳಲಿ ಹೇಳಿದರು.
ಅವರು ಶನಿವಾರ ತಹಸೀಲ್ದಾರ ಕಛೇರಿಯಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ನಿರ್ದೇಶನದಂತೆ ಅರಭಾಂವಿ ಶಾಸಕ ಹಾಗೂ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಮಾರ್ಗದರ್ಶನದಲ್ಲಿ ಅದಾಲತ್ ಕಾರ್ಯಕ್ರಮದಲ್ಲಿ ಸಸಿಗೆ ನೀರು ಉಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರ ಕಾರ್ಮಿಕರ ಕುಟುಂಬಕ್ಕೆ ಮದುವೆ,ಶೈಕ್ಷಣಿಕ,ಪಿಂಚಣಿ ಸಹಾಯಧನಗಳಂತಹ ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಿದೆ ಆದರೆ ಅದರ ಉಪಯೋಗವನ್ನು ಕೆಲ ಕಾರ್ಮಿಕರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ ಎಲ್ಲ ಕಟ್ಟಡ ಕಾರ್ಮಿಕರು ಇದರ ಸದುಪಯೋಗ ಪಡೆಯುವಂತಾಗಬೇಕು. ಅರ್ಜಿ ಸಲ್ಲಿಸಿದ ಕೆಲ ಕಾರ್ಮಿಕರ ಅರ್ಜಿಗಳು ವಿಲೆವಾರಿಯಾಗದೆ ಸೌಲಭ್ಯ ವಂಚಿತರಾದ ಕಾರ್ಮಿಕರ ಕಛೇರಿ ಅಲೆದಾಟ ತಪ್ಪಿಸಲು ಕಾರ್ಮಿಕರಿದ್ದಲ್ಲೆ ಕಾರ್ಮಿಕ ಇಲಾಖೆ ‘ಕಾರ್ಮಿಕ ಅದಾಲತ್’ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಮಿಕ ನಿರೀಕ್ಷಕ ಪಾಂಡುರಂಗ ಮಾವರಕರ ಮಾತನಾಡಿ, ಸಂಘಟಿತ,ಅಸಂಘಟಿತ ಕಾರ್ಮಿಕರೆಲ್ಲ ಇಲಾಖೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿ ಕಾಲ ಕಾಲಕ್ಕೆ ಸದಸ್ಯತ್ವ ನವೀಕರಣ ಮಾಡಿಕೊಂಡಲ್ಲಿ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ಸಹಕಾರಿ ಆಗಲಿದೆ ಎಂದರು.
ಅದಾಲತ್ನಲ್ಲಿ ಕಾರ್ಮಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಬಾಕಿ ಇದ್ದ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಆಗಿರುವಂತ ಲೋಪದೋಷ ಸರಿಪಡಿಸಿ ಅರ್ಜಿಗಳನ್ನು ವಿಲೆವಾರಿ ಮಾಡಿ ಸ್ಥಳದಲ್ಲಿಯೆ ಮಂಜೂರಾತಿ ಆದೇಶ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜ ಪೋಳ, ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಗರುನಾಥ ಗಂಗನ್ನವರ, ಈರಪ್ಪ ಢವಳೇಶ್ವರ ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿಗಳಾದ ರುದ್ರಮುನಿ ಹಿರೇಮಠ, ಅಲ್ತಾಫ್ ಜಕಾತಿ, ಶಿವಾನಂದ ಕೊಳಸಿ, ಉಮೇಶ ದೊಡಮನಿ, ಕಾರ್ಮಿಕ ಬಂಧು ಈರಪ್ಪ ಮಾಲೋಜಿ ಹಾಗೂ ಅನೇಕ ಕಾರ್ಮಿರು ಇದ್ದರು.