ಸಿಂದಗಿ– ರಾಷ್ಟ್ರದ ಭವಿಷ್ಯ ಸಂಪನ್ಮೂಲಗಳಾದ ಯುವ ಸಮುದಾಯ ಮಾದಕ ವ್ಯಸನಗಳಿಂದ ದೂರವಿದ್ದು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿಕೊಳ್ಳಬೇಕು ಎಂದು ಸಿಂದಗಿಯ ಪ್ರಧಾನ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ನಾಗೇಶ ಮೊಗೇರ ಅವರು ಹೇಳಿದರು.
ಪಟ್ಟಣದ ಎಚ್.ಜಿ.ಕಾಲೇಜ ಸಭಾಭವನದಲ್ಲಿ ಗುರುವಾರ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಚ್.ಜಿ.ಸಂಯುಕ್ತ ಪದವಿ ಪೂರ್ವ ಕಾಲೇಜಗಳ ಸಹಯೋಗದಲ್ಲಿ ನಡೆದ ಮಾದಕ ವ್ಯಸನದ ಕುರಿತಾದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒತ್ತಡ ಜೀವನ ಮತ್ತು ತಪ್ಪು ಹೆಜ್ಜೆಗಳಿಂದಾಗಿ ಮುಗ್ಧ ಯುವಕರು ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಇಂಥ ಕಾನೂನು ಸೇವಾ ಕಾರ್ಯಕ್ರಮಗಳಿಂದ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿವ್ಹಿಲ್ ನ್ಯಾಯಾಧೀಶ ಮಹಾಂತೇಶ ಭೂಸಗೋಳ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಕಾನೂನು ಪ್ರಕಾರ ಅಪರಾಧ ಇದರ ಅರಿವಿಲ್ಲದ ಯುವ ಜನರು ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಉತ್ತಮ ಭವಿಷ್ಯ ರೂಪಿಸಿಕೊಂಡು ಪೋಷಕರ ಕನಸುಗಳನ್ನು ನನಸು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ್ರಾಯ ಹರನಾಳ ಮತ್ತು ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಅಶೋಕ ಮನಗೂಳಿ, ಅಪರ ಸರ್ಕಾರಿ ವಕೀಲ ಎಂ.ಎಸ್.ಪಾಟೀಲ ಮಾತನಾಡಿ, ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಯುವ ಜನಾಂಗ ಶಾಲಾ ಕಾಲೇಜು ಹಂತದಲ್ಲಿಯೇ ಅನೇಕ ದುಶ್ಚಟಗಳಿಗೆ ಒಳಗಾಗುತ್ತಿರುವದು ಒಂದು ವಿಕೃತಿ. ಸಂಸ್ಕಾರ ಹಾಗೂ ಉತ್ತಮ ಶಿಕ್ಷಣದಿಂದ ನಾವು ಸಮಾಜದಲ್ಲಿ ಮುಂದೆ ಬಂದಾಗ ಮಾತ್ರ ಈ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಹೇಳಿದರು.
ನ್ಯಾಯವಾದಿ ಬಿ.ಜಿ.ನೆಲ್ಲಗಿ ಅವರು ಮಾದಕ ವ್ಯಸನಗಳಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನೀಡಿ, ಸರ್ಕಾರ ಮಾದಕ ವಸ್ತುಗಳ ಕುರಿತಾಗಿ ಅನೇಕ ಕಾನೂನುಗಳನ್ನು ಜಾರಿ ಮಾಡಿದ್ದರು ಅವು ಯೋಗ್ಯ ರೀತಿಯಲ್ಲಿ ಜಾರಿಗೆ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವ್ಹಿಲ್ ನ್ಯಾಯಧೀಶ ಹರೀಶ ಜಾಧವ, ಸಹಾಯಕ ಸರ್ಕಾರಿ ವಕೀಲ ಆನಂದ ರಾಠೋಡ, ಸಹಾಯಕ ಸರ್ಕಾರಿ ವಕೀಲೆ ಎಫ್.ಝಡ್ ಖತೀಬ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡ್ಡಮನಿ, ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ಉಪ ಪ್ರಾಚಾರ್ಯ ಎನ್.ವ್ಹಿ.ಆಲಗೂರ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಕಾಲೇಜ್ ವಿದ್ಯಾರ್ಥಿಗಳು ಮಾದಕ ವ್ಯಸನದ ದುಷ್ಪರಿಣಾಮದ ಕುರಿತಾದ ಪ್ರಹಸನ ನೆರವೇರಿಸಿದರು.
ವಿದ್ಯಾಶ್ರೀ ತಳವಾರ ಪ್ರಾರ್ಥಿಸಿದರು, ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಸ್ವಾಗತಿದರು, ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.