ಸಿಂದಗಿ: ರಾಜ್ಯ ಸರಕಾರ ಹೊರಡಿಸಿದ ಸಂವಿಧಾನ ಜಾಗೃತಿ ರಥವನ್ನು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡು ಸಂವಿಧಾನದ ಅರಿವು ಮೂಡಿಸುವಂಥ ಕಾರ್ಯಕ್ರಮಗಳು ಅನಾವರಣಗೊಳ್ಳಬೇಕು ಎಂದು ವಿಜಯಪುರ ಆಹಾರ ವಿಬಾಗದ ಜಿಲ್ಲಾಧಿಕಾರಿ ವಿನಯ ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದ ಮೂಲಭೂತ ಹಕ್ಕುಗಳ ಬಗ್ಗೆ ತಿಳಿದುಕೊಂಡು ಮತ್ತೊಬ್ಬರಿಗೆ ಅರಿವು ಮೂಡಿಸುವದು ಮತ್ತು ಸರಕಾರದಿಂದ ಹಮ್ಮಿಕೊಂಡ 5 ಗ್ಯಾರೆಂಟಿಗಳ ಬಗ್ಗೆ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು ಈ ತಾಲೂಕಿನಲ್ಲಿ 16 ಗ್ರಾಂ ಪ ಹಾಗೂ 1 ಪುರಸಭೆಯಲ್ಲಿ 4 ದಿನಗಳ ಕಾಲ ಈ ರಥ ಸಂಚರಿಸುತ್ತದೆ ಕಾರಣ ಯಾವುದೇ ಜಾತಿಗೆ ಸೀಮಿತವಾಗದೇ ಎಲ್ಲರು ಸ್ವ ಇಚ್ಚೆಯಿಂದ ಡಾ. ಅಂಬೇಡ್ಕರರು ಬರೆದ ಸಂವಿಧಾನದ ಮೂಲ ಪೀಠಿಕೆಯನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಫೇ 11 ರಂದು ಯರಗಲ್ ಬಿ.ಕೆ ಗ್ರಾಮಕ್ಕೆ ಸಂವಿಧಾನ ರಥ ಆಗಮಿಸಲಿದ್ದು ನಂತರ ನಾಗಾವಿ ಬಿ.ಕೆ, ಸುಂಗಠಾಣ, ಯಂಕಂಚಿಗೆ ವಾಸ್ತವ್ಯವಾಗಲಿದೆ. 12 ರಂದು ಗೋಲಗೇರಿ, ಹೊನ್ನಳ್ಳಿ, ಹಂದಿಗನೂರ, ಗುಬ್ಬೇವಾಡ ಗ್ರಾಮ ಪಂಚಾಯತಗಳ ಸಂಚರಿಸಿ ಬ್ಯಾಕೋಡ ಗ್ರಾಪಂಯಲ್ಲಿ ವಾಸ್ತವ್ಯವಾಗಲಿದೆ. 13 ರಂದು ರಾಂಪೂರ ಪಿಎ, ಚಾಂದಕವಠೆ, ಚಟ್ಟರಕಿಯಿಂದ ಹಿಕ್ಕನಗುತ್ತಿಯಲ್ಲಿ ವಾಸ್ತವ್ಯ, 14 ರಂದು ಬಂದಾಳ, ಕನ್ನೋಳ್ಳಿ, ಕೊಕಟನೂರ ನಂತರ ಸಿಂದಗಿಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು ಬೇರೆ ತಾಲೂಕಿಗೆ ಬೀಳ್ಕೊಡಲಾಗುವುದು ಎಲ್ಲ ಗ್ರಾಮ ಪಂಚಾಯತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಅಲ್ಲದೆ ವಾಸ್ತವವಾದ ಗ್ರಾಂಪಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು ಸಂವಿಧಾನದ ಮೂಲ ಪಿಠೀಕೆಯ ಸಾರಾಂಶದ ಬಗ್ಗೆ ತಿಳಿವಳಿಕೆ ನೀಡುವುದಲ್ಲದೆ ಅನುಭವಿಗಳಿಂದ ಉಪನ್ಯಾಸವಿದ್ದು ಇದು ಸಾರ್ವಜನಿಕ ಕಾರ್ಯಕ್ರಮವಾಗಬೇಕು ಎಂದು ಎಲ್ಲ ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅದ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ರಾಜ್ಯ ಸರಕಾರ ಡಾ. ಅಂಬೇಡ್ಕರರು ರಚಿಸಿದ ಸಂವಿಧಾನದ ಮೂಲ ಆಶಯಗಳನ್ನು ಸಾರ್ವಜನಿಕರಿಗೆ ಮನೆ ಮಾತಾಗಲಿ ಎಂದು ಜಾಗೃತಿ ಜಾಥಾ ಹಮ್ಮಿಕೊಂಡಿದ್ದು ಶ್ಲ್ಯಾಘನೀಯ. ಅದು ಒಂದೇ ಕೋಮಿಗೆ ಸೀಮಿತವಾಗದ ರೀತಿಯಲ್ಲಿ ಎಲ್ಲ ಭಾವನೆಗಳಿಗೆ ತಕ್ಕಂತೆ ಹಾಗೂ ಎಲ್ಲರ ಆಶೋತ್ತರಗಳಿಗೆ ಧಕ್ಕೆ ತರದಂತೆ ಮಠ-ಮಾನ್ಯಗಳಲ್ಲಿ ವೇದಿಕೆ ಕಾರ್ಯಕ್ರಮಗಳ ನಡೆಯಬೇಕು ಅಂದಾಗ ಮಾತ್ರ ಈ ಜಾಥಾಕ್ಕೆ ಮೆರುಗು ಬರುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂ.ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ಜಾಗೃತಿ ಜಾಥಾದಲ್ಲಿ ಸಂವಿಧಾನದ ಮೂಲ ಪೀಠಿಕೆ ಅನಾವರಣಗೊಳ್ಳಬೇಕೆ ವಿನಃ ಕಾಯಿ, ಕುಂಕುಮ ಭಂಡಾರಮಯವಾಗದಿರಲಿ ಹೀಗೆ ಮಾಡುವುದಾದರೆ ದಸಂಸ ಉಗ್ರವಾಗಿ ಖಂಡಿಸುತ್ತದೆ ಅದು ಡಾ. ಅಂಬೇಡ್ಕರ ಅವರ ತತ್ವ ಸಿದ್ದಾಂತಗಳು ಗಾಳಿಗೆ ತೂರಿದಂತಾಗುತ್ತದೆ ಕಾರಣ ಅದಕ್ಕೆ ಆಸ್ಪದ ಕೊಡಬೇಡಿ ಎಂದರು.
ರಾಜಶೇಖರ ಚೌರ ವಕೀಲರು, ಅಶೋಕ ಸುಲ್ಪಿ ಮಾತನಾಡಿ, ಡಾ. ಅಂಬೇಡ್ಕರ ಬರೆದ ಸಂವಿಧಾನದ ಮೂಲಕ ಎಲ್ಲವು ನಡೆಯುತ್ತಿದ್ದು ಆದರೆ ಸಂವಿದಾನಕ್ಕೆ ಅಪಮಾನ ಮತ್ತು ಅಪ್ರಚಾರಗೊಳ್ಳುತ್ತಿರುವ ಸನ್ನಿವೇಶಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾರಣ ಸಂವಿಧಾನದ ಮೂಲ ಸಿದ್ದಾಂತಗಳು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವ ಕಾರ್ಯಕ್ರಮವು ಅರ್ಥಪೂರ್ಣವಾಗಲಿ ಅದು ಎಲ್ಲ ಜನರ ಭಾವನೆಗಳಿಗೆ ತಕ್ಕಂತೆ ನಡೆಯಲಿ ಇದಕ್ಕೆ ಯಾವುದೇ ನಿರ್ಬಂಧ ಬೇಡ ಎಂದು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ಪರಶುರಾಮ ಕಾಂಬಳೆ, ರಣಧೀರ ಪಡೆ ರಾಜ್ಯ ಸಂಚಾಲಕ ಸಂತೋಷ ಮಣೀಗೆರಿ ಸೇರಿದಂತೆ ಕೆಲವು ಸಂಘಟನೆಗಳು ಸಹಮತ ಸೂಚಿಸಿದರು.
ಲಿಂಬೆ ಅಂಬಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಜಯಂತಿಗಳು ಆಯಾ ಜಾತಿಗಳಿಗೆ ಸೀಮಿತವಾಗಿದ್ದು ವಿಷಾದನೀಯ ಸಂಗತಿ ಅದಕ್ಕೆ ಅಧಿಕಾರಿ ಎಲ್ಲ ಮಹನೀಯರ ಜಯಂತಿ ಆಚರಣೆಯಲ್ಲಿ ಎಲ್ಲ ಮುಖಂಡರಿಗೂ ಆವ್ಹಾನ ನೀಡಬೇಕು ಅಲ್ಲದೆ ಡಾ ಅಂಬೇಡ್ಕರರು ದೀನ ದಲಿತರಿಗೆ ಸಂವಿಧಾನ ಬರೆದಿಲ್ಲ ಎಲ್ಲ ಸಮ ಸಮ ಸಮಾಜಗಳ ನಿರ್ಮಾಣಕ್ಕೆ ಸಂವಿಧಾನ ರಚನೆಯಾಗಿದ್ದು ಅದು ಸರಿಯಾಗಿ ಪರಿಚಯವಾಗಿಲ್ಲ ಅದನ್ನು ತಿಳಿಸಿಕೊಡಬೇಕು ಎಂದು ರಾಜ್ಯ ಸರಕಾರ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡು ನಾವೆಲ್ಲ ಸ್ವಾಗತಿಸೋಣ ಅವರ ಆಶಯಗಳ ಜನರಿಗೆ ಮುಟ್ಟಿಸುವ ಕಾರ್ಯದಲ್ಲಿ ನಾವು ನಿವೆಲ್ಲ ತೊಡಗೊಣ ಎಂದರು.
ತಾಪಂ ನೋಡಲ್ ಅಧಿಕಾರಿ ನಿತ್ಯಾನಂದ ಯಲಗೋಡ ಇದ್ದರು. ಶಿರಸ್ತೆದಾರ ಜಿ.ಎಸ್.ರೋಡಗಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.