ಕನ್ನಡ ಪರಂಪರೆಯಲ್ಲಿ ಸಂವಿಧಾನದ ಆಶಯ

Must Read

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಅಭಿಮತ

ನಮ್ಮ ಕನ್ನಡ ಪರಂಪರೆಯಲ್ಲಿ ಭಾರತ ಸಂವಿಧಾನದ ಮಹತ್ತರ ಆಶಯಗಳನ್ನು ಕಾಣಬಹುದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ “ಕನ್ನಡ ಹಬ್ಬ” ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತ ಸಂವಿಧಾನದ ಮೂಲಕ ನೀಡಿರುವ ಸಮಾನತೆಯ ಆಶಯವುಳ್ಳ ಅನೇಕ ಸಂಗತಿಗಳನ್ನು ಕನ್ನಡ ಪರಂಪರೆಯು ಕಟ್ಟಿಕೊಟ್ಟಿರುವದನ್ನು ಕಾಣಬಹುದಾಗಿದೆ. ನಾವು ಯಾವ ಜಾತಿಯಲ್ಲಿ ಹುಟ್ಟಿದರೇನು ಆದಿಕವಿ ಪಂಪನ ನುಡಿಯಂತೆ ಮಾನವೀಯ ಸದ್ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಮನುಷ್ಯಜಾತಿಯಾಗಬೇಕಿರುವುದು ಬಹುಮುಖ್ಯ. ನಿಜವಾದ ಸಿರಿಸಂಪತ್ತು ಯಾವುದೆಂದರೆ, ಕವಿರಾಜಮಾರ್ಗದಲ್ಲಿ ತಿಳಿಸಿದಂತೆ ನೆರೆಹೊರೆಯವರ ಧರ್ಮ ಹಾಗೂ ವಿಚಾರಗಳನ್ನು ಸಹಿಸುವುದೇ ಆಗಿದೆ. ನಮ್ಮ ನಾಡಿನ ಚರಿತ್ರೆಯಲ್ಲಿ ಆಗಿಹೋಗಿರುವ ಇಂತಹ ಸಂಗತಿಗಳನ್ನು ವರ್ತಮಾನ ಹಾಗೂ ಭವಿಷ್ಯದ ನೆಮ್ಮದಿಗಾಗಿ ಅರಿಯಬೇಕಾಗಿದೆ ಎಂದರು.

ಕನ್ನಡ ಎಂದರೆ ಸ್ವಾತಂತ್ರ್ಯ, ಕನ್ನಡ ಎಂದರೆ ಸಮಾನತೆ, ಕನ್ನಡ ಎಂದರೆ ಸೋದರತೆ, ಕನ್ನಡ ಎಂದರೆ ಸಂವಿಧಾನ, ಕನ್ನಡ ಎಂದರೆ ನೆಮ್ಮದಿ, ಕನ್ನಡ ಎಂದರೆ ಪ್ರಜಾಪ್ರಭುತ್ವ. ಹೀಗಾಗಿ ಯಾರು ಕನ್ನಡವನ್ನು ಪ್ರೀತಿ, ಗೌರವ, ಕಾಳಜಿಗಳಿಂದ ಕಾಣುತ್ತಾರೋ ಅವರು ಭಾರತ ಸಂವಿಧಾನವನ್ನೂ ಪ್ರಜಾಪ್ರಭುತ್ವವನ್ನು ಗೌರಿವಿಸಿದಂತೆಯೇ ಆಗುತ್ತದೆ ಎಂದು ಕರೆ ನೀಡಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಪ್ರಾತಃಸ್ಮರಣೀಯವಾದುದು. ನಮಗೇ ಗೊತ್ತಿಲ್ಲದ ನಮ್ಮ ಕನ್ನಡದ ಆದಿಕವಿ ಪಂಪ ಮೊದಲಾದ ಸಾಹಿತ್ಯ ಸಮೃದ್ಧಿಯನ್ನು ತಿಳಿಸಿಕೊಟ್ಟು ಲೋಕಮುಖಿಯಾಗಿಸಿದ್ದು ಈ ಮಹನೀಯರೇ. ಇವರಿಂದಲೇ ನಮ್ಮ ಕನ್ನಡ ಪ್ರಜ್ಞೆ ಮತ್ತು ಭಾರತ ಸ್ವಾತಂತ್ರ್ಯ ಪ್ರಜ್ಞೆ ಮೂಡಿದ್ದು. ಇವರು ನೀಡಿದ ಶಿಕ್ಷಣ ಕಾರಣದಿಂದಲೇ ಯಾವ ಭೇದಭಾವಗಳಿಲ್ಲದೆ ಎಲ್ಲರೂ ಓದುವಂತಾಗಿದ್ದು. ಭಾರತ ಕಂಡ ಅಪ್ರತಿಮ ಪ್ರಗತಿಪರ ರಾಜರಾದ ಶಾಹು ಮಹರಾಜ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಾರ್ಗದರ್ಶಕರಾಗಿ ಬೋಧಿಸಿದವರು ಫ್ರೇಜರ್ ಎಂಬ ಕ್ರೈಸ್ತಮೂಲದ ಮೇಷ್ಟ್ರು ಎಂದು ತಿಳಿಸಿದರು.

ಕಾಲೇಜಿನ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕರಾದ ಫಾದರ್ ಜೋಷಿ ಮ್ಯಾಥ್ಯು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ನಿಕಾಯ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸರ್ವರನ್ನೂ ಸ್ವಾಗತಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಚಂದ್ರಶೇಖರ್ ಎನ್. ಅವರು ಕಾರ್ಯಕ್ರಮವನ್ನು ಸಂಯೋಜಕರಾಗಿ ಸರ್ವರನ್ನೂ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ಡಾ.ಎಂ.ಭೈರಪ್ಪ, ಡಾ.ಪ್ರೇಮಕುಮಾರ್ ಕೆ., ಡಾ.ಕಿರಣಕುಮಾರ್ ಎಚ್.ಜೆ., ವಿದ್ಯಾರ್ಥಿ ಪ್ರತಿನಿಧಿಗಳಾದ ಗ್ರೀಷ್ಮ ಹಾಗೂ ಮಧು ಪಿ. ಅವರು ಉಪಸ್ಥಿತರಿದ್ದರು.

ಕನ್ನಡ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಹೆಜ್ಜೆನಾದ-ನೃತ್ಯ, ಸವಿಗಾನ-ಗಾಯನ, ಜ್ಞಾನಯಾನ-ಕ್ವಿಜ್, ನುಡಿರಂಗ-ಚರ್ಚಾ ಸ್ಪರ್ಧೆ, ಅಭಿವ್ಯಕ್ತಿ-ಕಿರುನಾಟಕ, ಅಂತರಂಗ-ಸೃಜನಶೀಲ ಬರಹ ಸ್ಪರ್ಧೆಗಳಲ್ಲಿ ವಿಜೇತರರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

- Advertisement -
- Advertisement -

Latest News

ಪ್ರೊ. ಭೀಮರಾಯ ಬಿರಾದಾರರಿಗೆ ಪಿಎಚ್ ಡಿ

ಸಿಂದಗಿ : ಪಟ್ಟಣದ ಪ್ರೊ. ಭೀಮರಾಯ ರುದ್ರಗೌಡ ಬಿರಾದಾರ ಇವರಿಗೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕರ್ನಾಟಕ ಸುರತ್ಕಲ್ ಮಂಗಳೂರು ವತಿಯಿಂದ ಪಿಎಚ್.ಡಿ ಪದವಿ ನೀಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group