ಬೆಳಗಾವಿ: ಇದೇ ದಿನಾಂಕ:27 ರಂದು ಬೆಳಗಾವಿಯ ಮಹಾಂತೇಶನಗರದ ಮುಖ್ಯರಸ್ತೆಯಲ್ಲಿ ನ್ಯಾಯವಾದಿ ಲೇಖಕ ಸುನೀಲ ಎಸ್. ಸಾಣಿಕೊಪ್ಪ ಅವರ “ನ್ಯಾಯವೆಂಬ ಬೆಳಕು” ಎಂಬ ಪರ್ಯಾಯ ವಿವಾದ ಇತ್ಯರ್ಥ ಕೇಂದ್ರ ಉದ್ಘಾಟನೆಗೊಂಡಿತು.
ಇದು ಕಕ್ಷಿದಾರರ ವಿವಾದಗಳನ್ನು ಮಧ್ಯಸ್ಥಿಕೆ, ಅನುಸಂಧಾನ, ಸಮಾಲೋಚನೆ ಮತ್ತು ಚೌಕಾಶಿ ಎಂಬ ವಿಧಾನಗಳ ಮೂಲಕ ನ್ಯಾಯಾಲಯದ ಹೊರಗೆ ಕಾನೂನಿನ ಚೌಕಟ್ಟಿನಲ್ಲಿ ಇತ್ಯರ್ಥಗೊಳಿಸುವ ಸಂಸ್ಥೆಯಾಗಿದ್ದು, ಕಡಿಮೆ ಖರ್ಚಿನಲ್ಲಿ ಶೀರ್ಘ ನ್ಯಾಯ ಒದಗಿಸುವ ಧ್ಯೇಯ ಹೊಂದಿದೆ.
ಮುಖ್ಯ ಅತಿಥಿಗಳಾಗಿ ಆಗಮಿದ್ದ ಬೆಳಗಾವಿಯ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ ಸೈಯದ ಅಜೀಜ್ ಅವರು ಮಾತನಾಡಿ, ಅಮೇರಿಕಾದಂತಹ ಮುಂದುವರೆದ ದೇಶಗಳಲ್ಲಿ ನ್ಯಾಯಾಲಯಗಳಿಗಿಂತ ಖಾಸಗೀ ನ್ಯಾಯ ಇತ್ಯರ್ಥ ಸಂಸ್ಥೆಗಳೇ ಹೆಚ್ಚು ಪ್ರಭಾವಶಾಲಿಗಳಾಗಿದ್ದು, ಇವುಗಳ ಮೂಲಕವೇ ಹೆಚ್ಚಿನ ವಿವಾದಗಳು ಕೋರ್ಟಿನ ಹೊರಗೆ ಇತ್ಯರ್ಥಗೊಳ್ಳುತ್ತವೆ. ನಮ್ಮ ದೇಶದಲ್ಲಿ ದಿಲ್ಲಿ, ಮುಂಬೈ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಈ ಪರ್ಯಾಯ ವಿಧಾನಗಳು ಪ್ರಸಿದ್ಧಿ ಹೊಂದುತ್ತಿದ್ದು, ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡುತ್ತಿವೆ.
ಈ ರೀತಿ ಸಂಸ್ಥೆಯನ್ನು ಮೊಟ್ಟಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಸುನೀಲ ಸಾಣಿಕೊಪ್ಪ ಅವರು ಹುಟ್ಟುಹಾಕಿದ್ದು ಶ್ಲಾಘನೀಯ. ಈ ರೀತಿಯ ಸಂಸ್ಥೆಗಳು ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಹೆಚ್ಚೆಚ್ಚು ಸ್ಥಾಪನೆಯಾಗಬೇಕು ಅದಕ್ಕೆ ನ್ಯಾಯವಾದಿಗಳು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ವಿಶ್ರಾಂತ ನ್ಯಾಯಮೂರ್ತಿ ಅರವಿಂದ ಪಾಚ್ಚಾಪುರೆ ಅವರು ಈ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಪರ್ಯಾಯ ವಿಧಾನಗಳು ಭಾರತಕ್ಕೆ ಹೊಸದೇನು ಅಲ್ಲ. ಅವು ನಮ್ಮ ಪ್ರಾಚೀನ ನ್ಯಾಯದಾನ ಪದ್ಧತಿಗಳಾಗಿದ್ದು, ವಿದೇಶದಲ್ಲಿ ಅವುಗಳಿಗೆ ಮನ್ನಣೆ ದೊರಕಿ ಆಧುನೀಕರಣಗೊಂಡು ಭಾರತಕ್ಕೆ ಮರಳಿ ಬಂದಿವೆ. ಈ ಕುರಿತು 30 ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಕಾನೂನು ಮಾಡಲಾಗಿದ್ದು, ಜನರ ತಿಳಿವಳಿಕೆಯ ಕೊರತೆಯ ಕಾರಣ, ಈ ವಿಧಾನಗಳು ಬೆಳಕಿಗೆ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಾಚೀನ ಕಾಲದಲ್ಲಿ ಜನ ಗ್ರಾಮದ ಹಿರಿಯರ ಪಂಚಾಯತಿ ಕಟ್ಟೆಗೆ ಒಯ್ದು ಅಲ್ಲಿಯೇ ತಮ್ಮ ತಂಟೆ ತಕರಾರುಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಇಂದು ಜನ ಪ್ರತಿಯೊಂದಕ್ಕೂ ನ್ಯಾಯಾಲಯ ಕದ ತಟ್ಟುವ ಕಾರಣ, ನ್ಯಾಯಾಲಯದಲ್ಲಿ ಪ್ರಕರಣಗಳು ಹೆಚ್ಚಾಗಿ ಬಾಕಿ ಉಳಿಯುತ್ತಿವೆ. ಈಗಿರುವ ಪ್ರಕರಣಗಳನ್ನು ಮುಗಿಸಲು ದಶಕಗಳೇ ಬೇಕಾಗುತ್ತದೆ. ಆದ್ದರಿಂದ ಜನತೆ ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಈ ಕಾನೂನುಬದ್ಧ ಪರ್ಯಾಯ ವಿಧಾನಗಳ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಸ.ರಾ.ಸುಳಕೂಡೆ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಸಂಪತಕುಮಾರ ಮುಚಳಂಬಿ, ಸಂಪಾದಕರು, ಹಸಿರುಕ್ರಾಂತಿ ದಿನಪತ್ರಿಕೆ ಅವರು ಅತಿಥಿಗಳಾಗಿ ಆಗಮಿಸಿದ್ದರು.
ಸಭೆಯಲ್ಲಿ ಸುರೇಶ ಹಂಜಿ, ಬಿ.ಐ. ಪಟ್ಟೇದ, ಎಮ್.ಬಿ. ಪಾಟೀಲ, ಶಿವಾನಂದ ಬಣಕಾರ, ಶ್ರೀಮತಿ.ಎಮ್.ಏ. ದೇಸಾಯಿ, ಸುವರ್ಣ ದೇವರಮನಿ ಹಾಗೂ ಅನೇಕ ನ್ಯಾಯವಾದಿಗಳು, ಕಾನೂನು ವಿದ್ಯಾರ್ಥಿಗಳು, ಕಕ್ಷೀದಾರರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಎ.ಡಿ. ಇಟಗಿ ಅವರು ಸ್ವಾಗತ ಭಾಷಣ ಮಾಡಿದರು.
ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟೀ ಸುನೀಲ ಸಾಣಿಕೊಪ್ಪ ತಾವು ಸಂಸ್ಥೆ ಹುಟ್ಟುಹಾಕಿದ ಪ್ರೇರಣೆ ಮತ್ತು ಹಿನ್ನೆಲೆಯ ಕುರಿತು ಮಾತನಾಡಿ, ವಂದನಾರ್ಪನೆ ಸಲ್ಲಿಸಿದರು.
ಸಾಹಿತಿ ಶ್ರೀ.ಎಮ್.ವಾಯ್.ಮೆಣಶಿನಕಾಯಿ ಅವರು ಕಾರ್ಯಕ್ರಮ ನಿರೂಪನೆ ಮಾಡಿದರು.