ಬಡವರಿಗೆ ಮನೆ ಜಗಳ ಬೀದಿಗೆ ಬಂತು
ಬೀದರ: ನಮ್ಮ ಮನೆ ಎಲ್ಲಿ ಎಂಬ ಬ್ಯಾನರ್ ಅಡಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನ ಈಶ್ವರ ಖಂಡ್ರೆ ಸಮರ ಆರಂಭಿಸುತ್ತಿದ್ದಂತೆಯೇ ಅವರ ಸಹೋದರ ಪ್ರಕಾಶ ಖಂಡ್ರೆ ಕೂಡ ಸಮರ ಆರಂಭಿಸಿದ್ದು ಗಡಿ ಜಿಲ್ಲೆ ಬೀದರ್ ನ ಭಾಲ್ಕಿ ಕ್ಷೇತ್ರದಲ್ಲಿ ಅಣ್ಣ ತಮ್ಮರ ನಡುವೆ ಮಹಾಯುದ್ಧ ನಡೆಯುತ್ತದೆ ಎಂದು ಹೇಳಬಹುದು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಜಕೀಯ ಪಕ್ಷಗಳ ನಡುವೆ ನಮ್ಮ ಮನೆಗಳು ಎಲ್ಲಿ ಎಂದು ಬ್ಯಾನರ್ ಕಿತ್ತಾಟ ಶುರು ಆಗಿದ್ದು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗುಡಿಸಲು ಮುಕ್ತ ಭಾಲ್ಕಿ ಎಂದು ಭಾಲ್ಕಿ ಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬಿಜೆಪಿ ಸರ್ಕಾರ ಬಡವರಿಗೆ ಮನೆ ಬಾಕಿ ಉಳಿದ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ಘಟಕ ಭಾಲ್ಕಿ ಕ್ಷೇತ್ರದ ಬಿಜೆಪಿ ಪಕ್ಷದ ಮುಖಂಡ ಡಿ ಕೆ ಸಿದ್ದರಾಮ ಹಾಗು ಪ್ರಕಾಶ್ ಖಂಡ್ರೆ ಪತ್ರಿಕಾಗೋಷ್ಠಿ ನಡೆಸಿದರು.ಈಶ್ವರ ಖಂಡ್ರೆ ಹಾಗು ಪ್ರಕಾಶ್ ಖಂಡ್ರೆ ಇಬ್ಬರು ಅಣ್ಣ ತಮ್ಮ ಆದರೂ ರಾಜಕೀಯದಲ್ಲಿ ಬದ್ಧ ವೈರಿಗಳು.
ಒಬ್ಬರನ್ನೊಬ್ಬರು ಪರಸ್ಪರ ಆರೋಪ ಮಾಡುತ್ತಾ ಬಂದಿದ್ದಾರೆ. ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಬಿಜೆಪಿ ಪಕ್ಷದ ನಾಯಕರು ತಿರುಗಿ ಬಿದ್ದಿದ್ದು ಈಶ್ವರ ಖಂಡ್ರೆ ವಿರುದ್ಧ ಬ್ಯಾನರ್ ಗಳನ್ನು ಅಳವಡಿಸಿ ಖಂಡ್ರೆ ಅವರೇ ಬಡವರಿಗೆ ಕೊಡುವ ಮನೆಗಳನ್ನು ತಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದರಿಂದ ರಾಜ್ಯ ಸರ್ಕಾರ ತನಿಖೆ ನಡೆಸಿತು ತನಿಖೆಯಲ್ಲಿ ಭ್ರಷ್ಟಾಚಾರ ಸಾಬೀತು ಆದಕಾರಣ ಹಲವು ಪಿಡಿಒ ಅಧಿಕಾರಿಗಳ ಅಮಾನತು ಆಗಿದ್ದ ಘಟನೆ ಕೂಡ ನಡೆಯಿತು.
ಈಗ ಮತ್ತೆ ಬಡವರ ಮನೆ ವಿಷಯ ಮುಂದಿಟ್ಟುಕೊಂಡು ಎರಡು ರಾಜಕೀಯ ಪಕ್ಷಗಳೂ ಆಟ ಶುರು ಮಾಡಿವೆ.
ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬ್ಯಾನರ್ ಗಳನ್ನು ಮಾಡಿಸಿ ಭಾಲ್ಕಿಯನ್ನು ಗುಡಿಸಲು ಮುಕ್ತ ಮಾಡುವೆ ಎಂದು ಬ್ಯಾನರ್ ಹಾಕಿದ್ದರೆ, ಇನ್ನೊಂದು ಕಡೆ ಬಿಜೆಪಿ ಪಕ್ಷದ ಕಡೆಯಿಂದ ಈಶ್ವರ ಖಂಡ್ರೆ ಬಡವರ ಮನೆಗಳನ್ನು ಶ್ರೀಮಂತ ವರ್ಗದವರಿಗೆ ಕೊಟ್ಟಿದ್ದಾರೆ, ಇಪ್ಪತ್ತು ಮೂವತ್ತು ಎಕರೆ ಹೊಲ ಗದ್ದೆಗಳು ಇದ್ದವರಿಗೆ ಮನೆ ಕೊಟ್ಟಿದ್ದಾರೆ ಎಂದು ಬಿಜೆಪಿ ಪಕ್ಷದ ಮುಖಂಡರು ಬ್ಯಾನರ್ ಹಾಕಿದ್ದಾರೆ.
ಇಬ್ಬರು ಅಣ್ಣ ತಮ್ಮಂದಿರ ಜಗಳದಲ್ಲಿ ಬಡವರಿಗೆ ಮನೆ ಕಟ್ಟಿ ಕೊಡುತ್ತಾರೋ ಅಥವಾ ಇದೇ ರೀತಿ ಜಗಳ ಕಾಯುತ್ತ ಕಾಲ ನೂಕುತ್ತಾರೋ ಎಂಬುದು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ