ಬೈಲಹೊಂಗಲ – ಗ್ರಾಮಗಳಲ್ಲಿ ಹರಡುತ್ತಿರುವ ಮಹಾಮಾರಿ ಕೊರೋನಾ ಹೆಮ್ಮಾರಿಯನ್ನು ತಡೆಗಟ್ಟಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ವಹಿಸಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಅವರು ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಬೈಲವಾಡ, ದೇವಲಾಪುರ, ಅಮಟೂರ, ಚಿವಟಗುಂಡಿ, ವಕ್ಕುಂದ, ಸಂಗೊಳ್ಳಿ ಹೊಳಿನಾಗಲಾಪುರ ಹಾಗೂ ಬೆಳವಡಿ ಗ್ರಾಮಗಳ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯಿತಿ ಸಿಬ್ಬಂದಿ, ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯೊರೊಂದಿಗೆ ಸಭೆ ನಡೆಸಿದ ಅವರು ಸಿಬ್ಬಂದಿಯವರಿಗೆ ಮಾಸ್ಕ, ಫೇಸ್ ಶೀಲ್ಡ್, ಸ್ಯಾನಿಟೈಜರ್, ಆಕ್ಸಿಮೀಟರ್ ವಿತರಿಸಿ ಮಾತನಾಡಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪಾಲಿಸಿ ಗ್ರಾಮಗಳಲ್ಲಿ ಕೊರೋನಾ ರೋಗ ಹರಡದಂತೆ ಜಾಗೃತಿ ವಹಿಸಬೇಕು ಹಾಗೂ ಜನಸಾಮಾನ್ಯರು ಕೊರೋನಾ ನಿಯಮಗಳನ್ನು ಪಾಲಿಸುವಂತೆ ಜನರಿಗೆ ತಿಳಿಸಿ ಹೇಳಬೇಕೆಂದು ಸಲಹೆ ನೀಡಿದರು.
ತಹಸೀಲ್ದಾರ್ ಬಸವರಾಜ ನಾಗರಾಳ ಹಾಗೂ ಆಯಾ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.