ವರ್ತಮಾನದ ವಿದ್ಯಮಾನಗಳತ್ತ ಹಾಸ್ಯದ ಹೊಂಬೆಳಕು ಚೆಲ್ಲುವ ಅಕ್ಷರಪ್ರಣತೆಗಳು. ಇಲ್ಲಿ ವಿನೋದವಿದೆ, ವಾಸ್ತವವಿದೆ, ಜೊತೆಗೆ ಸಣ್ಣದೊಂದು ವಿಷಾದವೂ ಇದೆ. ಸೌಲಭ್ಯಗಳಿರಲಿ, ಅವಕಾಶಗಳಿರಲಿ ಅದನ್ನು ಎಷ್ಟು ಸೂಕ್ತವಾಗಿ, ಸಮಯೋಚಿತವಾಗಿ, ಸಮರ್ಪಕವಾಗಿ, ಯಾರಿಗೂ ಹೊರೆಯಾಗದಂತೆ, ಎಲ್ಲೂ ಕೊರೆಯಾಗದಂತೆ ನಿಭಾಯಿಸುವ ಜವಾಬ್ಧಾರಿ, ಕೊಡುವವರ ಮೇಲಷ್ಟೇ ಅಲ್ಲ, ಬಳಸಿಕೊಳ್ಳುವವರ ಮೇಲೂ ಇರುತ್ತದೆ. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
1. ಸಾರಿಗೆ..!
ತೀರ್ಥಕ್ಷೇತ್ರಗಳಲ್ಲಿ
ಸಿಕ್ಕಾಪಟ್ಟೆ ಬೇಡಿಕೆ
ಅನ್ನ ಸಾಂಬಾರಿಗೆ
ಇದಕೆ ಕಾರಣ….
ಉಚಿತ ಸಾರಿಗೆ.!
2. ದಾಖಲೆ..!
ಸ್ತ್ರೀಶಕ್ತಿಯ ನಿದರ್ಶನ
ಎರಡೇ ವಾರಗಳಲ್ಲಿ
ನಾಲ್ಕು ಕೋಟಿಯಷ್ಟು
ಪ್ರಯಾಣದ ದಾಖಲು.!
ಜೊತೆ ಜೊತೆಗೆ ಅಲ್ಲಲ್ಲಿ
ಮೂರ್ನಾಲ್ಕು ನಿರ್ವಾಹಕರು
ದವಾಖಾನೆಗೆ ದಾಖಲು.!
3. ಪರಿಣಾಮ..!
ತುಂಬಿ ತುಳುಕುವ
ಮಹಿಳೆಯರಿಂದ
ಸರಕಾರಿ ಬಸ್ಸುಗಳಿಗೆ
ಬರುತಿದೆ ಏದುಸಿರು
ಖಾಲಿ ಹೊಡೆಯುತ
ಖಾಸಗಿ ಬಸ್ಸುಗಳು
ಬಿಡುತಿವೆ ನಿಟ್ಟುಸಿರು.!
4. ಪರಿಪಾಠ..!
ವಾರಾಂತ್ಯದಲ್ಲೀಗ..
ಹೆಂಡತಿ ತವರಿಗೆ
ಗಂಡ ಬಾರಿಗೆ
ಇದಕೆ ಪ್ರೇರಣ
ಉಚಿತ ಸಾರಿಗೆ.!
5. ಶಕ್ತಿ ಪ್ರದರ್ಶನ..!
ಕೆಲವೆಡೆ ಬಸ್ಸಿನ ಹಿಂಬಾಗಿಲನ್ನೇ
ಕಿತ್ತು ನಿರ್ವಾಹಕನಿಗೆ ತಪರಾಕಿ
ಹಲವೆಡೆ ಬ್ಯಾನೆಟ್ಟಿನ ಮೇಲೆಯೇ
ಏರಿ ಚಾಲಕನಿಗೂ ಧಮಕಿ.!
6. ವರ್ತಮಾನ.!
ಉಚಿತ ಸಾರಿಗೆಯ ಭರದಿಂದ
ಪುರುಶರಿಗೆ ಬಡಿದಿದೆ ಗರ
ಕೆಲವಷ್ಟು ಕಡೆ ಬಸ್ಸುಗಳಿಗೆ ಬರ
ಮತ್ತಷ್ಟು ಕಡೆ ಮಾನಿನಿಯರ
ಹಾಡು ನೃತ್ಯ ಆರ್ಭಟಗಳಿಂದ
ಚಾಲಕ-ನಿರ್ವಾಹಕರಿಗೆ ಚಳಿಜ್ವರ.!
ಎ.ಎನ್.ರಮೇಶ್.ಗುಬ್ಬಿ.