ಹದವರಿತು ಬೆದೆಯರಿತು ಬೀಜವನು ಬಿತ್ತುವೆನು ಸಜ್ಜನರ ಸದ್ಭಾವದೆದೆಗಳಲ್ಲಿ ಒಂದೆರಡು ಬೀಜಗಳು ಮೊಳೆತು ಬೆಳೆದರೆ ಸಾಕು ನನಗಷ್ಟೆ ಸಂತೋಷ – ಎಮ್ಮೆತಮ್ಮ ||೪||
ಶಬ್ಧಾರ್ಥ
ಹದ – ಸರಿಯಾಗಿ ಬಿತ್ತನೆಗೆ(ಭೂಮಿ)ಪಕ್ವಗೊಂಡ ರೀತಿ
ಅರಿತು- ತಿಳಿದು.ಬೆದೆ – ಸರಿಯಾದ ಬಿತ್ತುವ ಕಾಲ
ಸಜ್ಜನರು – ಒಳ್ಳೆಯ ನಡತೆಯುಳ್ಳವರು. ಎದೆ – ಹೃದಯ
ತಾತ್ಪರ್ಯ
ಹೊಲದಲ್ಲಿ ಬೀಜ ಬಿತ್ತಬೇಕಾದರೆ ಅದನ್ನು ಸರಿಯಾಗಿ
ಉಳುಮೆ ಮಾಡಿ ಮೃದುಮಾಡಿ ಮಳೆಗಾಲದಲ್ಲಿ ಸರಿಯಾದ
ಸಮಯಕ್ಕೆ ಬಿತ್ತಬೇಕಾಗುತ್ತದೆ. ಹಾಗೆ ಮೃದುಮಧುರವಾದ
ಉತ್ತಮರ ಹೃದಯ ಹೊಲದಲ್ಲಿ ಕಗ್ಗದ ಸದ್ಬೋಧೆ ಬೀಜಗಳನ್ನು ಬಿತ್ತುತ್ತೇನೆ. ಬಿತ್ತಿದ ಎಲ್ಲ ಬೀಜಗಳು
ಮೊಳಕೆ ಒಡೆದು ಬೆಳೆವುದಿಲ್ಲ. ಅದರಲ್ಲಿ ಕೆಲವೆ ಕೆಲವು
ಬೀಜಗಳು ಸಸಿಯೊಡೆಯುತ್ತವೆ. ಹಾಗೆ ಒಂದೆರಡು
ಕಗ್ಗದ ಬೀಜಗಳು ಅಂದರೆ ಪದ್ಯಗಳು ಸಜ್ಜನರ ಬಾಯಲ್ಲಿ ಹರಿದಾಡಿದರೆ ನನಗಷ್ಟೆ ಸಾಕು ಸಂತೋಷವಾಗುತ್ತದೆ.
ಒಂದಿಬ್ಬರು ಕಗ್ಗದ ಉಪಯೋಗ ಪಡೆದು ಸಾಧನೆ
ಮಾಡಿದರೆ ಸಾಕು ಕವಿಗಿನ್ನೇನು ಬೇಕು ಪದ್ಯ ಬರೆದುದು
ಸಾರ್ಥಕವಾಗುತ್ತದೆ.ಕವಿಗೆ ಹಣವಾಗಲಿ ಕೀರ್ತಿಯಾಗಲಿ
ಬೇಕಾಗಿಲ್ಲ.ನಾಡಿನಲ್ಲಿ ಉತ್ತಮ ನಾಗರಿಕರಾದರೆ ಸಾಕು
ಎಂಬುದು ಕವಿಯ ನಿಜವಾದ ಕಳಕಳಿ. ಕವಿಯ ಕೆಲಸ
ಶಿವೇತರವನ್ನು ಕ್ಷಯಿಸುವುದು.ಅಂದರೆ ಅಮಂಗಲಕರವಾದ
ಕೆಟ್ಟದ್ದನ್ನು ಅಳಿಸಿ ಲೋಕಕ್ಕೆ ಒಳಿತನ್ನುಂಟುಮಾಡುವುದು.
ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಸೌಖ್ಯ ಐಕ್ಯತೆಗಳನ್ನು ತರುವ ಜವಾಬ್ದಾರಿ ಕವಿಯ ಮೇಲಿರುತ್ತವೆ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ