ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ಹೊಸ ಅಧ್ಯಾಯವೊಂದಕ್ಕೆ ವೇದಿಕೆ ಸಜ್ಜಾಯಿತು. ಸರ್ಕಾರದಿಂದ ಅನುದಾನ ಪಡೆಯುವ ವಿವಿಧ ಅಕಾಡಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಸಭೆ ನಡೆದು ಪರಸ್ಪರರ ನಡುವೆ ಸ್ನೇಹ ವಿಶ್ವಾಸದಿಂದ ಕನ್ನಡ-ಕನ್ನಡಿಗ- ಕರ್ನಾಟಕದ ಕೆಲಸಗಳನ್ನು ಸ್ನೇಹ, ಸಮಾಲೋಚನೆ, ಸಮನ್ವಯತೆ ಹಾಗೂ ಪರಸ್ಪರ ನಂಬಿಕೆಯಿಂದ ನಡೆಸುವ ಮೂಲಕ ಭುವನೇಶ್ವರಿಯ ರಥವನ್ನು ಒಟ್ಟಾಗಿ ಎಳೆಯಲು ಸಂಕಲ್ಪಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರ್ಕಾರದಿಂದ ಅನುದಾನ ಪಡೆಯುವ ಒಟ್ಟು 59 ಸಂಸ್ಥೆಗಳಿವೆ. ಇವುಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ 12, ಸಂಸ್ಕೃತಿ, ಕಲೆ, ಜಾನಪದ, ಚಲನಚಿತ್ರಕ್ಕೆ ಸಂಬಂಧಿಸಿದಂತೆ 10 , ಟ್ರಸ್ಟ್ ಮತ್ತು ಪ್ರತಿಷ್ಟಾನಗಳು 25, ಆರು ರಂಗಾಯಣಗಳು, ಅನುದಾನ ಸಂಹಿತೆಗೆ ಒಳ ಪಟ್ಟ ಸಂಸ್ಥೆಗಳು ಕನ್ನಡ ಸಾಹಿತ್ಯ ಪರಿಷತ್ತೂ ಸೇರಿ ಐದು ಹಾಗು ಗಡಿ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಗಡಿ ಅಭಿವೃದ್ಧಿ ಪ್ರಾಧಿಕಾರವಿದೆ. ಇವುಗಳ ನಡುವೆ ಹೊಂದಾಣಿಕೆ ಹೆಚ್ಚಾಗಬೇಕಾದ ಅಗತ್ಯ ಈಗ ಉಂಟಾಗಿದ್ದು ಕನ್ನಡ ಸೇವೆಯಲ್ಲಿ ಸಹಯೋಗ ಹಾಗೂ ಸಮಾಲೋಚನೆಯ ಮಹತ್ವ ಈಗ ಹೆಚ್ಚಾಗಿದೆ, ಈ ಹಿನ್ನೆಲೆಯಲ್ಲಿ ಕನ್ನಡಿಗರೆಲ್ಲರ ಮಾತೃಸಂಸ್ಥೆಯಾಗಿ ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವನ್ನು ಮಾಡಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಅಲ್ಪ ಸಂಖ್ಯಾತ ಅಯೋಗದ ಅಧ್ಯಕ್ಷರಾದ ನಿಸಾರ್ ಅಹಮದ್ ಇಂತಹ ಪ್ರಯತ್ನದ ಮಹತ್ವವನ್ನು ಒತ್ತಿ ಹೇಳಿ ಇದರ ನೇತೃತ್ವವನ್ನು ವಹಿಸಿರುವ ಡಾ.ಮಹೇಶ ಜೋಶಿಯವರ ಸದಾಶಯವನ್ನು ಸ್ವಾಗತಿಸಿ ಮುಂದಿನ ಇಂತಹ ಸಭೆಯ ನೇತೃತ್ವವನ್ನು ವಹಿಸಲು ತಮ್ಮ ಅಯೋಗ ಸಿದ್ದವಿದೆ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ವಿವಿಧ ಅಕಾಡಮಿ ಮತ್ತು ಪ್ರಾಧಿಕಾರಗಳು ಇಂತಹ ಪ್ರಯತ್ನ ಕೈಗೊಂಡ ಡಾ.ಮಹೇಶ ಜೋಶಿಯವರ ದೂರದರ್ಶಿತ್ವವನ್ನು ಶ್ಲಾಘಿಸಿದರು. ಕನ್ನಡದ ಕೆಲಸದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಲು ತಾವೆಲ್ಲರೂ ಸಿದ್ದವೆಂದರು. ಅಕ್ಕರೆಯ ನಾಡು ಸಕ್ಕರೆಯ ಬೀಡು ಮಂಡ್ಯದಲ್ಲಿ ಆಯೋಜಿತವಾಗಿರುವ 87ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ವಹಿಸುವ ಹೊಣೆಗಾರಿಕೆಯನ್ನು ನಿರ್ವಹಿಸುವ ಭರವಸೆಯನ್ನು ನೀಡಿದರು. ಪುಸ್ತಕ ಪ್ರಕಟಣೆ ಮತ್ತು ಕಾರ್ಯಕ್ರಮ ಅಯೋಜನೆಯಲ್ಲಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಲು ಒಕ್ಕೊರಲಿನಿಂದ ನಿರ್ಧರಿಸಿದರು.
ಸಭೆಯು ಕನ್ನಡದ ಕೆಲಸಗಳನ್ನು ಮಾಡಲು ಎಲ್ಲರೂ ಉತ್ಸಾಹ ಮತ್ತು ಬದ್ದತೆಯನ್ನು ಹೊಂದಿರುವುದಕ್ಕೆ ನಿದರ್ಶನವಾಗಿದ್ದು ಇಂತಹ ಪ್ರಯತ್ನವನ್ನು ಸತತವಾಗಿ ಮುಂದುವರೆಸಿ ಕೊಂಡು ಹೋಗುವ ಭರವಸೆಯೊಂದಿಗೆ ಸಭೆ ಮುಕ್ತಾಯವಾಯಿತು. ಎಲ್ಲರ ಸಲಹೆಗಳನ್ನು ಅತ್ಯಂತ ಗೌರವದಿಂದ ಸ್ವೀಕರಿಸಿರುವಾಗಿ ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಲ್ಲವನ್ನೂ ಕ್ರೋಢೀಕರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತ ರಾವ್ ಪಾಟೀಲ, ಕುವೆಂಪು ಭಾಷಾ ಭಾರತಿ ಅಧ್ಯಕ್ಷರಾದ ಡಾ.ಚನ್ನಪ್ಪ ಕಟ್ಟಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ,ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದ ರಾಜ್, ಕರ್ನಾಟಕ ಶಿಲ್ಪ ಕಲಾ ಅಕಾಡಮಿಯ ಅಧ್ಯಕ್ಷರಾದ ಎಂ.ಸಿ.ರಮೇಶ್, ಕರ್ನಾಟಕ ಬಯಲಾಟ ಅಕಾಡಮಿ ಅಧ್ಯಕ್ಷರಾದ ಡಾ.ಕೆ.ಆರ್.ದುರ್ಗಾದಾಸ್, ಕರ್ನಾಟಕ ನಾಟಕ ಅಕಾಡಮಿ ಅಧ್ಯ ಕ್ಷರಾದ ಕೆ.ವಿ.ನಾಗರಾಜ ಮೂರ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷರಾದ ಆಯೇಷಾ ಖಾನಂ , ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಅಧ್ಯಕ್ಷರಾದ ಶುಭಾ ಧನಂಜಯ, ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯ ಕ್ಷರಾದ ಸಾಧು ಕೋಕಿಲ, ಕರ್ನಾಟಕ ಉರ್ದು ಅಕಾಡಮಿ ಅಧ್ಯಕಕ್ಷರಾದ ಮಹಮದ್ ಆಲಿ ಖಾಜಿ, ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿ ಅಧ್ಯಕ್ಷರಾದ ಡಾ.ಎ.ಆರ್.ಗೋವಿಂದ ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಸಭೆಯಲ್ಲಿ ಭಾಗವಹಿಸಿದ್ದರು.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು